ಸಾಹಿತಿ, ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’ ಸಿನಿಮಾಗೆ ಸೆನ್ಸಾರ್‌ ಮಂಡಳಿ ‘ಯು’ ಸರ್ಟಿಫಿಕೇಟ್‌ ನೀಡಿದೆ. ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸುವ ಚಿತ್ರವಿದು. ವಿಜಯ ರಾಘವೇಂದ್ರ ಮತ್ತು ರಂಜಿನಿ ರಾಘವನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ತಮ್ಮದೇ ಕಾದಂಬರಿ ಆಧರಿಸಿ ನಿರ್ದೇಶಿಸಿರುವ ‘ಸ್ವಪ್ನ ಮಂಟಪ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಬರಗೂರು ಅವರೇ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದಾರೆ. ಬಾಬು ನಾಯ್ಕ್‌ ನಿರ್ಮಾಣದ ಸಿನಿಮಾಗೆ ಇತ್ತೀಚೆಗೆ ಸೆನ್ಸಾರ್‌ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್‌ ಸಿಕ್ಕಿದೆ. ಸಿನಿಮಾ ಕುರಿತು ಮಾತನಾಡುವ ಬರಗೂರು ರಾಮಚಂದ್ರಪ್ಪ ಅವರು, ‘ಈ ಚಿತ್ರವು ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸುವ ಕಥಾ ವಸ್ತುವನ್ನು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ಸ್ವಪ್ನ ಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ ಕಥಾ ನಾಯಕ ಮತ್ತು ನಾಯಕಿ ಒಂದಾಗಿ ಜನರನ್ನು ಸಂಘಟಿಸಿ ಪಾರಂಪರಿಕ ಚಾರಿತ್ರಿಕ ಮಂಟಪವನ್ನು ಉಳಿಸುತ್ತಾರೆ. ಸಾಂಕೇತಿಕವಾದ ಈ ಕಥಾವಸ್ತುವು ಪಾರಂಪರಿಕ ಸ್ಥಳಗಳ ರಕ್ಷಣೆ ವಿಷಯದಲ್ಲಿ ಪ್ರಾತಿನಿಧಿಕವೂ ಆಗುತ್ತದೆ’ ಎನ್ನುತ್ತಾರೆ.

ಚಿತ್ರದ ಮುಖ್ಯಭೂಮಿಕೆಯಲ್ಲಿ ವಿಜಯ ರಾಘವೇಂದ್ರ ಮತ್ತು ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇಬ್ಬರೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಸುಂದರರಾಜ್, ಶೋಭಾ ರಾಘವೇಂದ್ರ, ರಜಿನಿ, ಸುಂದರರಾಜ ಅರಸು, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ಶಿವಲಿಂಗ ಪ್ರಸಾದ್, ಭಾರತಿ ರಮೇಶ್, ಗುಂಡಿ ರಮೇಶ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆಯಿದೆ. ನಟರಾಜ್ ಶಿವು ಮತ್ತು ಪ್ರವೀಣ್, ಸಹ ನಿರ್ದೇಶಕರಾಗಿ, ಗೋಪಾಲಕೃಷ್ಣ ಸಹಾಯಕ ನಿರ್ದೇಶಕರಾಗಿ ಸಿನಿಮಾಗೆ ಕೆಲಸ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here