ಕನ್ನಡ – ತಮಿಳು ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು (ಜೂನ್‌ 2) ಸಭೆ ನಡೆಸಿದೆ. ನಾಳೆ ಮಂಗಳವಾರ (ಜೂನ್‌ 3) ಮಧ್ಯಾಹ್ನದವರೆಗೆ ಕಮಲ ಹಾಸನ್‌ ಅವರಿಗೆ ಕ್ಷಮೆ ಕೋರಲು ಗಡುವು ನೀಡಲಾಗಿದೆ. ಕ್ಷಮೆ ಕೋರದಿದ್ದರೆ ಅವರ ‘ಥಗ್‌ ಲೈಫ್‌’ ತಮಿಳು ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ.

‘ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ’ ಎನ್ನುವ ನಟ ಕಮಲ ಹಾಸನ್‌ ಹೇಳಿಕೆಗೆ ಕನ್ನಡಿಗರಿಂದ ಆಕ್ರೋಷ ವ್ಯಕ್ತವಾಗುತ್ತಿದೆ. ಈ ವಿವಾದ ಕಮಲ್‌ ಅಭಿನಯದ ‘ಥಗ್‌ ಲೈಫ್‌’ ತಮಿಳು ಚಿತ್ರಕ್ಕೆ ತಟ್ಟಿದೆ. ಅವರು ಕ್ಷಮೆ ಕೇಳದ ಹೊರತು ಚಿತ್ರವನ್ನು ಬಿಡುಗಡೆ ಮಾಡಕೂಡದು ಎಂದು ಕನ್ನಡ ಸಂಘಟನೆಗಳು ಆಗ್ರಹಿಸಿದ್ದವು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಇದಕ್ಕೆ ಬದ್ಧವಾಗಿತ್ತು. ಆದರೆ ಚಿತ್ರದ ವಿತರಕ ವೆಂಕಟೇಶ್‌ ಅವರು ಮನವಿಯೊಂದನ್ನು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಂದು (ಜೂನ್‌ 2) ಸಭೆ ಸೇರಿ ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡಿದೆ. ಕಮಲ ಹಾಸನ್‌ ಅವರಿಗೆ ಕ್ಷಮೆ ಕೋರಲು ನಾಳೆ (ಜೂನ್‌ 3) ಮಧ್ಯಾಹ್ನದವರೆಗೆ ಗಡುವು ನೀಡಲಾಗಿದೆ.

‘ಚಿತ್ರದ ವಿತರಕ ವೆಂಕಟೇಶ್‌ ಅವರು ಜೂನ್‌ 3ರ ಮಧ್ಯಾಹ್ನದವರೆಗೆ ಕ್ಷಮೆ ಕೋರಲು ಗಡುವು ನೀಡುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ಸಭೆ ಈ ನಿರ್ಣಯ ಕೈಗೊಂಡಿದೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ. ‘ಥಗ್‌ ಲೈಫ್‌’ ಸಿನಿಮಾದ ಬಿಡುಗಡೆ ದಿನಾಂಕ ಜೂನ್‌ 5 ಎಂದು ನಿಗದಿಯಾಗಿದೆ. ಕಮಲ ಹಾಸನ್‌ ಸದ್ಯ ಸಿನಿಮಾದ ಪ್ರಚಾರ ನಿಮಿತ್ತ ದುಬೈ ಪ್ರವಾಸದಲ್ಲಿದ್ದಾರೆ. ನಾಳೆ (ಜೂನ್‌ 3) ಅವರು ಚೆನ್ನೈಗೆ ಮರಳುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ನಿಲುವು ತೆಗೆದುಕೊಳ್ಳಲಿದ್ದಾರೆ ಎಂದು ನೋಡಬೇಕಿದೆ.

ನ್ಯಾಯಾಲಯದ ಮೊರೆ | ‘ನಾನು ಕ್ಷಮೆ ಕೇಳೋಲ್ಲ’ ಎಂದು ಕಮಲ ಹಾಸನ್‌ ಪಟ್ಟು ಹಿಡಿದಿರುವುದರಿಂದ ಸಮಸ್ಯೆ ಜಟಿಲವಾಗಿದೆ. ಕ್ಷಮೆ ಕೋರುವ ಬದಲಾಗಿ ಅವರು ರಾಜ್ಯದಲ್ಲಿ ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಚಿತ್ರ ಬಿಡುಗಡೆಗೆ ಸಿಬಿಎಫ್​ಸಿಯಿಂದ ಪ್ರಮಾಣಪತ್ರ ಪಡೆದಿದ್ದರೂ ವಾಣಿಜ್ಯ ಮಂಡಳಿ ಕಾನೂನುಬಾಹಿರವಾಗಿ ನಿರ್ಬಂಧ ವಿಧಿಸಿದೆ ಎಂದು ಆರೋಪಿಸಿದ್ದಾರೆ. ಚಿತ್ರಪ್ರದರ್ಶನ ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸುವ ಸಂಭವವೂ ಇಲ್ಲದಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗುತ್ತಿದ್ದು, ಪ್ರಕರಣ ಯಾವ ರೀತಿ ಇತ್ಯರ್ಥವಾಗಲಿದೆ ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here