ಬಿಗ್‌ಬಾಸ್‌ ಖ್ಯಾತಿಯ ನಟಿ ದಿವ್ಯಾ ಉರುಡುಗ ಕಿರುತೆರೆಗೆ ಮರಳಿದ್ದಾರೆ. ಸಂಪಥ್ವಿ ನಿರ್ದೇಶನದ ‘ನಿನಗಾಗಿ’ ಸೀರಿಯಲ್‌ನಲ್ಲಿ ಅವರಿಗೆ ಸಿನಿಮಾ ನಟಿಯ ಪಾತ್ರ. ‘ಗಿಣಿರಾಮ’ ಸರಣಿ ಖ್ಯಾತಿಯ ರಿತ್ವಿಕ್‌ ಈ ಧಾರಾವಾಹಿ ನಾಯಕನಟ. ಇದೇ ಮೇ 27ರಿಂದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ‘ನಿನಗಾಗಿ’ ಮೂಡಿಬರಲಿದೆ.

‘ನನಗೆ ಹೆಮ್ಮೆ ಅನಿಸುತ್ತದೆ. ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಆಕೆಗೆ ಅಮ್ಮನ ಮಾತೇ ವೇದ ವಾಕ್ಯ.‌ ಆ ರೀತಿ ಪಾತ್ರ ನನ್ನದು. ಅವಳ ಸಿನಿಮಾ ಹಾಗೂ ವೈಯಕ್ತಿಕ ಬದುಕಿನ ಏರಿಳಿತಗಳೇ ಕಥಾವಸ್ತು’ ಎನ್ನುತ್ತಾರೆ ‘ನಿನಗಾಗಿ’ ಸೀರಿಯಲ್‌ ನಟಿ ದಿವ್ಯಾ ಉರುಡುಗ. ಈ ಸರಣಿಯೊಂದಿಗೆ ಅವರು ಕಿರುತೆರೆಗೆ ಮರಳುತ್ತಿದಾರೆ. ‘ನಿನಗಾಗಿ’ ಧಾರಾವಾಹಿಯ ಕಥೆ ಸೂಪರ್‌ಸ್ಟಾರ್ ರಚನಾ ಸುತ್ತ ಸುತ್ತಲಿದೆ. ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ರಚನಾಗೆ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಆಶೀರ್ವಾದ ಇದೆ. ಆದರೆ, ಅದೇಕೋ ರಚನಾಗೆ ಅಮ್ಮನ ಪ್ರೀತಿ ಇಲ್ಲ. ಸೂಪರ್ ಸ್ಟಾರ್ ಆಗಿದ್ದರೂ, ಅಮ್ಮನ ಪ್ರೀತಿ ಕಾಣದ ನಟಿಯ ಕತೆಯಿದು.

‘ಗಟ್ಟಿಮೇಳ’, ‘ಗಿಣಿರಾಮ’ ಸೀರಿಯಲ್‌ಗಳಲ್ಲಿ ಹೆಸರು ಮಾಡಿದ್ದ ರಿತ್ವಿಕ್‌ ‘ನಿನಗಾಗಿ’ ಹೀರೋ. ‘ಗಿಣಿರಾಮ ಸೀರಿಯಲ್‌ನಲ್ಲಿ ಶಿವರಾಂ ಆಗಿ ನಾನು ಮಾಸ್‌ ಲುಕ್‌ನಲ್ಲಿದ್ದೆ. ಆದರೆ ಆ ಮಾಸ್ ಲುಕ್‌ ಈ ಸೀರಿಯಲ್‌ನ ಜೀವನ್‌ನಲ್ಲಿ ಇರುವುದಿಲ್ಲ. ತುಂಬಾ ಸರಳ ವ್ಯಕ್ತಿ.‌ ಪುಟ್ಟ ಹೆಣ್ಣುಮಗುವಿನ ತಂದೆ. ದುಡ್ಡಿನ ಹಿಂದೆ ಹೋಗುವ ಮನುಷ್ಯ ಅಲ್ಲ. ಆ ರೀತಿ ಪಾತ್ರ ಮಾಡುತ್ತಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಟ ರಿತ್ವಿಕ್‌ ಮಠದ್‌. ಸೀರಿಯಲ್‌ ನಿರ್ದೇಶಿಸುತ್ತಿರುವ ಸಂಪಥ್ವಿ ಈ ಹಿಂದೆ ‘ನಮ್ಮನೆ ಯುವರಾಣಿ’ ಸರಣಿ ಸಾರಥ್ಯ ವಹಿಸಿದ್ದವರು. ‘ತುಂಬಾ ಎಕ್ಸೈಟ್ ಆಗಿದ್ದೇನೆ. ಯಾಕೆಂದರೆ ಹೆಮ್ಮೆಯಿಂದ ಹೇಳುತ್ತೇನೆ.‌ ಒಂದೊಳ್ಳೆ ಪ್ರಾಜೆಕ್ಟ್ ತೆಗೆದುಕೊಂಡು ಬಂದಿದ್ದೇನೆ. ಪ್ರೋಮೊ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಸೀರಿಯಲ್‌ನ ಪ್ರತೀ ಎಪಿಸೋಡ್‌ಗಳು ವೀಕ್ಷಕರನ್ನು ರಂಜಿಸಲಿವೆ’ ಎನ್ನುತ್ತಾರೆ ಸಂಪಥ್ವಿ. ಜೈ ಮಾತಾ ಕಂಬೈನ್ಸ್ ನಿರ್ಮಿಸುತ್ತಿರುವ ಈ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಿಯಾಂಕ ಕಾಮತ್, ಕಿಶನ್ ಬೆಳಗಲಿ, ವಿಜಯ್ ಕೌಂಡಿನ್ಯ, ಸಿರಿ ಸಿಂಚನ ಇದ್ದಾರೆ. ಧಾರಾವಾಹಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇದೇ ಮೇ 27ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಮೂಡಿಬರಲಿದೆ.

LEAVE A REPLY

Connect with

Please enter your comment!
Please enter your name here