ನಟ ದರ್ಶನ್‌ ನಿನ್ನೆ ಸಾಲುಮರದ ತಿಮ್ಮಕ್ಕ ಅವರನ್ನು ಭೇಟಿ ಮಾಡಿದ್ದಾರೆ. ಇದು ತಮ್ಮ ಬಹುದಿನಗಳ ಆಶಯ ಎಂದಿರುವ ಅವರು ತಿಮ್ಮಕ್ಕನವರ ಹಾದಿಯಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವುದಾಗಿ ಹೇಳುತ್ತಾರೆ.

ಸ್ಯಾಂಡಲ್‌ವುಡ್ ಸ್ಟಾರ್ ಹೀರೋ ದರ್ಶನ್ ನಿನ್ನೆ ಸಾಲುಮರದ ತಿಮ್ಮಕ್ಕ ಅವರನ್ನು ಭೇಟಿ ಮಾಡಿದ್ದು, ಈ ಫೋಟೋಗಳನ್ನು ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ಕೆಲ ದಿನಗಳ ಹಿಂದೆ ತಿಮ್ಮಕ್ಕ ಅವರು ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆಗ ದರ್ಶನ್‌ ಅವರು ಬೆಂಗಳೂರಿನಲ್ಲಿ ಇರಲಿಲ್ಲ. ಬೆಂಗಳೂರಿಗೆ ಮರಳಿದ ನಂತರ ಅವರನ್ನೊಮ್ಮೆ ಭೇಟಿ ಮಾಡಿ ಆರೋಗ್ಯ ವಿಚಾರಿಸಬೇಕು ಎಂದುಕೊಂಡಿದ್ದರಂತೆ. ನಿನ್ನೆ ತಿಮ್ಮಕ್ಕನವರನ್ನು ಭೇಟಿ ಮಾಡಿದರು. ಆತ್ಮೀಯವಾಗಿ ಮಾತನಾಡಿ ಆಶೀರ್ವಾದ ಪಡೆದರು” ಎಂದು ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಹೇಳುತ್ತಾರೆ.

ನಟ ದರ್ಶನ್‌ ಸಿನಿಮಾದ ಹೊರತಾಗಿ ವೈಯಕ್ತಿಕ ಆಸಕ್ತಿ, ಹವ್ಯಾಸಗಳಿಂದಲೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಕ್ಯಾಮರಾದೊಂದಿಗೆ ಕಾಡು, ಮೇಡು ಅಲೆಯುವುದು ಅವರ ನೆಚ್ಚಿನ ಹವ್ಯಾಸಗಳಲ್ಲೊಂದು. ಅವರು ರಾಜ್ಯ ಕೃಷಿ ಇಲಾಖೆ ರಾಯಭಾರಿಯೂ ಹೌದು. ಪರಿಸರಕ್ಕೆ ಸಂಬಂಧಿಸಿದಂತೆ ಕಾಳಜಿಯಿಂದ ಮತನಾಡುವ ಅವರು ಮೃಗಾಲಯದಲ್ಲಿ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಪ್ರಾಣಿ – ಪಕ್ಷಿಗಳನ್ನು ದತ್ತು ಪಡೆಯುವಂತೆ ತಮ್ಮ ಅಭಿಮಾನಿಗಳಿಗೂ ಸಲಹೆ, ಸೂಚನೆ ನೀಡುತ್ತಾರೆ. “ತಿಮ್ಮಕ್ಕನವರನ್ನು ಭೇಟಿ ಮಾಡಬೇಕೆಂದು ಹಲವು ದಿನಗಳಿಂದ ದರ್ಶನ್‌ ಹೇಳುತ್ತಿದ್ದರು. ಅದಕ್ಕಿಂದು ಸಮಯ ಕೂಡಿಬಂದಿದೆ. ಇದೊಂದು ಖಾಸಗಿ ಭೇಟಿಯಷ್ಟೆ. ತಿಮ್ಮಕ್ಕರ ಆಶೀರ್ವಾದ ಪಡೆದ ಅವರು, ಪರಿಸರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವುದಾಗಿ ಹೇಳಿದರು” ಎಂದು ಅವರೊಂದಿಗೆ ಬಂದ ಸ್ನೇಹಿತರು ತಿಳಿಸಿದ್ದಾರೆ. ಸದ್ಯ ದರ್ಶನ್‌ ಮೀಡಿಯಾ ಹೌಸ್ ಬ್ಯಾನರ್‌ನ ‘ಕ್ರಾಂತಿ’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಹರಿಕೃಷ್ಣ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here