ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ Bigg Boss ಶುರುವಾಗಿ ಮೂರು ದಿನಗಳಾಗಿವೆ. ಸ್ಪರ್ಧಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಹೊತ್ತಿನಲ್ಲಿ ಲಾಯರ್‌ ಜಗದೀಶ್‌ ಸಿಡಿದೆದ್ದಿದ್ದಾರೆ. ಸ್ಪರ್ಧಿಗಳು ಮಾತ್ರವಲ್ಲದೆ ಅವರು ಬಿಗ್‌ಬಾಸ್‌ಗೂ ಧಮಕಿ ಹಾಕಿದ್ದಾರೆ.

Bigg Boss ಶುರುವಾಗಿ ಮೂರು ದಿನಗಳಾಗಿವೆ. ಈಗಷ್ಟೇ ಮನೆಯೊಳಗೆ ಸ್ಪರ್ಧಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳುತ್ತಾ ಇದ್ದಾರೆ. ಎರಡನೇ ದಿನ ಚೈತ್ರಾ ಕುಂದಾಪುರ ಇತರೆ ಸ್ಪರ್ಧಿಗಳೊಂದಿಗೆ ಜೋರು ಮಾತಿನೊಂದಿಗೆ ಸುದ್ದಿಯಾಗಿದ್ದರು. ಮೂರನೇ ದಿನ ಮನೆಯಲ್ಲಿ ಲಾಯರ್‌ ಜಗದೀಶ್‌ ಅವರದ್ದೇ ಹವಾ! ಈ ಬಾರಿ ಮನೆಯಲ್ಲಿ ಸ್ವರ್ಗ ಮತ್ತು ನರಕ ಎನ್ನುವ ಎರಡು ವಿಭಾಗಗಳನ್ನು ಮಾಡಿರುವುದು ಸರಿಯಷ್ಟೆ. ಲಾಯರ್‌ ಜಗದೀಶ್‌ ಸ್ವರ್ಗದಲ್ಲೇ ಇದ್ದಾರೆ. ಅವರು ಮನೆಯೊಳಗೆ ತಮ್ಮದೇ ಒಂದು ಜಗತ್ತು ಸೃಷ್ಟಿಸಿಕೊಂಡಿದ್ದಾರೆ ಎನ್ನುವುದೂ ಹೌದು.

ಮೊದಲೆರೆಡು ದಿನ ಲಾಯರ್‌ ಜಗದೀಶ್‌ ಎಲ್ಲಾ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರು. ನರಕದಲ್ಲಿರುವ ಸ್ಪರ್ಧಿಗಳಿಗೆ ಸಹಾಯ ಮಾಡುತ್ತಾ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಆದರೆ ಮೂರನೇ ದಿನ ಅವರು ಏಕಾಏಕಿ ಬದಲಾಗಿದ್ದಾರೆ. ಯಾವುದೋ ವಿಷಯಕ್ಕೆ ಅವರು ವಿಪರೀತ ಕೋಪ ಮಾಡಿಕೊಂಡಿರುವಂತಿದೆ. ಇದರಿಂದ ಬಿಗ್‌ಬಾಸ್‌ ಮನೆ ಬಿಸಿಯಾಗಿದೆ. ಸ್ಪರ್ಧಿಗಳು ಮಾತ್ರವಲ್ಲದೆ ಅವರು ಬಿಗ್‌ಬಾಸ್‌ಗೂ ಧಮಕಿ ಹಾಕಿದ್ದಾರೆ.

‘ಮನಸ್ಸು ಮಾಡಿದ್ರೆ ಇಲ್ಲಿಗೇ ಹೆಲಿಕಾಪ್ಟರ್ ತರಿಸಿಕೊಳ್ತೇನೆ. ಸರ್ಕಾರವನ್ನೇ ಅಲ್ಲಾಡಿಸಿ ಬಿಡುವ ಸಾಮರ್ಥ್ಯ ನನಗಿದೆ. ನನ್ನನ್ನು ಎದುರು ಹಾಕಿಕೊಂಡು ಅದು ಹೇಗೆ ಶೋ ನಡೆಸುತ್ತೀರಿ ನೋಡೋಣ! ಇಡೀ ಸೆಟ್‌ ಅನ್ನೇ ಉಡಾಯಿಸಿಬಿಡ್ತೀನಿ!’ ಎಂದು ಬಿಗ್‌ ಬಾಸ್‌ಗೇ ಲಾಯರ್‌ ಸವಾಲೆಸಿದಿದ್ದಾರೆ. ಇನ್ನು ಅವರ ಕೋಪ ಇಷ್ಟಕ್ಕೇ ಮುಗಿದಿಲ್ಲ. ಮನೆಯಲ್ಲಿನ ಸ್ಪರ್ಧಿಗಳ ಮೇಲೂ ಅವರು ರೇಗಿದ್ದಾರೆ. ‘ಹೊರಗಡೆ ನೀವು ಏನೇನು ಮಸಲತ್ತು ನಡೆಸಿದ್ದೀರೋ ಎಲ್ಲವನ್ನೂ ಬಯಲು ಮಾಡುತ್ತೇನೆ’ ಎಂದು ಸ್ಪರ್ಧಿಗಳಿಗೂ ಸೆಡ್ಡು ಹೊಡೆದಿದ್ದಾರೆ.

ಇಷ್ಟೆಲ್ಲಾ ಆದ ನಂತರ ಅವರು ತಾವು ಶೋನಲ್ಲಿ ಇರುವುದಿಲ್ಲ, ಈಗಲೇ ಕ್ವಿಟ್‌ ಮಾಡ್ತೀನಿ ಎಂದು ಕ್ಯಾಮೆರಾ ಎದುರು ಬಂದು ಹೇಳಿದ್ದಾರೆ. ಚಾನೆಲ್‌ ಕಟ್‌ ಮಾಡಿರುವ ಟೀಸರ್‌ನಲ್ಲಿ ಲಾಯರ್‌ ಮಾತುಗಳಿಗೆ ಇತರೆ ಸ್ಪರ್ಧಿಗಳು ನಗುತ್ತಿರುವಂತಿದೆ. ಆದರೆ ಪರಿಸ್ಥಿತಿ ಖಂಡಿತ ಹಾಗಿರುವುದಿಲ್ಲ. ಈ ಲಾಯರ್‌ ಗಲಾಟೆ ಮಧ್ಯೆ ಮನೆಯಲ್ಲಿ ಅನುಷಾ ರೈ, ಧರ್ಮ ಕೀರ್ತಿರಾಜ್‌ ಮತ್ತು ಐಶ್ವರ್ಯ ಸಿಂಧೋಗಿ ಅವರ ಮಧ್ಯೆ ಟ್ರಯಾಂಗ್ಯುಲರ್‌ ಲವ್‌ಸ್ಟೋರಿ ಶುರುವಾಗಿದೆ. ಇವರ ಮಧ್ಯೆಯ ಮಾತುಕತೆ ಬಿಗ್‌ಬಾಸ್‌ ಮನೆಗೆ ರೊಮ್ಯಾಂಟಿಕ್‌ ಟಚ್‌ ನೀಡಿದೆ.

LEAVE A REPLY

Connect with

Please enter your comment!
Please enter your name here