ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಬಹುತೇಕ ಹೊಸಬರೇ ರೂಪಿಸಿರುವ ಸಿನಿಮಾಗಳು ತೆರೆಕಾಣುತ್ತಿವೆ. ಯೂಥ್‌ಫುಲ್‌ ಕತೆಯ ಕಾಮಿಡಿ – ಥ್ರಿಲ್ಲರ್‌ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’, ಹಾರರ್‌ – ಥ್ರಿಲ್ಲರ್‌ ‘ಅಂಬುಜಾ’, ಆಕ್ಷನ್‌ ಸಿನಿಮಾ ‘ಡೇವಿಡ್‌’, ಫ್ಯಾಮಿಲಿ – ಕಾಮಿಡಿ ‘ನಿಮ್ಮೆಲ್ಲರ ಆಶೀರ್ವಾದ’ ಮತ್ತು ‘ದೇವರ ಕನಸು’ ಮಕ್ಕಳ ಸಿನಿಮಾ ಥಿಯೇಟರ್‌ಗೆ ಬರಲು ಸಜ್ಜಾಗಿವೆ.

ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ | ಯೂಥ್‌ಫುಲ್‌ ಕಂಟೆಂಟ್‌. ಸಿನಿಮಾ ಕತೆ ಹುಡುಗರ ಹಾಸ್ಟೆಲ್‌ನಲ್ಲಿ ಒಂದು ರಾತ್ರಿ ನಡೆಯುವ ಘಟನೆಗಳ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಸ್ಯಾಂಡಲ್‌ವುಡ್‌ ತಾರೆಯರಾದ ರಮ್ಯ, ರಿಷಬ್ ಶೆಟ್ಟಿ, ರಕ್ಷಿತ್‌ ಶೆಟ್ಟಿ, ದಿಗಂತ್‌, ನಿರ್ದೇಶಕ ಪವನ್ ಕುಮಾರ್ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಅವರು ತಮ್ಮ ಪರಂವಃ ಪಿಕ್ಚರ್ಸ್‌ ಬ್ಯಾನರ್‌ನಡಿ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ನಿತಿನ್ ಕೃಷ್ಣಮೂರ್ತಿ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಪ್ರಜ್ವಲ್ ಬಿ ಪಿ, ರಾಕೇಶ್ ರಾಜಕುಮಾರ್, ಶ್ರೀವತ್ಸ, ತೇಜಸ್ ಜಯಣ್ಣಅರಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘777 ಚಾರ್ಲಿ’ ಮತ್ತು ‘ಕಾಂತಾರ’ ಚಿತ್ರಗಳ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ.

ಡೇವಿಡ್ | ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ನಾಲ್ಕು ಬಿಡಿ ಬಿಡಿ ಕತೆಗಳಿದು, ಎಲ್ಲವೂ ಕೊನೆಗೊಂದು ಬಿಂದುವಿನಲ್ಲಿ ಸೇರುತ್ತವೆ. ಶ್ರೇಯಸ್ ಚಿಂಗಾ ಮತ್ತು ಯೋಗಂಬರ್ ಭಾರ್ಗವ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಅವಿನಾಶ್ ಯಳಂದೂರು, ಮಾಳವಿಕಾ ಅವಿನಾಶ್, ರಾಕೇಶ್, ಬುಲೆಟ್ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಕಾಲಿಕವಾಗಿ ಅಗಲಿದ ಬುಲೆಟ್‌ ಪ್ರಕಾಶ್‌ ಅವರ ಕೊನೆಯ ಚಿತ್ರವಿದು. ಹೀರೋ ಶ್ರೇಯಸ್ ಚಿಂಗಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು.

ಅಂಬುಜಾ | ನೈಜ ಘಟನೆಗಳನ್ನು ಆಧರಿಸಿದ ಹಾರರ್‌ – ಸಸ್ಪೆನ್ಸ್‌ ಸಿನಿಮಾ. ಶ್ರೀನಿ ಹನುಮಂತರಾಜು ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶುಭಾ ಪುಂಜಾ, ಪದ್ಮಜಾ ರಾವ್, ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಪ್ರಮುಖ ಪಾತ್ರಗಳಲ್ಲಿ ಶುಭಾ ಪೂಂಜಾ ಚಿತ್ರದಲ್ಲಿ ಕ್ರೈಮ್ ರಿಪೋರ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಕ್‌ ಸುಬ್ರಮಣ್ಯ ನಾಯಕನಾಗಿ ನಟಿಸಿದ್ದು, ಕಾಶಿನಾಥ್‌ ಮಡಿವಾಳರ್‌ ಚಿತ್ರ ನಿರ್ಮಿಸಿದ್ದಾರೆ. ಪ್ರಸನ್ನ ಕುಮಾರ್‌ M S ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ನಿಮ್ಮೆಲ್ಲರ ಆಶೀರ್ವಾದ | ಪ್ರತೀಕ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕೌಟುಂಬಿಕ ಹಾಸ್ಯ ಚಿತ್ರ. ಒಬ್ಬ ಪೊಲೀಸ್ ಅಧಿಕಾರಿಯ ಸುತ್ತ ಕತೆ ಸುತ್ತುತ್ತದೆ. ಪ್ರತೀಕ್‌ಗೆ ಜೋಡಿಯಾಗಿ ‘ಭಿನ್ನ’ ಸಿನಿಮಾ ಖ್ಯಾತಿಯ ಪಾಯಲ್ ರಾಧಾಕೃಷ್ಣ ಅವರು ಕಾಣಿಸಿಕೊಂಡಿದ್ದಾರೆ. ರವಿಕಿರಣ್ ಚೊಚ್ಚಲ ನಿರ್ದೇಶನದ ಚಿತ್ರ. ಎಂ ಎನ್ ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಸರವಣನ್ ಜಿ ಎನ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಸುನಾದ್ ಗೌತಮ್ ಸಂಗೀತ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ.

ದೇವರ ಕನಸು | ಸುರೇಶ್ ಲಕ್ಕೂರು ಬರೆದು ನಿರ್ದೇಶಿಸಿರುವ ‘ದೇವರ ಕನಸು’ ಮಕ್ಕಳ ಚಿತ್ರವು ಮುಗ್ದ ಹಳ್ಳಿ ಹುಡುಗನೊಬ್ಬ ಸ್ವಂತ ಬೈಸಿಕಲ್‌ ಹೊಂದಲು ಹಂಬಲಿಸುವ ಕಥಾಹಂದರ. ಚಿತ್ರದಲ್ಲಿ ದೀಪಕ್, ಅಮೂಲ್ಯ, ಆರುಷಿ ವೇದಿಕಾ, ಮಾಕ್ ಮಣಿ, ಯುವರಾಜ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಜಯಕುಮಾರ್, ಸಿ ಶೇಖರ್ ಮತ್ತು ಸುರೇಶ್ ಲಕ್ಕೂರು ಚಿತ್ರ ನಿರ್ಮಿಸಿದ್ದಾರೆ. ರತ್ನಜಿತ್ ರಾಯ್ ಛಾಯಾಗ್ರಹಣ, ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here