‘777 ಚಾರ್ಲಿ’ ಪ್ಯಾನ್‌ ಇಂಡಿಯಾ ಹಿಟ್‌ ಸಿನಿಮಾ. ಪ್ರೇಕ್ಷಕರ ಕಣ್ಗಳಲ್ಲಿ ನೀರು ಹಾಕಿಸಿದ್ದ ನಿರ್ದೇಶಕ ಕಿರಣ್‌ರಾಜ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಮೊದಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಕಿರಣ್‌ ರಾಜ್‌ ಈಗ ಬಾಲಿವುಡ್‌ ನಟ ಜಾನ್‌ ಅಬ್ರಹಾಂ ಅವರನ್ನ ಭೇಟಿ ಮಾಡಿದ್ದಾರೆ. ಇವರ ಭೇಟಿ ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಶ್ವಾನವನ್ನೇ ಕಥಾ ವಸ್ತುವನ್ನಾಗಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ತೆರೆ ಕಂಡಿವೆ. ಆದರೆ, ಯುವ ನಿರ್ದೇಶಕ ಕಿರಣ್‌ ರಾಜ್‌ ನಿರ್ದೇಶನದಲ್ಲಿ ಮೂಡಿಬಂದ ‘777 ಚಾರ್ಲಿ’ ಸಿನಿಪ್ರಿಯರ ಮನಸ್ಸಿನಲ್ಲಿ ಒಂದು ವಿಶೇಷ ಸ್ಥಾನವನ್ನೇ ಪಡೆದುಕೊಂಡಿದೆ. ರಕ್ಷಿತ್‌ ಶೆಟ್ಟಿ ಹಾಗೂ ಚಾರ್ಲಿ ಕಾಂಬಿನೇಷನ್‌ ಚಿತ್ರಮಂದಿರಕ್ಕೆ ಬಂದವರ ಕಣ್ಣಲ್ಲಿ ನೀರು ತರಿಸಿತ್ತು. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ತೆರೆಕಂಡಿದ್ದ ಈ ಸಿನಿಮಾಗೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಚೊಚ್ಚಲ ನಿರ್ದೇಶದಲ್ಲೇ ಕಿರಣ್‌ರಾಜ್‌ ಅವರನ್ನು ರಾಷ್ಟ್ರಪ್ರಶಸ್ತಿ ಅರಸಿ ಬಂದಿತ್ತು. ಇಂತಹ ಹಿಟ್‌ ಕೊಟ್ಟ ನಿರ್ದೇಶಕ ಕಿರಣ್‌ ರಾಜ್‌ ನಿಜ ಜೀವನದಲ್ಲೂ ಪ್ರಾಣಿ ಪ್ರೇಮಿ. ನಾಯಿ ಬೆಕ್ಕು ಅಂದರೆ ಜೀವ ಬಿಡ್ತಾರೆ.

ಪ್ರಾಣಿ ಪ್ರೇಮಿ ನಿರ್ದೇಶಕ ಈಗ ಶ್ವಾನ ಪ್ರೇಮಿ ಬಾಲಿವುಡ್‌ ನಟ ಜಾನ್‌ ಅಬ್ರಹಾಂ ಅವರನ್ನ ಭೇಟಿ ಮಾಡಿದ್ದಾರೆ. ಚಾರ್ಲಿ ಸಿನಿಮಾದ ನಂತರ ವಿದೇಶದಲ್ಲಿ ಸುತ್ತಾಡುತ್ತಿದ್ದ ಕಿರಣ್‌ರಾಜ್‌ ಇದ್ದಕ್ಕಿದ್ದಂತೆ ಬಿ-ಟೌನ್‌ನ ಮಸಲ್‌ ಮ್ಯಾನ್‌ ಜಾನ್‌ ಅವರನ್ನು ಮುಂಬೈನ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಈ ಕುರಿತಾಗಿ ಖುದ್ದು ಕಿರಣ್‌ರಾಜ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬೀದಿಯಲ್ಲಿರುವ ನಾಯಿಗಳಿಗೆ ಊಟ ಹಾಕುವ ಜಾನ್‌ ಅಬ್ರಹಾಂ ಶ್ವಾನಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇಂತಹ ಇಬ್ಬರು ಪ್ರಾಣಿ ಪ್ರೇಮಿಗಳು ಒಟ್ಟಿಗೆ ಸಿಕ್ಕರೆ ಯಾವ ವಿಷಯ ಚರ್ಚೆಗೆ ಬರಬಹುದು ಯೋಚಿಸಿ.

ಈ ಹಿಂದೆ ‘777 ಚಾರ್ಲಿ’ ಸಿನಿಮಾ ಹಿಂದಿ ಭಾಷೆಯಲ್ಲಿ ರಿಲೀಸ್‌ ಆದಾಗ ಜಾನ್‌ ಅಬ್ರಹಾಂ ಅದನ್ನ ಸ್ವಯಂ ಪ್ರೇರಿತರಾಗಿ ಪ್ರಮೋಟ್‌ ಮಾಡಿದ್ದರು. ಚಿತ್ರಮಂದಿರಗಳಿಗೆ ಬಂದು ಈ ಸಿನಿಮಾ ನೋಡಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಆಗಿನಿಂದ ಜಾನ್‌ ಅವರು ಕಿರಣ್‌ರಾಜ್‌ ಸಂಪರ್ಕದಲ್ಲಿದ್ದಾರಂತೆ. ಚಿತ್ರ ತೆರೆ ಕಂಡಾಗಲೂ ಜಾನ್‌ ಅವರೇ ಕಿರಣ್‌ರಾಜ್‌ ಮೊಬೈಲ್‌ ನಂಬರ್‌ ಪಡೆದು ಮೊದಲು ಕರೆ ಮಾಡಿ ಮಾತನಾಡಿಸಿದ್ದರಂತೆ. ಅಷ್ಟೇ ಅಲ್ಲ ಈಗಲೂ ಸಹ ಕಿರಣ್‌ರಾಜ್‌ಗೆ ಕರೆ ಮಾಡಿ ಭೇಟಿಯಾಗಲು ಮನವಿ ಮಾಡಿದ್ದರಂತೆ.

ಜಾನ್‌ ಅಬ್ರಹಾಂ ಅವರಿಂದ ಕರೆ ಬರುತ್ತಿದ್ದಂತೆಯೇ ಕಿರಣ್‌ ರಾಜ್‌ ಮುಂಬೈಗೆ ವಿಮಾನ ಹತ್ತಿದ್ದರು. ನಟನನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಮೊದಲಿಗೆ ‘ಚಾರ್ಲಿ’ ಸಿನಿಮಾದ ಮೇಕಿಂಗ್‌ ಬಗ್ಗೆಯೇ ಚರ್ಚಿಸುತ್ತಾ ತುಂಬಾ ಸಮಯ ಕಳೆದು, ನಂತರದಲ್ಲಿ ಯಾವುದಾದರೂ ಸಿನಿಮಾಗೆ ಕಮಿಟ್‌ ಆಗಿದ್ದೀರಾ ಸದ್ಯ ಎಂದು ಜಾನ್‌ ಕೇಳಿದ್ದಾರಂತೆ. ಜಾನ್‌ ಕೇಳಿರುವ ಈ ಪ್ರಶ್ನೆ ನೋಡಿದ್ರೆ, ಕಿರಣ್‌ ರಾಜ್‌ ಸದ್ಯದಲ್ಲೇ ಜಾನ್‌ ಅಬ್ರಹಾಂ ಜೊತೆ ಸಿನಿಮಾ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಅನಿಸುತ್ತಿದೆ. ಈ ಭೇಟಿಯ ನೆನಪಿಗಾಗಿ ಇಬ್ಬರೂ ಜೊತೆಯಲ್ಲಿ ಫೋಟೋಗಳನ್ನ ತೆಗೆಸಿಕೊಂಡಿದ್ದು, ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here