ನಟ ರಮೇಶ್‌ ಅರವಿಂದ್‌ ‘Chef ಚಿದಂಬರ’ ಸಿನಿಮಾದ ಟ್ರೇಲರ್‌ ಅನಾವರಣಗೊಳಿಸಿದ್ದಾರೆ. ಈ ಡಾರ್ಕ್‌ ಕಾಮಿಡಿ ಸಿನಿಮಾ ಮೂಲಕ ಅನಿರುದ್ಧ ಹಿರಿತೆರೆಗೆ ಮರಳುತ್ತಿದ್ದಾರೆ. ರೇಚೆಲ್‌ ಡೇವಿಡ್‌ ಮತ್ತು ನಿಧಿ ಸುಬ್ಬಯ್ಯ ಚಿತ್ರದ ಇಬ್ಬರು ನಾಯಕಿಯರು. ಆನಂದರಾಜ್‌ ನಿರ್ದೇಶನದ ಸಿನಿಮಾ ಇದೇ ಜೂನ್‌ 14ರಂದು ತೆರೆಕಾಣುತ್ತಿದೆ.

‘ಜೊತೆ ಜೊತೆಯಲಿ’ ಸರಣಿಯೊಂದಿಗೆ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ನಟ ಅನಿರುದ್ಧ ವರ್ಷಗಳ ನಂತರ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಆನಂದರಾಜ್‌ ನಿರ್ದೇಶನದಲ್ಲಿ ಅವರು ನಟಿಸಿರುವ ‘Chef ಚಿದಂಬರ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ರಮೇಶ್‌ ಅರವಿಂದ್‌ ಅವರು ಟ್ರೇಲರ್‌ ಬಿಡುಗಡೆಗೊಳಿಸಿದ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇದೊಂದು ಡಾರ್ಕ್‌ – ಕಾಮಿಡಿ ಜಾನರ್‌ ಕತೆ ಎಂದು ನಿರ್ದೇಶಕ ಆನಂದರಾಜ್‌ ಸಿನಿಮಾದ ಮುಹೂರ್ತದ ಸಂದರ್ಭದಲ್ಲೇ ಹೇಳಿದ್ದರು. ಅವರ ಮಾತಿನಂತೆ ಟ್ರೇಲರ್‌ ಕೂಡ ಇದರ ಸುಳಿವು ನೀಡುತ್ತದೆ. ಇದೇ ಮೊದಲ ಬಾರಿಗೆ ಅನಿರುದ್ಧ್‌ ಇಂಥದ್ದೊಂದು ವಿಶಿಷ್ಟ ಕತೆಯಲ್ಲಿ ನಟಿಸಿದ್ದಾರೆ. ರೇಚೆಲ್‌ ಡೇವಿಡ್‌ ಮತ್ತು ನಿಧಿ ಸುಬ್ಬಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಶಿವಮಣಿ ವಿಶೇಷ ಪಾತ್ರದಲ್ಲಿ ಇದ್ದಾರೆ.

ಟ್ರೇಲರ್‌ ಬಿಡುಗಡೆಗೊಳಿಸಿ ಮಾತನಾಡಿದ ನಟ ರಮೇಶ್‌ ಅರವಿಂದ್‌, ‘ಅನಿರುದ್ಧ್‌ ನನ್ನ ನಿರ್ದೇಶನದ ‘ರಾಮ ಶ್ಯಾಮ ಭಾಮ’ ಸೇರಿದಂತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ನಟ. ಡಾರ್ಕ್ ಕಾಮಿಡಿ ಜಾನರ್‌ನ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರ ಹೆಚ್ಚಿಸಿದೆ’ ಎಂದಿದ್ದಾರೆ. ನಟ ಅನಿರುದ್ಧ್‌ ಸಿನಿಮಾ ಬಗ್ಗೆ ಮಾತನಾಡಿ, ‘ನಿರ್ಮಾಪಕಿ ರೂಪ ಅವರ ಪತಿ ಸರ್ವೋತಮ್ ಹಾಗೂ ನಾನು ಬಹಳ ವರ್ಷಗಳ ಸ್ನೇಹಿತರು. ಅವರು‌ ಚಿತ್ರ ಮಾಡೋಣ ಎಂದಾಗ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಆನಂದರಾಜ್ ಅವರು ಹೇಳಿದ ಈ ಕಥೆ ಇಷ್ಟವಾಯಿತು. ಇದೊಂದು ವಿಶೇಷವಾದ ಚಿತ್ರಕಥೆ’ ಎನ್ನುತ್ತಾರೆ. ಸಿನಿಮಾದ ಸ್ಕ್ರಿಪ್ಟ್‌ ಪೂಜೆ ಮೈಸೂರಿನಲ್ಲಿ ಮೇರುನಟ ವಿಷ್ಣುವರ್ಧನ್‌ ಸ್ಮಾರಕದ ಬಳಿ ನಡೆದಿತ್ತು. ನಟಿ ಭಾರತಿ ವಿಷ್ಣುವರ್ಧನ್ ಅವರು ಕ್ಲ್ಯಾಪ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದ್ದರು. ಕಿಚ್ಚ ಸುದೀಪ್ ಟೀಸರ್‌ಗೆ ದನಿ ನೀಡಿದ್ದರು.

‘ಚಿತ್ರತಂಡದ ಸಹಕಾರದಿಂದ ಕೇವಲ 29 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಅದರಲ್ಲಿ ಒಂದು ಹಾಡನ್ನು ಅನಿರುದ್ಧ್‌ ಅವರೇ ಹಾಡಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ಚಿತ್ರ ಪ್ರೇಕ್ಷಕರಿಗೂ ಪ್ರಿಯವಾಗಲಿದೆ’ ಎನ್ನುವುದು ನಿರ್ದೇಶಕ ಆನಂದರಾಜ್‌ ಮಾತು. ರಿತ್ವಿಕ್ ಮುರಳೀಧರ್ ಸಂಗೀತ, ಉದಯ್‌ ಲೀಲಾ ಛಾಯಾಗ್ರಾಹಣ, ವಿಜೇತ್ ಚಂದ್ರ ಸಂಕಲನ, ಗಣೇಶ್‌ ಪರಶುರಾಮ್‌ ಸಂಭಾಷಣೆ ಚಿತ್ರಕ್ಕಿದೆ. ಇದೇ ಜೂನ್‌ 14ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here