ಖ್ಯಾತ ಚಿತ್ರನಿರ್ದೇಶಕ ಎಸ್‌ ನಾರಾಯಣ್‌ ಅವರು ಚಿತ್ರನಿರ್ದೇಶನಕ್ಕೆ ಮರಳಿದ್ದಾರೆ. ಅವರು ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿರುವ ‘ಒಂದ್ಸಲ ಮೀಟ್‌ ಮಾಡಣ’ ಸಿನಿಮಾ ಸೆಟ್ಟೇರಿದೆ. ಶ್ರೇಯಸ್‌ ಮಂಜು ಮತ್ತು ಬೃಂದಾ ಆಚಾರ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಎಸ್‌ ನಾರಾಯಣ್‌ ನಿರ್ದೇಶನದ ನೂತನ ಸಿನಿಮಾಗೆ ಮುಹೂರ್ತ ನೆರವೇರಿದೆ. ‘ಒಂದ್ಸಲ ಮೀಟ್‌ ಮಾಡಣ’ ಎನ್ನುವ ವಿಶಿಷ್ಟ ಶೀರ್ಷಿಕೆಯ ಈ ಸಿನಿಮಾಗೆ ಅವರೇ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದಾರೆ. ಶ್ರೇಯಸ್‌ ಮಂಜು ಹೀರೋ ಆಗಿ ನಟಿಸುತ್ತಿರುವ ಚಿತ್ರವಿದು. ಚಿಕ್ಕಮಗಳೂರಿನ ಶ್ರೀದೇವೀರಮ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನೆರವೇರಿದೆ. ಶ್ರೇಯಸ್ ಮಂಜು ಹಾಗೂ ತಾರಾ ಅನುರಾಧ ಅವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್ ಡಿ ತಮ್ಮಯ್ಯ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಸಿನಿಮಾವು ಪ್ರೀತಿಯ ಜರ್ನಿಯಾಗಿದ್ದು, ಚಿತ್ರೀಕರಣ ಚಿಕ್ಕಮಗಳೂರಿನಿಂದ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ’ ಎಂದಿದ್ದಾರೆ ನಿರ್ದೇಶಕರು.

ಚಿತ್ರದ ನಾಯಕಿಯಾಗಿ ಬೃಂದಾ ಆಚಾರ್ ನಟಿಸುತ್ತಿದ್ದು, ಇತರ ಪ್ರಮುಖ ಪಾತ್ರಗಳಲ್ಲಿ ಶರತ್ ಲೋಹಿತಾಶ್ವ, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಇದ್ದಾರೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ, ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನವಿದೆ. Esha Productions ಬ್ಯಾನರ್‌ ಅಡಿ ಕೆ ಮಂಜು ಮತ್ತು ರಮೇಶ್ ಯಾದವ್ ಚಿತ್ರ ನಿರ್ಮಿಸುತ್ತಿದ್ದಾರೆ. ಕನ್ನಡದ ಮೇರು ಪ್ರತಿಭೆಗಳಾದ ಡಾ ರಾಜ್‌ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಗ್ಗಳಿಕೆ ಎಸ್‌ ನಾರಾಯಣ್‌ ಅವರದ್ದು. ಕೆಲವು ವರ್ಷ ನಿರ್ದೇಶನದಿಂದ ದೂರವಿದ್ದ ಅವರು ‘ಒಂದ್ಸಲ ಮೀಟ್‌ ಮಾಡಣ’ ಚಿತ್ರದೊಂದಿಗೆ ಮರಳಿದ್ದಾರೆ.

LEAVE A REPLY

Connect with

Please enter your comment!
Please enter your name here