ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಸಿನಿಮಾಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ. ಪೃಥ್ವಿ ಅಂಬಾರ್ ಮತ್ತು ಧನ್ಯ ರಾಮಕುಮಾರ್ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ ಚಿತ್ರವಿದು. ಸಾಯಿಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
‘ರಥಾವರ’ ಸಿನಿಮಾ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ನೂತನ ಸಿನಿಮಾ ‘ಚೌಕಿದಾರ್’ ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ. ಚಿತ್ರದ ನಿರ್ಮಾಪಕ ಕಲ್ಲಹಳ್ಳಿ ಚಂದ್ರಶೇಖರ್ ಕ್ಲ್ಯಾಪ್ ಮಾಡಿದರೆ, ಹಿರಿಯ ನಟ ಸಾಯಿಕುಮಾರ್ ಕ್ಯಾಮರಾ ಸ್ವಿಚ್ ಆನ್ ಮಾಡಿದರು. ಚಿತ್ರದ ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ನಟಿಸುತ್ತಿದ್ದಾರೆ. ಪೃಥ್ವಿ ಅಂಬಾರ್ ಮತ್ತು ಧನ್ಯ ರಾಮಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ‘ಇದು ನನ್ನ ಆರನೇ ಸಿನಿಮಾ. ಬಹುಭಾಷೆಗಳಲ್ಲಿ ತೆರೆಕಾಣಲಿದೆ. ನಟ ಪೃಥ್ವಿ ಇಲ್ಲಿಯವರೆಗೆ ಲವರ್ ಬಾಯ್ ಪಾತ್ರಗಳನ್ನೇ ಹೆಚ್ಚಾಗಿ ಮಾಡಿದ್ದಾರೆ. ಅವರನ್ನು ಬೇರೆ ರೀತಿ ತೋರಿಸಬೇಕೆಂದು, ಅವರಿಗೆ ಚಿತ್ರದ ಕತೆ ಹೇಳುತ್ತಿದ್ದಂತೆ ಓಕೆ ಎಂದರು. ಅವರು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ’ ಎನ್ನುತ್ತಾರೆ. ವರನಟ ಡಾ ರಾಜಕುಮಾರ್ ಮೊಮ್ಮಗಳು ಧನ್ಯ ರಾಮಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಇರಲಿದೆ.
‘ನಾನು ಈ ಪಾತ್ರ ಮಾಡಲು ಸಾಕಷ್ಟು ಎಫರ್ಟ್ ಹಾಕಬೇಕು ಎಂದು ಕತೆ ಕೇಳಿದಾಗ ಅನಿಸಿತು. ಪಾತ್ರದ ತಯಾರಿಗೆ ಟೈಮ್ ಬೇಕು ಎಂದೆ. ಅದರಂತೆ ಅವರು ನನಗೆ ಟೈಮ್ ಕೊಟ್ಟರು. ಅಲ್ಲಿಂದ ನನ್ನ ಜರ್ನೀ ಶುರುವಾಯ್ತು. ಫ್ಯಾಮಿಲಿ ಎಂಟರ್ಟೇನರ್ ಆಗಿಯೂ ಸಿನಿಮಾ ರಂಜಿಸಲಿದೆ. ಚೌಕಿದಾರ್ ಟೈಟಲ್ ಕೊಡುವ ವೈಬ್ಸ್ ಕಥೆಯಲ್ಲಿರುತ್ತದೆ’ ಎನ್ನವುದು ಹೀರೋ ಪೃಥ್ವಿಅವರ ಮಾತು. ನಟ ಸಾಯಿಕುಮಾರ್ ಮಾತನಾಡಿ, ‘ಮುಂದಿನ ವರ್ಷ ನಾನು ನಟನಾಗಿ 50 ವರ್ಷ ಕಂಪ್ಲೀಟ್ ಆಗುತ್ತಿದೆ. ಕನ್ನಡ ಸಿನಿಮಾ ಜರ್ನಿಗೂ 30 ವರ್ಷವಾಯ್ತು. ಪ್ರತಿ ದಿನ, ಪ್ರತಿ ಸಿನಿಮಾದ ಪಾತ್ರ ಚಾಲೆಂಜ್. ಚೌಕಿದಾರ್ ಎಮೋಷನಲ್ ಡ್ರಾಮಾ. ಪೃಥ್ವಿಗೆ ನಾನು ಚೌಕಿದಾರ್, ನನಗೆ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್. ಇದು ಒಂದೊಳ್ಳೆ ಪ್ರಯತ್ನ’ ಎಂದರು. ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.