ನವಿಲುಗರಿ ನವೀನ್‌ ರಚನೆ ಮತ್ತು ನಿರ್ದೇಶನದ ‘ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾದ ಮುಹೂರ್ತ ಮಂತ್ರಾಲಯದಲ್ಲಿ ನೆರವೇರಿದೆ. ವರನಟ ಡಾ ರಾಜಕುಮಾರ್‌ ಮೊಮ್ಮಗ ಷಣ್ಮುಖ ಗೋವಿಂದರಾಜ್‌ ಅವರು ಚಿತ್ರದ ಹೀರೋ ಆಗಿ ನಟಿಸುತ್ತಿದ್ದಾರೆ.

ಮೇರು ನಟ ಡಾ ರಾಜಕುಮಾರ್‌ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅಭಿನಯದ ‘ಚಿನ್ನದ ಮಲ್ಲಿಗೆ ಹೂವೇ’ ಹೊಸ ಸಿನಿಮಾಗೆ ಚಾಲನೆ ಸಿಕ್ಕಿದೆ. ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಬಳಿ ಚಿತ್ರದ ಮುಹೂರ್ತ ನೆರವೇರಿದೆ. ರಾಜ್‌ ಅವರ ಹಿರಿಯ ಪುತ್ರಿ ಶ್ರೀಮತಿ ಲಕ್ಷ್ಮೀ ಗೋವಿಂದ ರಾಜು ಅವರ ಪುತ್ರ ಷಣ್ಮುಖ ನಾಯಕ ನಟನಾಗಿ ಅಭಿನಯಿಸಲಿರುವ ಎರಡನೇ ಚಿತ್ರವಿದು. ಚಿತ್ರತಂಡ ರಾಯರಿಗೆ ಪೂಜೆ ಸಲ್ಲಿಸಿ ರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದು, ಪೂಜೆಯಲ್ಲಿ ಶ್ರೀಮತಿ ಲಕ್ಷ್ಮೀ ಅವರ ಪತಿ ಎಸ್ ಎ ಗೋವಿಂದ ರಾಜು ಹಾಗೂ ಚಿತ್ರತಂಡದವರು ಹಾಜರಿದ್ದರು. ‘ಸಾರಾ ವಜ್ರ’ ಚಿತ್ರವನ್ನು ನಿರ್ದೇಶಿಸಿದ್ದ ಆರ್ನಾ ಸಾಧ್ಯ ಈ ಚಿತ್ರವನ್ನು Sambrama Media House ಬ್ಯಾನರ್ ಅಡಿ ನಿರ್ಮಿಸುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ
ನಿರ್ದೇಶಕ ನವಿಲುಗರಿ ನವೀನ್ ರಚನೆ ಹಾಗೂ ನಿರ್ದೇಶನ ಚಿತ್ರಕ್ಕಿದೆ. ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಡಾ ರಾಜಕುಮಾರ್‌ ಅವರ ಯಶಸ್ವೀ ‘ಹುಲಿಯ ಹಾಲಿನ ಮೇವು’ ಚಿತ್ರದ ಹಾಡಿನ ಸಾಲುಗಳನ್ನೇ ಶೀರ್ಷಿಕೆಯನ್ನಾಗಿ ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ. ತೀರ್ಥಹಳ್ಳಿ, ಆಗುಂಬೆ, ಮಲೆನಾಡು, ಶಿವಮೊಗ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿನಿಮಾಗೆ ವಿ ಆರ್ ಚಂದ್ರು ಮತ್ತು ಪ್ರಮೋದ್ ಆರ್ ಇಬ್ಬರು ಸೇರಿ ಛಾಯಾಗ್ರಹಣ ಮಾಡುತ್ತಿದ್ದು, ಮಧು ತುಂಬಕೆರೆ ಸಂಕಲನ ಮಾಡಲಿದ್ದು, ಪ್ರಣವ್ ಸತೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರೀಕರಣ ಆರಂಭವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಷಣ್ಮುಖ ಅವರ ಚೊಚ್ಚಲ ನಟನೆಯ ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾದ ಬಿಡುಗಡೆ ಕುರಿತು ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ. ಈ ಚಿತ್ರದಲ್ಲಿ ಪಂಕಜ್ ನಾರಾಯಣ್, ಭವ್ಯಾ, ಎಂ ಎಸ್ ಉಮೇಶ್, ರಾಮಕೃಷ್ಣ, ಶಶಿಧರ್ ಕೋಟೆ ಮುಂತಾದವರು ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here