ಮಹಾಕಾವ್ಯದ ಮಟ್ಟದಲ್ಲಿ ನಿರ್ವಹಣೆಗೊಂಡ ಮಾನವನ ರಾಗಭಾವ, ದ್ವೇಷಾಸೂಯೆ, ಕುಟುಂಬವನ್ನು ಕಟ್ಟುವ, ಒಡೆಯುವ, ಗ್ರಾಮವನ್ನು ಪುನರ್‌ ನಿರ್ಮಿಸುವ ಕ್ರಿಯೆ, ತಾಕಲಾಟಗಳು, ಗ್ರಾಮ ಮತ್ತು ಕುಟುಂಬದ ಬದುಕಿನ ಸಮಾನಾಂತರ ಎಳೆಗಳ ಸೂಕ್ಷ್ಮತೆ – ಇವೆಲ್ಲವೂ ‘ಬಂಗಾರದ ಮನುಷ್ಯ’ ಚಿತ್ರವನ್ನು ಅನನ್ಯ ಅನುಭವವಾಗಿಸಿದವು. ಸಿದ್ದಲಿಂಗಯ್ಯ ನಿರ್ದೇಶನ, ವರನಟ ಡಾ.ರಾಜ್‌ ಅಭಿನಯದ ಮಹೋನ್ನತ ಸಿನಿಮಾ ‘ಬಂಗಾರದ ಮನುಷ್ಯ’ ತೆರೆಕಂಡು ಇಂದಿಗೆ (ಮಾರ್ಚ್‌ 31) 50 ವರ್ಷ. ಈ ಸಿನಿಮಾ ಕುರಿತ ಹಿರಿಯ ಸಿನಿಮಾ ವಿಶ್ಲೇಷಕ ಡಾ.ಕೆ.ಪುಟ್ಟಸ್ವಾಮಿ ಅವರ ಬರಹ ಇಲ್ಲಿದೆ.

ಗಾಂಧಿಯುಗದ ಆದರ್ಶಗಳನ್ನು ಮೈಗೂಡಿಸಿಕೊಂಡ ಕತೆಯನ್ನೊಳಗೊಂಡು, ಆ ಕಾಲಕ್ಕೆ ಅದ್ಧೂರಿಯಾಗಿ ನಿರ್ಮಾಣಗೊಂಡ ಚಿತ್ರವು ಆ ಮಟ್ಟದ ಯಶಸ್ಸನ್ನು ಕಾಣುತ್ತದೆಂಬ ಕಲ್ಪನೆ ಯಾರಲ್ಲೂ ಇರಲಿಲ್ಲ. ಅಕ್ಕನ ಗಂಡನ ಸಾವಿನಿಂದ ಅನಾಥವಾದ ಅವಳ ಮನೆಯ ಪುನರ್‌ನಿರ್ಮಾಣಕ್ಕೆ ಅರ್ಪಿಸಿಕೊಳ್ಳುವ ವಿದ್ಯಾವಂತ ರಾಜೀವನ ಬದುಕಿನ ವೃತ್ತಾಂತವು ಪ್ರೇಕ್ಷಕರನ್ನು ಸೆರೆಹಿಡಿದ ಪರಿ ಇಂದಿಗೂ ಒಂದು ವಿಸ್ಮಯ. ಒಂದು ಜನಪ್ರಿಯ ಚಿತ್ರಕ್ಕೆ ಅಗತ್ಯವಾದ ಎಲ್ಲಾ ಪರಿಕರಗಳನ್ನು ಸಮ ಪ್ರಮಾಣದಲ್ಲಿ ತುಂಬಿದ್ದರು ನಿರ್ದೇಶಕ ಸಿದ್ದಲಿಂಗಯ್ಯ.

ಮಲೆನಾಡು ಮತ್ತು ಬಯಲುಸೀಮೆಯ ಹೊರಾಂಗಣ, ಬಣ್ಣದ ಛಾಯಾಗ್ರಹಣ, ಅರ್ಥಗರ್ಭಿತ ಸಾಹಿತ್ಯ, ಮಧುರವಾದ ಗೀತೆಗಳು, ಹದವರಿತ ಅಭಿನಯ, ಅಪೂರ್ವ ಸಂಯೋಜನೆಯ ಸಮೂಹ ನೃತ್ಯ, ಸರಸ, ವಿರಸ, ಹಾಸ್ಯ, ಹಗೆತನ, ಪ್ರೀತಿ, ಔದಾರ್ಯ – ಮಹಾಕಾವ್ಯದ ಮಟ್ಟದಲ್ಲಿ ನಿರ್ವಹಣೆಗೊಂಡ ಮಾನವನ ರಾಗಭಾವ, ದ್ವೇಷಾಸೂಯೆ, ಕುಟುಂಬವನ್ನು ಕಟ್ಟುವ, ಒಡೆಯುವ, ಗ್ರಾಮವನ್ನು ಪುನರ್‌ ನಿರ್ಮಿಸುವ ಕ್ರಿಯೆ, ತಾಕಲಾಟಗಳು, ಗ್ರಾಮ ಮತ್ತು ಕುಟುಂಬದ ಬದುಕಿನ ಸಮಾನಾಂತರ ಎಳೆಗಳ ಸೂಕ್ಷ್ಮತೆ – ಇವೆಲ್ಲವೂ ‘ಬಂಗಾರದ ಮನುಷ್ಯ’ ಚಿತ್ರವನ್ನು ಅನನ್ಯ ಅನುಭವವಾಗಿಸಿದವು.

ಚಿತ್ರದ ಆರಂಭದಿಂದಲೇ ನಿರ್ದೇಶಕರು ತಾವು ನಿರೂಪಣೆಯ ಕ್ರಮದಲ್ಲಿ ಹೊಸ ಜಾಡೊಂದನ್ನು ಹಿಡಿದಿರುವುದನ್ನು ಸ್ಪಷ್ಟಗೊಳಿಸುತ್ತಾರೆ. ಹಿನ್ನೆಲೆಯ ಸಂಗೀತವೇ ಇಲ್ಲದೆ ರೈಲಿನ ಚಲನೆಯ ವಿವಿಧ ಆಯಾಮಗಳನ್ನು ಸೆರೆಹಿಡಿದು ಶೀರ್ಷಿಕೆಗಳನ್ನು ತೋರಿಸುತ್ತಾ ಹೋಗುವ ನಿರ್ದೇಶಕರು ಒಂದು ಬಗೆಯ ಸಸ್ಪೆನ್ಸ್‌ ಸೃಷ್ಟಿಸುತ್ತಾರೆ. ರೈಲಿನ ಒಡಲಿನ ಬೆಂಕಿಗೆ ಸುರಿಯುವ ಕಲ್ಲಿದ್ದಲು, ಭುಸುಗುಡುವ ಆವಿ, ಕಿರ್ರೆನ್ನುವ ಗಾಲಿಗಳು, ಕಿವಿ ತೂತಾಗುವಂತೆ ಕೇಳಿಸುವ ಸೀಟಿಯ ಅಬ್ಬರದ ಬಳಿಕ ಹಸಿರ ಗದ್ದೆ ಬಯಲುಗಳಲ್ಲಿ ಮೆಲುದನಿಯಲ್ಲಿ ಮಾತನಾಡುವಂತೆ ಸಾಗುವ ರೈಲು ಕೊನೆಯಲ್ಲಿ ನಿಲ್ದಾಣದಲ್ಲಿ ನಿಂತಾಗ ನಾಯಕನನ್ನು ತೋರಿಸಲಾಗುತ್ತದೆ.

ಅದರ ನಂತರ ಮಲೆನಾಡ ಕಣಿವೆ ಹೊಲಗಳಲ್ಲಿ ಆರಂಭವಾಗುವ ‘ನಗು ನಗುತಾ ನಲಿ’ ಹಾಡು. ಅದೊಂದು ಜೀವ ವಿಕಾಸದ ಹಾಡು. ನಿಸರ್ಗದ ಭವ್ಯತೆಯ ನಂತರ ಬಾಲ್ಯಾವಸ್ಥೆ, ಶಿಕ್ಷಣಾವಸ್ಥೆ, ಮದುವೆ, ಮುಪ್ಪಿನ ವಿವಿಧ ಹಂತಗಳನ್ನು ತಟ್ಟುತ್ತಾ ಹಾಡು ಕೊನೆಗೊಳ್ಳುವುದು ನಾಯಕನ ಭಾವನ ಸಾವಿನಲ್ಲಿ! ಅನಾಥವಾದ ಸಂಸಾರದ ಹೊಣೆ ಹೊತ್ತ ರಾಜೀವ ನೆಲೆಯಾಗುವುದು ಹಳ್ಳಿಯಲ್ಲಿ. ತರ್ಕಕ್ಕೂ ಸಿಗದ ರೀತಿಯಲ್ಲಿ ಬೆಳವಣಿಗೆ ಕಾಣುವ ರಾಜೀವ ಕೊನೆಗೂ ಉದ್ಧರಿಸಿದವರಿಂದಲೇ ದೂರವಾಗುವ ದುರಂತವನ್ನು ತಂದುಕೊಳ್ಳುತ್ತಾನೆ. ಒಂದು ರೈಲಿನ ಯಾತ್ರೆಯ ಅಂತ್ಯದ ಜೊತೆಯಲ್ಲೇ ಮತ್ತೊಂದು ಜೀವನ ಯಾತ್ರೆಯ ಅಂತ್ಯವನ್ನು ತಂದು ನಿಲ್ಲಿಸಿರುವ ನಿರ್ದೇಶಕರು ಮತ್ತೆ ಹೊಸದಾಗಿ ಬದುಕನ್ನು ನಿರ್ಮಿಸುವ ವಿವಿಧ ಎಳೆಗಳನ್ನು ನೇಯುವ ಕುಸುರಿಯಲ್ಲಿ ತಲ್ಲೀನರಾಗುತ್ತಾರೆ.

ಇಲ್ಲಿ ಮಾನವ ಸಂಬಂಧಗಳಲ್ಲಿರುವ ಅಸೂಯೆ, ತಿರಸ್ಕಾರ, ಅಸಹಾಯಕತೆ, ಬತ್ತದ ಪ್ರೀತಿಯ ಒರತೆಗಳು, ಸಾಮಾಜಿಕ ಬದುಕಿನ ಸಂದಿಗ್ಧಗಳು, ಸಂಕಲ್ಪಗಳು, ಜವಾಬ್ದಾರಿಗಳು, ಸಮುದಾಯದ ಸ್ಥಿತ್ಯಂತರಗಳು, ವೈಯಕ್ತಿಕ ನೆಲೆಯಲ್ಲಿನ ಅನುರಾಗ, ದ್ವೇಷ, ವಿಷಮವಾಗುವ ಸಂಬಂಧಗಳು – ಹೀಗೆ ಅನೇಕ ಎಳೆಗಳನ್ನು ಸಮುಚಿತವಾಗಿ ಹೆಣೆಯುತ್ತಾ ಬದುಕಿನ ಎಲ್ಲಾ ಕ್ಷೇತ್ರಗಳನ್ನು ಸ್ಪರ್ಶಿಸುತ್ತಾರೆ. ಕೊನೆಗೆ ರಾಜೀವನ ‘ಸಂಧ್ಯಾಯಾತ್ರೆ’ಯ ಮೂಲಕ ಕೊನೆಗೊಳಿಸುತ್ತಾರೆ. ಆರಂಭದಲ್ಲಿ ಉಲ್ಲಾಸದ, ಸಂಭ್ರಮದ ಗೀತೆಯಾಗಿ ಬಂದ ‘ನಗು ನಗುತಾ ನಲಿ ನಲೀ’ ಶೋಕ ಸಂಗೀತವಾಗಿ ಆವರಿಸುತ್ತದೆ.

ಒಂದು ಸಂಸಾರದ ಮುಖ್ಯ ಕತೆಗೆ ಸಮಾನಾಂತರವಾಗಿ ಹಲವಾರು ಎಳೆಗಳನ್ನು ನೇಯುತ್ತಾ ಹಳ್ಳಿಯ ಸ್ಥಿತ್ಯಂತರಗಳ ಚಿತ್ರಗಳನ್ನು ಬಿಡಿಸುವ ನಿರ್ದೇಶಕರ ಜಾಣ್ಮೆ ಇಲ್ಲಿ ಎದ್ದು ಕಾಣುತ್ತದೆ. ರಾಚೂಟಪ್ಪನೆಂಬ ಹಳ್ಳಿಯ ಔದಾರ್ಯ ಪುರುಷ, ಜಮೀನು ಕಳೆದುಕೊಂಡ ಚನ್ನನ ಪರಿತಾಪ, ರಾಜೀವ – ಲಕ್ಷ್ಮಿಯರ ವಿಶಿಷ್ಟ ಪ್ರೇಮಕಥನ, ಲಕ್ಷ್ಮಿಯ ದುರಂತ ಸಾವು, ಇವರೆಲ್ಲರ ಜೊತೆಗೆ ಗ್ರಾಮ ಪುನರ್‌ನಿರ್ಮಾಣದ ಎಳೆಗಳೂ ಸೇರಿಕೊಂಡು ಸಮಗ್ರ ಸಂಸ್ಕೃತಿಯೊಂದು ಮಾತನಾಡುತ್ತಿರುವ ಅನುಭವವಾಗುತ್ತದೆ.

ಡಾ.ರಾಜಕುಮಾರ್‌, ಬಾಲಕೃಷ್ಣ, ಭಾರತಿ, ಲೋಕನಾಥ್‌, ದ್ವಾರಕೀಶ್‌, ಆರತಿ, ಆದವಾನಿ ಲಕ್ಷ್ಮೀದೇವಿ, ವಜ್ರಮುನಿ ಅವರ ಪಾತ್ರೋಚಿತ ಅಭಿನಯಕ್ಕೂ ಈ ಚಿತ್ರದ ಯಶಸ್ಸಿನಲ್ಲಿ ಪಾಲಿದೆ. ಡಾ.ರಾಜ್‌ ಅವರ ವೃತ್ತಿ ಬದುಕಿನ ಒಂದು ಹೊರಳು ಈ ಚಿತ್ರದಿಂದಲೇ ಆರಂಭವಾಯಿತೆನ್ನಬಹುದು. ಪ್ರೇಕ್ಷಕರ ಕಣ್ಣಿನಲ್ಲಿ ರಾಜ್‌ರವರ ಪಾತ್ರಗಳು ಆದರ್ಶದ, ತ್ಯಾಗದ, ಪ್ರೀತಿಯ ಅತಿಮಾನವ ಬಿಂಬಗಳಾಗಿ ಬೆಳೆಯಲು ಈ ಚಿತ್ರ ನಾಂದಿ ಹಾಡಿತು. ಟಿ.ಕೆ.ರಾಮರಾಯರ ಸಾಧಾರಣ ಕಾದಂಬರಿಯೊಂದನ್ನು ಆಧರಿಸಿದ ಚಿತ್ರಕತೆಗೆ ಸಿದ್ದಲಿಂಗಯ್ಯನವರು ಅನೇಕ ಮಾರ್ಪಾಡುಗಳನ್ನು ತಂದರು. ಹಾಗೆಯೇ ಗ್ರಾಮ ಪುನರ್‌ನಿರ್ಮಾಣ ಸಹ ಅವರ ಕಲ್ಪನೆಯ ಕೂಸು.

ನಿರ್ದೇಶಕ ಸಿದ್ದಲಿಂಗಯ್ಯ

LEAVE A REPLY

Connect with

Please enter your comment!
Please enter your name here