‘ಕೆಜಿಎಫ್‌’ ಸರಣಿ ಸಿನಿಮಾದ ಮೂಲಕ ಬಾಲಿವುಡ್‌ ಮಂದಿಗೆ ರಾಕಿ ಭಾಯ್ ಆಗಿ ಪರಿಚಯವಾದವರು ಯಶ್‌. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಯಶ್‌, ‘ರಾಮಾಯಣ’ ಚಿತ್ರಕ್ಕೆ ಹಣ ಹೂಡುವ ಮೂಲಕ ಬಾಲಿವುಡ್‌ನಲ್ಲಿ ನಿರ್ಮಾಪಕನಾಗಿ ಬಡ್ತಿ ಪಡೆದಿದ್ದಾರೆ.

ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ರಾಮಾಯಣ’. ಮುಂಬೈನಲ್ಲಿ ಅದ್ಧೂರಿಯಾಗಿ ಹಾಕಿರುವ ಸೆಟ್‌ನಲ್ಲಿ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ‘ರಾಮಾಯಣ’ ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ, ದಕ್ಷಿಣ ಭಾರತದ ಚೆಲುವೆ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿದ್ದಾರೆ. ಹಿಟ್‌ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನ ಈ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಮಾಲೀಕತ್ವದ ‘ಪ್ರೈಮ್ ಫೋಕಸ್’ ಹಣ ಹೂಡಿತ್ತು. ಈಗ ಯಶ್‌ ಅವರು ನಮಿತ್‌ ಮಲ್ಹೋತ್ರಾ ಜತೆ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ರಾಮಾಯಣ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ತರಲು ಕೋಟಿ ಕೋಟಿ ಹಣ ಹೂಡಲಾಗುತ್ತಿದೆ. ಇಂತಹ ಬಿಗ್‌ ಬಜೆಟ್‌ ಸಿನಿಮಾಗೆ ಯಶ್‌ ಈಗ ‘ಮಾನ್​ಸ್ಟರ್ ಮೈಂಡ್ ಕ್ರಿಯೇಷನ್ಸ್‌’ ಮೂಲಕ ಈ ಚಿತ್ರದ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ.

ನಿರ್ಮಾಪಕರಾಗಿ ಬಿ-ಟೌನ್‌ಗೆ ಕಾಲಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟ ಯಶ್, ‘ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಕಾಟದಲ್ಲಿ ವಿಎಫ್‌ಸಿ ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ಬ ಭಾರತೀಯ. ನಾವು ಸಿನಿಮಾರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ‘ರಾಮಾಯಣ’ದ ವಿಷಯ ಪ್ರಸ್ತಾಪವಾಗಿತ್ತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ, ‘ರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದು, ನಾನು ಯಶ್ ಅವರಲ್ಲಿಯೂ ಇದೇ ಉತ್ಸಾಹವನ್ನು ಕಂಡಿದ್ದೇನೆ. ಅವರ ಪಯಣದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಪ್ಲಾನಿಂಗ್‌ ಅನ್ನು ಅರ್ಥ ಮಾಡಿಕೊಂಡು ‘ರಾಮಾಯಣ’ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆ’ ಎಂದಿದ್ದಾರೆ.

ಯಶ್, ‘ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್‌’ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಸೇರಿ ‘ಟಾಕ್ಸಿಕ್’ ಸಿನಿಮಾ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದೆ. ಇದೇ ಬ್ಯಾನರ್ ಅಡಿ ಈಗ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ. ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ‘ರಾಮಾಯಣ’ದಲ್ಲಿ ಯಶ್‌ ರಾವಣನಾಗಿ ನಟಿಸಲಿದ್ದಾರೆ ಅನ್ನೋ ಸುದ್ದಿ ಇನ್ನೂ ಹರಿದಾಡುತ್ತಲೇ ಇದೆ. ಆದರೆ, ಈ ಕುರಿತಾಗಿ ನಟ ಯಶ್‌ ಮಾತ್ರ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಹೀಗಾಗಿ ‘ರಾಮಾಯಣ’ ಸಿನಿಮಾದಲ್ಲಿ ಯಾರು ರಾವಣನ ಪಾತ್ರ ಮಾಡಲಿದ್ದಾರೆ ಅನ್ನೋದು ಇನ್ನೂ ಗುಟ್ಟಾಗಿಯೇ ಉಳಿದಿದೆ.

LEAVE A REPLY

Connect with

Please enter your comment!
Please enter your name here