ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ಎಂಥಾ ಕಥೆ ಮಾರಾಯ’ ಚಿತ್ರ ನೇರವಾಗಿ OTTಯಲ್ಲಿ ಬಿಡುಗಡೆಯಾಗಿದೆ. ಬೆಂಗಳೂರಿನ ಪ್ರಸಕ್ತ ನೀರಿನ ಸಮಸ್ಯೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಬೆಳಕು ಚೆಲ್ಲುತ್ತದೆ. ಶರಾವತಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ವಿಚಾರವೂ ಇಲ್ಲಿ ಪ್ರಸ್ತಾಪವಾಗುತ್ತದೆ.

ಪ್ರಾಕೃತಿಕ ವಿದ್ಯಮಾನಗಳ ಸುತ್ತ ಹೆಣೆದಿರುವ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ಎಂಥಾ ಕಥೆ ಮಾರಾಯ’ ಚಿತ್ರ ನೇರವಾಗಿ OTTಯಲ್ಲಿ ಬಿಡುಗಡೆಯಾಗಿದೆ. ಏರ್‌ಟೆಲ್‌ ಎಕ್ಸ್‌ಟ್ರೀಮ್‌, ಹಂಗಾಮ ಪ್ಲೇ, ಓಟಿಟಿ ಪ್ಲೇ OTT ವೇದಿಕೆಗಳಲ್ಲಿ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ. ‘ಚೆನ್ನೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ ಪ್ರದರ್ಶನವಾಗಿದ್ದ ಚಿತ್ರ ಬೆಂಗಳೂರಿನ ಪ್ರಸಕ್ತ ನೀರಿನ ಸಮಸ್ಯೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಬೆಳಕು ಚೆಲ್ಲುತ್ತದೆ. ಶರಾವತಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ವಿಚಾರವೂ ಇಲ್ಲಿ ಪ್ರಸ್ತಾಪವಾಗುತ್ತದೆ. ‘ಶರಾವತಿ ನದಿಯ ಸಂತ್ರಸ್ತರ ಬದುಕಲ್ಲಿ ಲಿಂಗನಮಕ್ಕಿ ಡ್ಯಾಂ ನಿರ್ಮಾಣದಿಂದ ಹಿಡಿದು ಇಲ್ಲಿಯವರೆಗಿನ ಆಗುಹೋಗುಗಳು ಚಿತ್ರದಲ್ಲಿ ಕಾಣಿಸುತ್ತವೆ. ಒಂದು ನದಿ, ಒಂದು ಕುಟುಂಬ ಹಾಗೂ ಹಲವು ಯೋಜನೆಗಳ ಸಾಲು ಆ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಜೊತೆಗೆ ಪಶ್ಚಿಮ ಘಟ್ಟಗಳ ಅವಶ್ಯಕತೆ ಹಾಗೂ ನದಿಮೂಲಗಳನ್ನು ಉಳಿಸಿಕೊಳ್ಳುವುದರ ತುರ್ತು ಪ್ರಾಮುಖ್ಯತೆಗೆ ಚಿತ್ರ ಕನ್ನಡಿ ಹಿಡಿಯುತ್ತದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ.

​ನೀರಿನ ಪ್ರಮುಖ ಮೂಲ ಕಾಡು. ಆದರೆ ಕುಡಿಯುವ ನೀರಿಗಾಗಿ ಪಶ್ಚಿಮ ಘಟ್ಟದಂತಹ ಕಾಡುಗಳನ್ನೇ ನಾಶ ಮಾಡಿ ನೀರು ಹರಿಸುವ ಯೋಜನೆ ಹಾಗೂ ಇಂತಹ ಅನೇಕ ಯೋಜನೆಗಳನ್ನು ಪಶ್ಚಿಮ ಘಟ್ಟದ ಗರ್ಭದಲ್ಲಿ ಮಾಡುವುದರಿಂದ ನಮ್ಮ ಮುಂದಿನ ಘೋರ ದಿನಗಳನ್ನ ನಾವೇ ಆಹ್ವಾನಿಸಿದಂತೆ ಎಂಬ ಸೂಕ್ಷ್ಮವಾದ ವಿಷಯವನ್ನು ಪಾತ್ರ ಮತ್ತು ಸನ್ನೀವೇಶಗಳ ಮೂಲಕ ಕಟ್ಟಿಕೊಟ್ಟಿರುವುದು ಚಿತ್ರದ ಪ್ರಮುಖ ಅಂಶ. ಜನರು ಚಿತ್ರವನ್ನು ವೀಕ್ಷಿಸಿ ಜಾಗತಿಕ ತಾಪಮಾನ ಮತ್ತು ನೀರಿನ ಮಹತ್ವದ ಬಗ್ಗೆ ಅರಿಯಬೇಕು ಎನ್ನುವುದು ಚಿತ್ರತಂಡದ ಆಶಯ. ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿಯವರೇ ಬರೆದಿರುವ ‘ಕಾಡಿನ ನೆಂಟರು’ ಕಥಾಸಂಕಲನ ಆಧರಿಸಿದ ಚಿತ್ರದಲ್ಲಿ ಸುಧೀರ್ ಎಸ್ ಜೆ, ವೇದಾಂತ್ ಸುಬ್ರಮಣ್ಯ, ಶ್ರೀಪ್ರಿಯ, ಅಶ್ವಿನ್ ಹಾಸನ್, ಕರಿಸುಬ್ಬು, ಕೇಶವ್ ಗುತ್ತಳಿಕೆ, ಸಮೀರ್ ನಗರದ್ ಮುಂತಾದವರು ನಟಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಮತ್ತು ಸುಧೀರ್ ಎಸ್ ಜೆ ಸಂಕಲನ ಚಿತ್ರಕ್ಕಿದೆ. ಸಂಚಲನ ಮೂವೀಸ್ ಬ್ಯಾನರ್ ಅಡಿಯಲ್ಲಿ ರಾಮಕೃಷ್ಣ ನಿಗಡೆ ಚಿತ್ರ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here