ವರನಟ ಡಾ ರಾಜಕುಮಾರ್‌ ಮೊಮ್ಮಗ ಯುವ ರಾಜಕುಮಾರ್‌ – ಶ್ರೀದೇವಿ ದಾಂಪತ್ಯ ಬದುಕಿನಲ್ಲಿ ಬಿರುಕುಂಟಾಗಿದೆ. ಯುವ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಕನ್ನಡ ಚಿತ್ರರಂಗ ಹಾಗೂ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ವರನಟ ಡಾ ರಾಜಕುಮಾರ್‌ ಮೊಮ್ಮಗ, ನಟ – ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಪುತ್ರ ಯುವರಾಜಕುಮಾರ್‌ ಮತ್ತು ಶ್ರೀದೇವಿ ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅಜ್ಜಿ ಸಲ್ಲಿಸಿದ್ದಾರೆ. ದೊಡ್ಮನೆ ಕುಟುಂಬದಿಂದ ಬಂದಿರುವ ಈ ಸುದ್ದಿ ಕನ್ನಡ ಚಿತ್ರರಂಗ ಹಾಗೂ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ. ಯುವ – ಶ್ರೀದೇವಿ ದಂಪತಿಯ ಈ ನಿರ್ಧಾರಕ್ಕೆ ಸ್ಪಷ್ಟವಾದ ಕಾರಣಗಳು ತಿಳಿದುಬಂದಿಲ್ಲ. ಮೊನ್ನೆ ಜೂನ್‌ 6ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಲವು ದಿನಗಳಿಂದ ಇಬ್ಬರೂ ಪತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಶ್ರೀದೇವಿ ಮೂಲತಃ ಮೈಸೂರಿನವರು. ಆರೇಳು ವರ್ಷಗಳಿಂದ ಪರಿಚಿತರಾಗಿದ್ದ ಯುವ ಮತ್ತು ಶ್ರೀದೇವಿ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ರಾಜಕುಮಾರ್‌ ಕುಟುಂಬದ ಸಿವಿಲ್‌ ಸರ್ವೀಸ್‌ ಅಕಾಡೆಮಿ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮಧ್ಯೆ ಕೆಲವು ತಿಂಗಳುಗಳಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಯುವ ರಾಜಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾ ‘ಯುವ’ ಪ್ರೊಮೋಷನ್‌ನಲ್ಲೂ ಶ್ರೀದೇವಿ ಇರಲಿಲ್ಲ. ಈಗ ವಿಚ್ಛೇದನದ ವಿಷಯ ಹೊರಬಿದ್ದಿದೆ.

ಯುವ ರಾಜಕುಮಾರ್‌ ಅವರು ‘ಯುವ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಅವರ ಚೊಚ್ಚಲ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಂತೋಷ್‌ ಆನಂದರಾಮ್‌ ನಿರ್ದೇಶನದ ಸಿನಿಮಾ ರಾಜ್ಯದ ಹಲವು ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತು. ಚೊಚ್ಚಲ ಸಿನಿಮಾದ ಯಶಸ್ಸಿನ ನಂತರ ಯುವ ಅವರು ಬೇರೆ ಸಿನಿಮಾ ಘೋಷಿಸಿಲ್ಲ. ಈ ಮಧ್ಯೆ ಡೈವೋರ್ಸ್‌ ವಿಷಯ ಪ್ರಸ್ತಾಪವಾಗಿದೆ. ರಾಜ್‌ ಕುಟುಂಬದ ಅಭಿಮಾನಿಗಳು ಈ ಬೆಳವಣಿಗೆ ಕುರಿತು ಬೇಸರದ ಮಾತುಗಳನ್ನಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here