ಡಾ ಚಿದಾನಂದ ಎಸ್ ನಾಯಕ್ ನಿರ್ದೇಶನದ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು…’ ಕಿರುಚಿತ್ರ ಪ್ರತಿಷ್ಠಿತ ಕಾನ್ ಫಿಲಂ ಫೆಸ್ಟಿವಲ್ಗೆ ಆಯ್ಕೆಯಾಗಿದೆ. ‘ನಶಿಸಿ ಹೋಗುತ್ತಿರುವ ಜನಪದ ಕಥೆಗಳನ್ನು ಜೀವಂತವಾಗಿಡುವ ಪ್ರಯತ್ನವಿದು. ಅಜ್ಜಿ ಕೋಳಿ ಕದ್ದ ಕತೆಯನ್ನು ಕಿರುಚಿತ್ರವಾಗಿಸಿದ್ದೇನೆ’ ಎನ್ನುತ್ತಾರೆ ನಿರ್ದೇಶಕರು. ಕಾನ್ ಫಿಲಂ ಫೆಸ್ಟಿವಲ್ನ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಕಿರುಚಿತ್ರವಿದು ಎನ್ನುವುದು ವಿಶೇಷ.
‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು…’ ಇದು ಗ್ರಾಮೀಣ ಕರ್ನಾಟಕದ ಜನಪದ ಕಥೆ. ಇದನ್ನೇ ಕಥಾವಸ್ತುವನ್ನಾಗಿಟ್ಟುಕೊಂಡು ಶಿವಮೊಗ್ಗ ಮೂಲದ ಡಾ ಚಿದಾನಂದ್ ಎಸ್ ನಾಯಕ್ ಒಂದು ಕಿರುಚಿತ್ರ ಮಾಡಿದ್ದಾರೆ. ಎಂಬಿಬಿಎಸ್ ಮುಗಿಸಿ ಕೆಲ ಸಮಯ ವೈದ್ಯರಾಗಿ ಕಾರ್ಯನಿರ್ವಹಿಸಿ ಚಿದಾನಂದ್ ನಂತರದಲ್ಲಿ ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿದರು. ಅಲ್ಲಿ ಟೆಲಿವಿಷನ್ ವಿಭಾಗದಲ್ಲಿ ಡೈರೆಕ್ಷನ್ ಕಲಿತು, ಅದರ ಭಾಗವಾಗಿಯೇ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು…’ ಶೀರ್ಷಿಕೆಯ ಪ್ರಾಯೋಗಿಕ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಸರ್ಕಾರದಿಂದ ಈ ಕಿರುಚಿತ್ರ ನಿರ್ಮಾಣಕ್ಕೆ ಒಂದು ಲಕ್ಷ ವೆಚ್ಚ ಮಾಡಲಾಗಿದೆ. ಈ ಯುವ ನಿರ್ದೇಶಕ ಮಾಡಿರುವ ಈ ಕಿರುಚಿತ್ರ ಈಗ ವಿಶ್ವದ ಪ್ರತಿಷ್ಠಿತ ಕಾನ್ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಕಿರುಚಿತ್ರ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಮೊದಲ ಕಿರುಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹದಿನಾರು ನಿಮಿಷಗಳ ಈ ಕಿರುಚಿತ್ರ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲೇ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಅಜ್ಜಿಯೊಬ್ಬರು ತನ್ನ ಕೋಳಿ ಕೂಗದೇ ಇದ್ದರೆ ಹಳ್ಳಿಯಲ್ಲಿ ಬೆಳಕು ಆಗೋದೇ ಇಲ್ಲ ಅಂತ ತನ್ನ ಕೋಳಿ ಕದ್ದು ಹೋಗುವ ಕಥೆಯ ಸುತ್ತಲೇ ಈ ಕಿರುಚಿತ್ರ ಸುತ್ತುತ್ತದೆ. ಈ ಜನಪದ ಕಥನದಲ್ಲಿ ರಂಗಭೂಮಿ ಮತ್ತು ಸಿನಿಮಾ ನಟ ಜಹಾಂಗೀರ್ ಅಭಿನಯಿಸಿದ್ದಾರೆ. ‘ಚೋರ ಚರಣದಾಸ’ ನಾಟಕದ ಅಭಿನಯದಿಂದ ಗಮನ ಸೆಳೆದ ನಟ ಜಹಾಂಗೀರ್ ನೀನಾಸಂನಲ್ಲಿ ಕಲಿತವರು. ಪ್ರಸ್ತುತ ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಫೊಟೋ’ ಸಿನಿಮಾದಲ್ಲಿನ ಅವರ ಪಾತ್ರ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕಿರುಚಿತ್ರದ ನಿರ್ದೇಶಕ ಚಿದಾನಂದ್ ನಾಯಕ್ ಮಾತನಾಡಿ, ‘ಶಾಲಾ ದಿನಗಳಿಂದಲೂ ನನಗೆ ನಾಟಕ ಅಂದ್ರೆ ತುಂಬಾ ಇಷ್ಟ. ಆದರೆ, ಎಂಬಿಬಿಎಸ್ ಓದುವಾಗ ಅದರ ನಂಟು ಬಿಟ್ಟು ಹೋಗಿತ್ತು. ಎಂಬಿಬಿಎಸ್ ಮುಗಿಸಿದ ಮೇಲೆ ಮೈಸೂರಿನಲ್ಲೇ ಪ್ರಾಕ್ಟೀಸ್ ಮಾಡ್ತಿದ್ದೆ. ಆಗ ಅಲ್ಲೇ ನಾಟಕಗಳನ್ನು ನೋಡಲು ಹೋಗುತ್ತಿದೆ. ನಾಟಕ, ಪ್ರಯೋತಾತ್ಮಕ ಸಿನಿಮಾಗಳು ನನ್ನಲ್ಲಿ ನಿರ್ದೇಶನದ ಕನಸು ಬಿತ್ತಿದವು. ಈ ಸಂದರ್ಭದಲ್ಲಿ ನಟನೆ – ನಿರ್ದೇಶನ ಕುರಿತು ಒಂದು ಕಾರ್ಯಾಗಾರಕ್ಕೂ ಸೇರಿಕೊಂಡೆ. ನಂತರ ಎಫ್ಟಿಐಐಯಲ್ಲಿ ಟೆಲಿವಿಷನ್ ವಿಂಗ್ನಲ್ಲಿ ಒಂದು ವರ್ಷದ ಡೈರೆಕ್ಷನ್ ಕೋರ್ಸ್ ಮಾಡಿದೆ. ಅದರ ಭಾಗವಾಗಿಯೇ ಈ ಕಿರುಚಿತ್ರ ನಿರ್ದೇಶನ ಮಾಡಿದ್ದು. ಪುಣೆ Tanshet ಎಂಬ ಹಳ್ಳಿಯಲ್ಲಿ 4 ದಿನ ಶೂಟಿಂಗ್ ಮಾಡಿದ್ದೇವೆ. ಈ ಕಿರುಚಿತ್ರ ಕಾನ್ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಾಣುತ್ತಿರೋದು ನಿಜಕ್ಕೂ ಖುಷಿ ತಂದಿದೆ’ ಎಂದಿದ್ದಾರೆ ನಿರ್ದೇಶಕ ಚಿದಾನಂದ್ ಎಸ್ ನಾಯಕ್.