ಸ್ಯಾಂಡಲ್‌ವುಡ್‌ ನಟಿ, ಮಾಜಿ ಸಂಸದೆ ರಮ್ಯ ಸಾವಿನ ಹುಸಿ ಸುದ್ದಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ತಮಿಳುನಾಡಿನ ಕೆಲವು ಟ್ವಿಟರ್‌ ಪೇಜ್‌ಗಳಿಂದ ಸೃಷ್ಟಿಯಾಗಿದ್ದ ಸನ್ನಿವೇಶವಿದು. ಕೂಡಲೇ ರಮ್ಯರ ಆಪ್ತ ಪತ್ರಕರ್ತರು ನಟಿ ಕ್ಷೇಮವಾಗಿದ್ದಾರೆಂದು ಟ್ವೀಟ್‌ ಮಾಡಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಮ್ಯ ಇನ್ನಿಲ್ಲ, ಹೃದಯಾಘಾತದಿಂದ ಅಗಲಿದ್ದಾರೆ ಎನ್ನುವಂತಹ ಕೆಲವು ಟ್ವೀಟ್‌ಗಳು ಇಂದು ಬೆಳಗ್ಗೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಓಡಾಡಿದ್ದವು. ತಮಿಳುನಾಡಿನ ಕೆಲವು ಅಧಿಕೃತ ಸಿನಿಮಾ ಟ್ವಿಟರ್‌ ಪೇಜ್‌ಗಳು ಈ ಸುದ್ದಿಯನ್ನು ಹರಿಬಿಟ್ಟಿದ್ದವು. ಇದನ್ನು ನಂಬಿಕೊಂಡ ಕೆಲವರು ಸಂತಾಪದ ಪೋಸ್ಟ್‌ಗಳನ್ನೂ ಹಾಕತೊಡಗಿದ್ದರು. ಸಹಜವಾಗಿಯೇ ಸ್ಯಾಂಡಲ್‌ವುಡ್‌ ಮಂದಿ ಹಾಗೂ ರಮ್ಯ ಅಭಿಮಾನಿಗಳು ಆತಂಕಕ್ಕೀಡಾಗಿದ್ದರು. ಪತ್ರಕರ್ತೆ ಧನ್ಯಾ ರಾಜೇಂದ್ರನ್‌ ಟ್ವೀಟ್‌ ಮಾಡಿದ ನಂತರ ಇದು ಸುಳ್ಳು ಸುದ್ದಿ ಎಂದು ಗೊತ್ತಾಯ್ತು. ಧನ್ಯಾ, ‘ನಾನು ಈಗಷ್ಟೇ ರಮ್ಯ ಅವರೊಂದಿಗೆ ಮಾತನಾಡಿದೆ. ಅವರು ಜೆನೆವಾದಲ್ಲಿದ್ದಾರೆ. ನಾನು ಕರೆ ಮಾಡಿ ಮಾತನಾಡುವವರೆಗೂ ಅವರು ಸುಖ ನಿದ್ರೆಯಲ್ಲಿದ್ದರು. ಇಂತಹ ಸುಳ್ಳು ಸುದ್ದಿ ಹರಡುವವರಿಗೆ ನಾಚಿಕೆಯಾಗಬೇಕು!’ ಎಂದು ಟ್ವೀಟ್‌ ಮಾಡಿದ್ದಾರೆ.

ಮತ್ತೊಬ್ಬ ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಹ್ಮಣ್ಯಂ ಅವರು ಕೂಡ ಟ್ವೀಟ್‌ ಮಾಡಿ ರಮ್ಯ ಅವರ ಕ್ಷೇಮದ ಬಗ್ಗೆ ಮಾಹಿತಿ ಹಂಚಿಕೊಂಡರು. ಜೆನೆವಾದಲ್ಲಿ ರಮ್ಯ ಅವರ ಭೇಟಿಯ ಸಂದರ್ಭದ ಫೋಟೊ ಟ್ವೀಟ್‌ ಮಾಡಿದ ಚಿತ್ರಾ, ‘ಜೆನೆವಾದಲ್ಲಿ ರಮ್ಯ ಜೊತೆ ಡಿನ್ನರ್‌ ಆಯ್ತು. ಅತ್ಯುತ್ತಮ ನಟಿಯನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿದೆ. ಅವರು ನಾಳೆ ಬೆಂಗಳೂರಿಗೆ ಮರಳುವವರಿದ್ದಾರೆ’ ಎಂದು ಬರೆದಿದ್ದರು. ತಮಿಳುನಾಡು ಸಿನಿಮಾ PR ಮತ್ತು ಕೆಲವು ಅಧಿಕೃತ ಟ್ವಿಟರ್‌ ಪೇಜ್‌ಗಳು ಅಚಾತುರ್ಯ, ಅವಸರಕ್ಕೆ ಮಾಡಿದ ಟ್ವೀಟ್‌ಗಳೇ ಈ ಎಡವಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here