ನವೀನ್‌ ರೆಡ್ಡಿ ನಿರ್ದೇಶನದ ‘ಮೂರನೇ ಕೃಷ್ಣಪ್ಪ’ ಸಿನಿಮಾದ ಟ್ರೇಲರ್‌ಗೆ ನಟ ಲೂಸ್‌ ಮಾದ ಯೋಗಿ ದನಿ ನೀಡಿದ್ದಾರೆ. ಸಂಪತ್‌ ಮೈತ್ರೇಯ ಮತ್ತು ರಂಗಾಯಣ ರಘು ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

‘ಅಕಿರ’, ‘ರಿಲ್ಯಾಕ್ಸ್‌ ಸತ್ಯ’ ಸಿನಿಮಾಗಳ ನಿರ್ದೇಶಕ ನವೀನ್‌ ರೆಡ್ಡಿ ಹೊಸ ಸಿನಿಮಾ ಮೂಲಕ ಮರಳುತ್ತಿದ್ದಾರೆ. ವಿಭಿನ್ನ ಶೀರ್ಷಿಕೆಯ ಅವರ ‘ಮೂರನೇ ಕೃಷ್ಣಪ್ಪ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಟ್ರೇಲರ್‌ಗೆ ನಟ ಲೂಸ್‌ ಮಾದ ಯೋಗಿ ಅವರು ದನಿ ನೀಡಿದ್ದಾರೆ ಎನ್ನುವುದು ವಿಶೇಷ. ಈ ಮೂಲಕ ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ. ಉತ್ತಮ ಅಭಿನಯದೊಂದಿಗೆ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ಸಂಪತ್‌ ಮೈತ್ರೇಯಾ ನಾಯಕರಾಗಿ ನಟಿಸುತ್ತಿರುವ ಚಿತ್ರವಿದು.

ರೆಡ್ ಡ್ರಾಗ್ಯನ್ ಫಿಲಂಸ್‌ ಪ್ರೊಡಕ್ಷನ್ ಹೌಸ್‌ನಡಿ ‘ಮೂರನೇ ಕೃಷ್ಣಪ್ಪ’ ಚಿತ್ರ ಮೂಡಿ ಬರುತ್ತಿದೆ. ಈ ಹಿಂದೆ ‘ರಿಲ್ಯಾಕ್ಸ್ ಸತ್ಯ’ ಚಿತ್ರವನ್ನು ಇದೇ ಪ್ರೊಡಕ್ಷನ್‌ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು. ಇದೀಗ ಇದೇ ಪ್ರೊಡಕ್ಷನ್ ಹೌಸ್‌ನಡಿ ಇವರು ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಹಣ ಹಾಕಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ತುಕಾಲಿ ಸಂತೋಷ್, ಉಗ್ರಂ ಮಂಜು ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here