ಪ್ರವೀಣ್‌ ತೇಜ್‌ ಮತ್ತು ಅಂಜಲಿ ನಟಿಸಿರುವ ‘ಜಂಬೂ ಸರ್ಕಸ್‌’ ಸಿನಿಮಾದ ‘ಮನಸೋತೆ ಮನಸಾರೆ’ ಹಾಡು ಬಿಡುಗಡೆಯಾಗಿದೆ. ಕವಿರಾಜ್‌ ರಚನೆಯ ಈ ಹಾಡಿಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದು ನಕುಲ್‌ ಅಭಯಂಕರ್‌ ಹಾಡಿದ್ದಾರೆ.

ಎಂ ಡಿ ಶ್ರೀಧರ್‌ ನಿರ್ದೇಶನದ ‘ಜಂಬೂ ಸರ್ಕಸ್‌’ ಸಿನಿಮಾದ ‘ಮನಸೋತೆ ಮನಸಾರೆ’ ಹಾಡು ಬಿಡುಗಡೆಯಾಗಿದೆ. ಕವಿರಾಜ್‌ ರಚನೆಯ ಈ ಹಾಡಿಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದು ನಕುಲ್‌ ಅಭಯಂಕರ್‌ ಹಾಡಿದ್ದಾರೆ. ಇದೇ ವೇಳೆ ಚಿತ್ರದ ‘ಗ್ರಹಚಾರ..’ ಹಾಗೂ ‘ಗಾಂಚಲಿ ಗಂಗವ್ವ..’ ಹಾಡುಗಳೂ ಬಿಡುಗಡೆಯಾದವು. ಚಿತ್ರದ ಕತೆ ರೂಪುಗೊಂಡ ಬಗ್ಗೆ ಮಾತನಾಡಿದ ಕಾರ್ಯಕಾರಿ ನಿರ್ಮಾಪಕಿ ಸುಪ್ರೀತಾ ಶೆಟ್ಟಿ, ‘ಚಿತ್ರಕ್ಕೆ ಕಥಾ ಹಂದರ ಮೊದಲು ಬಂದಿದ್ದು ನಟ ಸುಂದರ್ ವೀಣಾ ಅವರಿಂದ. ಅಲ್ಲಿಂದ ನಾವೆಲ್ಲ ಕುಳಿತು ಅದನ್ನು ಪಸಂದಾಗಿ ಮನರಂಜನೆ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಹಾಗೆ ಚಿತ್ರಕಥೆ ಸಿದ್ಧಪಡಿಸಿದೆವು. ಎಂ ಡಿ ಶ್ರೀಧರ್ ಅವರಂತಹ ಅನುಭವಿ ನಿರ್ದೇಶಕರಿಂದ ಸಿನಿಮಾಗೆ ದೊಡ್ಡ ತೂಕ ಬಂದಿತು’ ಎಂದರು.

ವಾಸುಕಿ ವೈಭವ ಅವರ ಸುಶ್ರಾವ್ಯ ಸಂಗೀತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ಎಂ ಡಿ ಶ್ರೀಧರ್, ‘ಚಿತ್ರದ ನಾಯಕ ಪ್ರವೀಣ್‌ ತೇಜ್ ಮತ್ತು ನಾಯಕಿ ಅಂಜಲಿ ಪ್ರತಿಭಾವಂತ ಕಲಾವಿದರು. ಇಬ್ಬರಿಗೂ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ’ ಎಂದು ಭರವಸೆ ವ್ಯಕ್ತಪಡಿಸಿದರು. ನಾಯಕನಟ ಪ್ರವೀಣ್‌ ತೇಜ್‌, ‘ನಾನು ಇಂದು ಚಿತ್ರರಂಗದಲ್ಲಿ ಇರುವುದಕ್ಕೆ ನಿರ್ದೇಶಕ ಎಂ ಡಿ ಶ್ರೀಧರ್ ಕಾರಣ. ಅವರ ನಿರ್ದೇಶನದ ಸಿನಿಮಾ ಎಂದು ನಿರ್ಮಾಪಕ ಸುರೇಶ್ ಹೇಳಿದಾಗ ನಾನು ಕುಣಿದು ಕುಪ್ಪಳಿಸಿದೆ. ಅದಕ್ಕೆ ತಕ್ಕಂತೆ ಅವರು ನನಗೆ ವಿಭಿನ್ನವಾದ ಪಾತ್ರ ನಿರ್ವಹಣೆ ಸಹ ನೀಡಿ ಸಂತೋಷ ಇನ್ನೂ ಹೆಚ್ಚು ಮಾಡಿದ್ದಾರೆ’ ಎಂದರು. ಎಚ್ ಸಿ ಸುರೇಶ್ ನಿರ್ಮಾಣದ ಚಿತ್ರಕ್ಕೆ ಎ ವಿ ಕೃಷ್ಣಕುಮಾರ್ ಛಾಯಾಗ್ರಹಣ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಜ್ಞಾನೇಶ ಸಂಕಲನವಿದೆ. ಅವಿನಾಶ್, ಅಚ್ಯುತ್‌ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಲಕ್ಷ್ಮಿ ಸಿದ್ದಯ್ಯ, ನಯನ ಶರತ್, ಜಗ್ಗಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here