ಮಿಥಿಲೇಶ್ ಎಡವಲತ್ ನಿರ್ದೇಶನದ ‘ರೂಪಾಂತರ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವಿಶಿಷ್ಟ ವಿನ್ಯಾಸದ ಪಾತ್ರಗಳ ಮೂಲಕ ಟ್ರೇಲರ್‌ ನಿರೀಕ್ಷೆ ಹುಟ್ಟುಹಾಕುತ್ತದೆ. ರಾಜ್‌ ಬಿ ಶೆಟ್ಟಿ, ಅಂಜನ್‌ ಭಾರದ್ವಾಜ್‌, ಲೇಖಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇದೇ ಜುಲೈ 26ರಂದು ತೆರೆಕಾಣಲಿದೆ.

‘ಮಾರ್ಕೆಟ್‌ ಬೇಡಿಕೆಗೂ ಹೊರತಾದ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಆಗ ಜನರು ಸಿನಿಮಾಗಳನ್ನು ನೋಡುತ್ತಾರೆ ಎಂಬ ಉದ್ದೇಶದಿಂದ ಸಿನಿಮಾ ಮಾಡಲು ಆರಂಭಿಸಿದ್ದೆವು. ಅದೇ ಉದ್ದೇಶದಿಂದ ಈ ಸಿನಿಮಾವನ್ನು ಮಾಡಿದ್ದೇವೆ. ‘ರೂಪಾಂತರ’ ನನಗೆ ಬಹಳ ಇಷ್ಟವಾದ ಸಿನಿಮಾ. ಈ ಚಿತ್ರದಲ್ಲಿ ನಾನು ನಟ ಮಾತ್ರ. ಸಂಭಾಷಣೆಗೆ ಸ್ವಲ್ಪ ಸಹಾಯ ಮಾಡಿದ್ದೇನೆ. ಮಿಕ್ಕಿದೆಲ್ಲಾ ಈ ತಂಡದ ಕನಸು. ನನ್ನ ಬಿಟ್ಟು ಬೇರೆ ಮುಖ್ಯಪಾತ್ರಗಳು ಈ ಚಿತ್ರದಲ್ಲಿದೆ. ಅವರೆಲ್ಲಾ ರೂಪಾಂತರಗೊಳ್ಳುವುದೇ ಚಿತ್ರದ ಕತೆ’ ಎಂದು ‘ರೂಪಾಂತರ’ ಸಿನಿಮಾ ಕುರಿತು ಮಾತನಾಡುತ್ತಾರೆ ನಟ ರಾಜ್‌ ಬಿ ಶೆಟ್ಟಿ. ಈ ಹಿಂದೆ ಅವರ ‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ಕೆಲಸ ಮಾಡಿದ್ದ ಹಲವರು ಇಲ್ಲಿದ್ದಾರೆ. ‘ರೂಪಾಂತರ’ದ ಟ್ರೇಲರ್‌ ರಿಲೀಸ್‌ ಆಗಿದ್ದು, ಜುಲೈ 26ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ನಿರ್ಮಾಪಕ ಸುಹಾನ್‌ ಪ್ರಸಾದ್‌ ಮಾತನಾಡಿ, ‘ಮಂಗಳೂರಿನವರು ಮಂಗಳೂರಿಗರಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತಿದೆ‌. ಆದರೆ ಈ ಚಿತ್ರವನ್ನು ನಾವು ಬೆಂಗಳೂರಿನಲ್ಲಿ ಮಾಡಿದ್ದೇವೆ‌. ರಾಜ್ ಬಿ ಶೆಟ್ಟಿ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲ ನಟರು ಬೇರೆ ಬೇರೆ ಪ್ರಾಂತ್ಯದವರು’ ಎನ್ನುತ್ತಾರೆ. ಐದು ಪ್ರಮುಖ ಪಾತ್ರಗಳ ಸುತ್ತ ಕತೆ ಸುತ್ತುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಿಥಿಲೇಶ್ ಎಡವಲತ್. ಅಂಜನ್‌ ಭಾರದ್ವಾಜ್‌, ಲೇಖಾ ನಾಯ್ಡು ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಮಿಥುನ್ ಮುಕುಂದನ್ ಸಂಗೀತ, ಭುವನೇಶ್ ಮಣಿವಣ್ಣನ್ ಸಂಕಲನ, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಚಿತ್ರಕ್ಕಿದೆ. ಲೈಟರ್ ಬುಧ್ಧ ಫಿಲಂಸ್ ಈ ಚಿತ್ರವನ್ನು ಹಂಚಿಕೆ ಮಾಡುತ್ತಿದೆ.

LEAVE A REPLY

Connect with

Please enter your comment!
Please enter your name here