‘TOXIC’ ಸೆಟ್‌ನಲ್ಲಿ ಮೊದಲ ಬಾರಿ ಯಶ್‌ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘The Hollywood Reporter’ಗಾಗಿ ನಿರೂಪಕಿ ಅನುಪಮ ಚೋಪ್ರಾ ನಡೆಸಿದ ಸಂದರ್ಶನದಲ್ಲಿ ‘ರಾಮಾಯಣ’, ‘KGF3’ ಸಿನಿಮಾಗಳ ಕುರಿತು ಪ್ರಸ್ತಾಪವಾಗಿದೆ. ನಿತೇಶ್‌ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದ ರಾವಣನ ಪಾತ್ರದಲ್ಲಿ ನಟಿಸುತ್ತಿರುವುದನ್ನು ಯಶ್‌ ಖಚಿತಪಡಿಸಿದ್ದಾರೆ.

ನಟ ಯಶ್‌ ಮೊದಲ ಬಾರಿಗೆ ‘TOXIC’ ಸಿನಿಮಾ ಕುರಿತು ‘The Hollywood Reporter’ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಿರೂಪಕಿ ಅನುಪಮ ಚೋಪ್ರಾ ಅವರು ಯಶ್‌ರನ್ನು ಸಂದರ್ಶಿಸಿದ್ದಾರೆ. ನಿತೇಶ್‌ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾದಲ್ಲಿ ಯಶ್‌, ರಾವಣನ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ವದಂತಿಯಾಗಿಯೇ ಇತ್ತು. ಈ ಸಂದರ್ಶನದಲ್ಲಿ ಯಶ್‌ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಇದರ ಜೊತೆಗೆ ಪ್ರಶಾಂತ್‌ ನೀಲ್‌ ಜೊತೆಗೆ ‘KGF 3’ ಸಿನಿಮಾ ಮಾಡುವುದೂ ಖಚಿತ ಎಂದಿದ್ದಾರೆ.

‘KGF’ ಸರಣಿ ಸಿನಿಮಾಗಳು ಯಶ್‌ರನ್ನು ನ್ಯಾಷನಲ್‌ ಸ್ಟಾರ್‌ ಆಗಿಸಿವೆ. ‘KGF 2’ ನಂತರ ಮತ್ತೊಂದು ಸಿನಿಮಾ ಒಪ್ಪಿಕೊಳ್ಳಲು ಯಶ್‌ ತುಂಬಾ ಸಮಯ ತೆಗೆದುಕೊಂಡರು. ಈ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಯಶ್‌, ‘ಪ್ರೇಕ್ಷಕರ ಹಣ, ಸಮಯವನ್ನು ನಾನು ಗೌರವಿಸುತ್ತೇನೆ. ಹಾಗಾಗಿ ಸಮಯ ತೆಗೆದುಕೊಂಡೆ’ ಎಂದರು. ‘KGF’ ಸರಣಿ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ಯಶ್‌ ಮಾಸ್‌ ನಿರ್ದೇಶಕರಲ್ಲಿಗೆ ಹೋಗದೆ, ಗೀತು ಮೋಹನ್‌ದಾಸ್‌ ಅವರ ಸಿನಿಮಾ ಒಪ್ಪಿಕೊಂಡಿದ್ದೇಕೆ? ‘ಗೀತು ಅವರ ಕಾನ್ಸೆಪ್ಟ್‌, ಸ್ಕ್ರಿಪ್ಟ್‌ ನನ್ನನ್ನು excite ಮಾಡಿದೆ. ಅವರಿಗೆ ಮಾಸ್‌ ಆಡಿಯನ್ಸ್‌ ಪಲ್ಸ್‌ ಗೊತ್ತಿದೆ. ಖಂಡಿತ ಈ ಸಿನಿಮಾ ಎಂಟರ್‌ಟೇನಿಂಗ್‌ ಮಾಸ್‌ ಕಮರ್ಷಿಯಲ್‌ ಸಿನಿಮಾ ಆಗಲಿದೆ’ ಎಂದರು.

ಈ ಸಂದರ್ಶನ ನಡೆದದ್ದು ‘ಟಾಕ್ಸಿಕ್‌’ ಸಿನಿಮಾ ಸೆಟ್‌ನಲ್ಲಿ. ಈಗಾಗಲೇ ಚಿತ್ರಕ್ಕೆ ಮೂವತ್ತು ದಿನಗಳ ಚಿತ್ರೀಕರಣವೂ ಆಗಿದೆ. ನಿರೂಪಕಿ ಅನುಪಮ ಅವರು ‘ಟಾಕ್ಸಿಕ್‌’ ಬಗ್ಗೆ ಕೇಳಿದರೂ ಯಶ್‌ ಯಾವುದೇ ಸುಳಿವು ಬಿಟ್ಟುಕೊಡದೆ ನುಣುಚಿಕೊಂಡರು. ಇನ್ನು ಚಿತ್ರದಲ್ಲಿ ನಟಿಸುತ್ತಿರುವ ನಟಿಯರ ಬಗ್ಗೆ ಕೇಳಿದಾಗಲೂ ಯಶ್‌ ಏನೂ ಹೇಳಲಿಲ್ಲ. ಚಿತ್ರದ ನಿರ್ದೇಶಕರು, ನಿರ್ಮಾಪಕರಿಂದ ಅಧಿಕೃತ ಮಾಹಿತಿ ಸಿಗಲಿದೆ ಎಂದರು. ‘ಚಿತ್ರದಲ್ಲಿ strong women ಕ್ಯಾರಕ್ಟರ್‌ಗಳು ಇರಲಿವೆ. ಪ್ರತಿಭಾವಂತ ನಟಿಯರು ಚಿತ್ರದಲ್ಲಿ ನಟಿಸುತ್ತಿದ್ದಾರೆ’ ಎಂದಷ್ಟೇ ಅವರು ಹೇಳಿದ್ದು.

ನಟನೆಗೆ ಸಂಬಂಧಿಸಿದಂತೆ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಯಶ್‌, ‘ಸಾಮಾನ್ಯವಾಗಿ ಚಿತ್ರೀಕರಣಕ್ಕೆ ಮುನ್ನ ನಾನು ವರ್ಕ್‌ಶಾಪ್‌ಗಳಲ್ಲಿ ಭಾಗವಹಿಸೋಲ್ಲ. ನಾನು ಮೂಲತಃ ರಂಗಭೂಮಿಯವನು. ಪಾತ್ರವನ್ನು ಅರ್ಥ ಮಾಡಿಕೊಂಡು ಕ್ಯಾಮೆರಾ ಎದುರು ಅದೇ ರೀತಿ ಬಿಹೇವ್‌ ಮಾಡುತ್ತೇನೆ. ಅಲ್ಲಿನ ಆಂಬಿಯನ್ಸ್‌, ಸಹಕಲಾವಿದರ ಸೂಕ್ತ ಪ್ರತಿಕ್ರಿಯೆಗಳು ಪಾತ್ರವನ್ನು ಚೆಂದಗಾಣಿಸುತ್ತವೆ’ ಎಂದರು. ‘ಟಾಕ್ಸಿಕ್‌’ಗೆ ಛಾಯಾಗ್ರಹಣ ಮಾಡುತ್ತಿರುವ ಖ್ಯಾತ ಸಿನಿಮಾಟೋಗ್ರಾಫರ್‌ ರಾಜೀವ್‌ ರವಿ ಅವರ ಬಗ್ಗೆಯೂ ಸಂದರ್ಶನದಲ್ಲಿ ಪ್ರಸ್ತಾಪವಾಯ್ತು. ‘ಸಿನಿಮಾ ತಂತ್ರಜ್ಞರೆಲ್ಲರ ಕಲೆಕ್ಟೀವ್‌ ವರ್ಕ್‌. ಇಲ್ಲಿ ಎಲ್ಲರ ಸಲಹೆ – ಸಹಕಾರವೂ ನೆರವಾಗಲಿದೆ’ ಎನ್ನುತ್ತಾ ಕೆಜಿಎಫ್‌ ಸಿನಿಮಾದ ಜನಪ್ರಿಯ ‘ತಾಯಿ ಮತ್ತು ಬ್ರೆಡ್‌’ ಸನ್ನಿವೇಶವನ್ನು ಪ್ರಸ್ತಾಪಿಸಿದರು.

‘ರಾಮಾಯಣ’ದಲ್ಲಿ ತಾವು ರಾವಣನ ಪಾತ್ರ ನಿರ್ವಹಿಸುತ್ತಿರುವ ವಿಷಯವನ್ನು ಯಶ್‌ ಮೊದಲ ಬಾರಿ ಅಧಿಕೃತಗೊಳಿಸಿದರು. ಅವರು ಈ ಚಿತ್ರದ ಸಹನಿರ್ಮಾಪಕ ಕೂಡ ಹೌದು. ‘ರಾಮಾಯಣದಲ್ಲಿ ರಾವಣನ ಹೊರತಾಗಿ ಮತ್ತಾವುದೇ ಪಾತ್ರ ಮಾಡಲು ನನಗೆ ಹೇಳಿದರೂ ನಾನು ಒಪ್ಪುತ್ತಿರಲಿಲ್ಲ. ರಾವಣನ ಪಾತ್ರ ತುಂಬಾ shades & nuances ಇರುವಂತಹ ಪಾತ್ರ. ನಮ್ಮ ಕತೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಯಾವುದೇ ಪ್ರಾಜೆಕ್ಟ್‌ ಆದರೂ ನನ್ನನ್ನು excite ಮಾಡುತ್ತದೆ’ ಎನ್ನುತ್ತಾರೆ ಯಶ್‌. ಚಿತ್ರದ ರಾಮ – ಸೀತೆಯ ಪಾತ್ರಗಳಲ್ಲಿ ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವುದನ್ನೂ ಅವರು ಕನ್ಫರ್ಮ್‌ ಮಾಡಿದರು.

PAN ಇಂಡಿಯಾ ಸಿನಿಮಾ ಎನ್ನುವುದರ ಬಗೆಗಿನ ಯಶ್‌ ವಿಶ್ಲೇಷಣೆ ಚೆನ್ನಾಗಿತ್ತು. ಈ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ, ‘ಜಗತ್ತು ಈಗ ಚಿಕ್ಕದಾಗಿದೆ. ನಾವು ಯಾವುದೇ ಕತೆಯನ್ನು ಮತ್ತೊಂದೆಡೆ ಹೋಗಿ ಹೇಳಬೇಕೆಂದಿಲ್ಲ. ಎಲ್ಲರಿಗೂ ಕನೆಕ್ಟ್‌ ಆಗುವಂತಹ ಕತೆಗಳನ್ನು ನಾವಿರುವಲ್ಲೇ ಹೇಳಬಹುದಾಗಿದೆ’ ಎಂದ ಅವರು ತಾವು PAN ಇಂಡಿಯಾ ಸ್ಟಾರ್‌ ಎನ್ನುವುದನ್ನು, ‘ನಮ್ಮ ಪ್ರಾಮಾಣಿಕ ಕೆಲಸದಿಂದ ಹೆಚ್ಚು ಜನರಿಗೆ ತಲುಪುವುದಷ್ಟೇ ನಮ್ಮ ಉದ್ದೇಶ’ ಎಂದು ವಿಶ್ಲೇಷಿಸಿದರು.

ಯಶ್‌ ಅವರ ಯಶಸ್ಸಿನಲ್ಲಿ ಪತ್ನಿ ರಾಧಿಕಾ ಅವರ ಪಾತ್ರ ಎಷ್ಟಿದೆ? ‘ಆಕೆ ನನ್ನ ಬಹುದೊಡ್ಡ strenth. ಸಿನಿಮಾರಂಗದಲ್ಲಿ ನಾವು ಜೊತೆಯಲ್ಲೇ ಬೆಳೆದವರು. ಪತ್ನಿ ಎನ್ನುವುದಕ್ಕಿಂತಲೂ ಆಕೆ ನನ್ನ ಆಪ್ತ ಸ್ನೇಹಿತೆ. ನನ್ನ ನಿರ್ಧಾರಗಳನ್ನು ಯಾವತ್ತೂ ಆಕೆ ಪ್ರಶ್ನಿಸಿಲ್ಲ. ಬದಲಿಗೆ ಈ ಪ್ರಾಜೆಕ್ಟ್‌ ನನಗೆ ಖುಷಿ ತರುತ್ತದೆಯೇ ಎಂದು ನೋಡುತ್ತಾಳಷ್ಟೆ. ಸಿನಿಮಾ ಚಿತ್ರೀಕರಣದ ಮಧ್ಯೆ ತನಗೆ ಹಾಗೂ ಮಕ್ಕಳಿಗೆ ಸಮಯ ಕೊಡಲಾಗುತ್ತದೆಯೇ ಎನ್ನುವುದಷ್ಟೇ ಕೆಲವೊಮ್ಮೆ ಆಕೆಯ ಕನ್ಸರ್ನ್‌ ಆಗಿರುತ್ತದೆ!’ ಎನ್ನುತ್ತಾರೆ ಯಶ್‌. ಇನ್ನು ‘KGF 3’ ಬಗ್ಗೆ ಪ್ರಸ್ತಾಪಿಸಿದಾಗ, ‘ಖಂಡಿತ ಈ ಸಿನಿಮಾ ಆಗುತ್ತದೆ. ಪ್ರಶಾಂತ್‌ ನೀಲ್‌ ಮತ್ತು ನಾನು ಮತ್ತೆ ಜೊತೆಯಾಗುತ್ತೇವೆ. ಇದು ದೊಡ್ಡ ಸ್ಕೇಲ್‌ನಲ್ಲೇ ಆಗುತ್ತದೆ’ ಎಂದರು. ‘TOXIC’ ಏಪ್ರಿಲ್‌ಗೆ ತೆರೆಕಾಣಲಿದೆ ಎನ್ನಲಾಗಿತ್ತು. ಈ ಕುರಿತ ಪ್ರಶ್ನೆಗೆ, ‘ನಟ -ನಟಿಯರ ಡೇಟ್ಸ್‌ ಇಶ್ಯೂ ಹಾಗೂ ಇತರೆ ಕಾರಣಗಳಿಂದಾಗಿ ಸಿನಿಮಾ ತಡವಾಗಲಿದೆ. ಬದಲಾದ ಬಿಡುಗಡೆ ದಿನಾಂಕ ಮುಂದಿನ ದಿನಗಳಲ್ಲಿ ಘೋಷಣೆಯಾಗಲಿದೆ’ ಎಂದರು. ‘ಸಲಾರ್‌ 2’ನಲ್ಲಿ ಯಶ್‌ ಇರುತ್ತಾರೆ ಎನ್ನುವ ವದಂತಿಯೂ ಹರಿದಾಡುತ್ತಿದೆ. ‘ಇಲ್ಲ, ನಾನು ಸಲಾರ್‌ನಲ್ಲಿ ನಟಿಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

LEAVE A REPLY

Connect with

Please enter your comment!
Please enter your name here