ರಾಮ್‌ ಜನಾರ್ಧನ್‌ ನಿರ್ದೇಶನದ ‘ಭಗೀರಥ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಜಯಪ್ರಕಾಶ್‌ ಮತ್ತು ಶ್ರೀಯಾ ಪಾವನಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿದ್ದು, ಸೂರಿ ಚಿತ್ತೂರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸಿನಿಮಾ ಇದೇ ಜೂನ್‌ ತಿಂಗಳಲ್ಲಿ ತೆರೆಕಾಣಲಿದೆ.

‘ಕಳೆದ ಸೆಪ್ಟೆಂಬರ್‌ನಲ್ಲಿ ನಮ್ಮ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಈಗ ಚಿತ್ರೀಕರಣ ಮುಕ್ತಾಯವಾಗಿ, ತೆರೆಗೆ ಬರಲು ಅಣಿಯಾಗಿದೆ. ಮಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ. ‘ಬಾಯ್ ಫ್ರೆಂಡ್’ ಚಿತ್ರದಿಂದ ನಾನು ನಿರ್ದೇಶಕನಾದೆ. ‘ಭಗೀರಥ’ ನನ್ನ ನಿರ್ದೇಶನದ ಐದನೇ ಚಿತ್ರ. ಪ್ರಸ್ತುತ ರಾಜಕಾರಣದ ಕಥಾಹಂದರ ಹೊಂದಿರುವ ಹಾಗೂ ಪತ್ರಕರ್ತರೊಬ್ಬರ ಸುತ್ತ ನಡೆಯುವ ಕಥೆ’ ಎನ್ನುತ್ತಾರೆ ‘ಭಗೀರಥ’ ಚಿತ್ರದ ನಿರ್ದೇಶಕ ರಾಮ್‌ ಜನಾರ್ಧನ್‌. ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್‌ ಟೀಸರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

‘ಧರೆಗೆ ಗಂಗೆಯನ್ನು ತಂದವನು ‘ಭಗೀರಥ’. ಅದರಿಂದ ಗಂಗೆಗೆ ಭಾಗೀರಥಿ ಎಂಬ ಹೆಸರು ಬಂತು. ಅಸಾಧ್ಯವಾದದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು ‘ಭಗೀರಥ ಪ್ರಯತ್ನ’ ಎನ್ನುತ್ತಾರೆ. ಇಂತಹ ಒಂದು ವಿಭಿನ್ನ ಕಥೆಯನ್ನಿಟ್ಟುಕೊಂಡು ಸಿನಿಮಾ ಬರುತ್ತಿದೆ’ ಎಂದು ಚಿತ್ರದ ಆಶಯದ ಬಗ್ಗೆ ನಿರ್ದೇಶಕರು ಮಾತನಾಡುತ್ತಾರೆ. ‘ಜಮಾನ’ ಸಿನಿಮಾ ಮೂಲಕ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾದ ಜಯಪ್ರಕಾಶ್‌ ಅವರಿಗೆ ಇದು ಮೂರನೇ ಸಿನಿಮಾ. ಹೆಸರಿಗೆ ತಕ್ಕಂತೆ ಚಿತ್ರದಲ್ಲಿ ನೀರಿನ ಮಹತ್ವವನ್ನು ವಿವರಿಸಲಾಗಿದೆ ಎನ್ನುತ್ತಾರವರು.

ಚಿತ್ರದ ನಾಯಕಿಯಾಗಿ ಶ್ರಿಯಾ ಪಾವನಿ ನಟಿಸಿದ್ದಾರೆ. ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ ರಮೇಶ್ ಮತ್ತು ಬಿ ಭೈರಪ್ಪ ಮೈಸೂರು ನಿರ್ಮಿಸಿರುವ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ಸಂಯೋಜನೆ, ಸೂರಿ ಚಿತ್ತೂರು ಛಾಯಾಗ್ರಹಣವಿದೆ. ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಾಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here