ಪ್ರವೀಣ್‌ ಅವ್ಯೂಕ್‌ ನಿರ್ದೇಶನದ ‘ಹಿರಣ್ಯ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಬಿಚ್ಚುಗತ್ತಿ’ ಸಿನಿಮಾ ಖ್ಯಾತಿಯ ರಾಜವರ್ಧನ್‌ ನಟನೆಯ ‘ಹಿರಣ್ಯ’ ಸಿನಿಮಾ ಇದೇ ಜುಲೈ 19ಕ್ಕೆ ತೆರೆಕಾಣಲಿದೆ.

‘ಬಿಚ್ಚುಗತ್ತಿ’ ಸಿನಿಮಾ ಮೂಲಕ ಭರವಸೆ ಮೂಡಿಸಿದ ರಾಜವರ್ಧನ್‌ ಇದೀಗ ‘ಹಿರಣ್ಯ’ ಚಿತ್ರದೊಂದಿಗೆ ತೆರೆಗೆ ಮರಳಲಿದ್ದಾರೆ. ಮೊನ್ನೆ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ ಮತ್ತು ನಟಿ ರಾಗಿಣಿ ದ್ವಿವೇದಿ ಅತಿಥಿಗಳಾಗಿ ಪಾಲ್ಗೊಂಡು ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಹಿರಣ್ಯ’ ಸಿನಿಮಾ ಮತ್ತು ಹೀರೋ ರಾಜವರ್ಧನ್‌ ಕುರಿತಾಗಿ ಮಾತನಾಡಿದ ಡಾಲಿ ಧನಂಜಯ, ‘ರಾಜವರ್ಧನ್ ನನಗೆ 10 ವರ್ಷದಿಂದ ಪರಿಚಯ. ಹತ್ತು ವರ್ಷಗಳ ಹಿಂದೆ ಇಬ್ಬರೂ ಸಿನಿಮಾವೊಂದಕ್ಕೆ ಫೋಟೋಶೂಟ್ ಮಾಡಿಸಿದ್ದೆವು. ಆದರೆ ಆ ಸಿನಿಮಾ ಆಗಲಿಲ್ಲ. ಜೆಪಿ ನಗರ, ಜಯನಗರಕ್ಕೆ ಬಂದಾಗಲೆಲ್ಲಾ ಅವರು ಸಿಗುತ್ತಾರೆ. ಅಂದಿನಿಂದಲೂ ಅವರು ನಟನಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಒಳ್ಳೆ ಬರವಣಿಗೆ, ಸ್ಕ್ರೀಪ್ಟ್, ನಿರ್ದೇಶಕರು, ಅದನ್ನು ಅಷ್ಟೇ ಚೆನ್ನಾಗಿ ಪ್ರೀತಿಸುವ ನಿರ್ಮಾಪಕರು ಇದ್ದಾಗ ಮಾತ್ರ ಒಳ್ಳೆ ಸಿನಿಮಾ ಆಗುತ್ತದೆ. ನಿರ್ಮಾಪಕರು ತುಂಬಾ ಫ್ಯಾಷನೇಟೆಡ್ ಇದ್ದಾರೆ. ಚಿತ್ರತಂಡದ ಎಲ್ಲರಿಗೂ ಒಳ್ಳೇದಾಗಲಿ’ ಎಂದರು.

ನಟಿ ರಾಗಿಣಿ ಈ ಸಿನಿಮಾದ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಹೊಸಬರ ತಂಡದೊಂದಿಗೆ ಕೆಲಸ ಮಾಡಿರುವುದು ಅವರಿಗೆ ಖುಷಿ ಕೊಟ್ಟಿದೆ. ‘ಹೊಸ ತಂಡ ಉದ್ಯಮಕ್ಕೆ ಬರುತ್ತಿರುವುದು ಖುಷಿಯ ವಿಷಯ. ತಂತ್ರಜ್ಞರೆಲ್ಲರೂ ತುಂಬಾ ಟ್ಯಾಲೆಂಟೆಡ್‌ ಇದ್ದಾರೆ. ಹೊಸದಾಗಿ ಸಿನಿಮಾ ಮಾಡುವುದು ತುಂಬಾ ಚಾಲೆಂಜಿಂಗ್. ಬೇರೆ ಸಿನಿಮಾ ಇಂಡಸ್ಟ್ರಿಗಳಿಗೆ ಹೋಲಿಕೆ ಮಾಡಿದರೆ ನಮ್ಮ ಇಂಡಸ್ಟ್ರಿಯಲ್ಲಿ ಹೊಸಬರಿಗೆ ಸಾಕಷ್ಟು ಅವಕಾಶವಿದೆ. ಖಂಡಿತ ಈ ಚಿತ್ರತಂಡಕ್ಕೆ ಪ್ರೇಕ್ಷಕರಿಂದ ಪ್ರೀತಿ ಸಿಗುತ್ತದೆ. ಇಡೀ ತಂಡಕ್ಕೆ ಒಳ್ಳೇದಾಗಲಿ’ ಎನ್ನುವುದು ನಟಿ ರಾಗಿಣಿ ಅವರ ಮಾತು.

ಎತ್ತರದ ನಿಲುವಿನ ನಟ ರಾಜವರ್ಧನ್‌ ‘ಬಿಚ್ಚುಗತ್ತಿ’ ಚಿತ್ರದಲ್ಲಿ ಉತ್ತಮ ಸ್ಕ್ರೀನ್‌ ಪ್ರಸೆನ್ಸ್‌ನಿಂದ ಗಮನ ಸೆಳೆದಿದ್ದರು. ಈಗ ‘ಹಿರಣ್ಯ’ ಚಿತ್ರದ ಬಗ್ಗೆ ಅವರು ಸಹಜವಾಗಿಯೇ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ಅವರು, ‘ಶಿವಣ್ಣ ಟ್ರೇಲರ್ ನೋಡಿ ಇಷ್ಟಪಟ್ಟು ಮನೆಗೆ ಕರೆಸಿ ಇಡೀ ತಂಡಕ್ಕೆ ಒಳ್ಳೆ ಉಪಚಾರ ಮಾಡಿದ್ದು ಖುಷಿಯಾಯ್ತು. ಹಿರಣ್ಯ ಒಳ್ಳೇ ಸ್ಟೋರಿ ಲೈನ್. ನಾನು ಅದನ್ನು ನಂಬಿದೆ. ಒಳ್ಳೆ ಸಿನಿಮಾ ಆಗಿದೆ. ಸಿನಿಮಾಗೆ ಒಳ್ಳೇ ಟೈಟಲ್ ಬೇಕಿತ್ತು. ಅದು ಧನು ಬಳಿ ಇತ್ತು. ಅವರು ಅದನ್ನು ಕೇಳಿದ ತಕ್ಷಣ ಕೊಟ್ಟರು. ಎಲ್ಲೂ ಏನೂ ಮೋಸವಾಗದೆ ಸಿನಿಮಾ ಮಾಡಿದ್ದೇವೆ. ನಮ್ಮ ನಿರ್ಮಾಪಕರು ವಿಜಿ ನಾನು ತುಂಬಾ ಕಿತ್ತಾಡಿದ್ದೇವೆ. ಪ್ರೊಡ್ಯೂಸರ್ ತುಂಬಾ ಕನಸು ಇಟ್ಕೊಂಡು ಉದ್ಯಮಕ್ಕೆ ಬಂದಿದ್ದಾರೆ. ಅವರು ಸಿನಿಮಾಗೆ ಹಾಕಿದ ದುಡ್ಡು ವಾಪಸಾಗಬೇಕು. ನಿರ್ದೇಶಕರು ಸೇರಿದಂತೆ ತಂತ್ರಜ್ಞರೆಲ್ಲರೂ ಶ್ರಮವಹಿಸಿ ಮಾಡಿರುವ ಸಿನಿಮಾ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ಪ್ರವೀಣ್‌ ಅವ್ಯೂಕ್‌ ಅವರೇ ಸಿನಿಮಾಗೆ ಕತೆ ಮಾಡಿದ್ದಾರೆ. ರಾಜವರ್ಧನ್‌ಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿರುತ್ತಾರೆ. ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ್ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್‌ನಡಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತವಿದೆ. ಇದೇ ಜುಲೈ 19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಜಾಕ್ ಮಂಜು ಅವರು ತಮ್ಮ ಒಡೆತನದ ಶಾಲಿನಿ ಆರ್ಟ್ಸ್ ಮೂಲಕ ಸಿನಿಮಾ ವಿತರಣೆ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here