‘ತಿಥಿ’ ಸಿನಿಮಾ ಖ್ಯಾತಿಯ ತಮ್ಮಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದಾಸಪ್ಪ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವಿಜಯ್‌ ಕೀಲಾರ ನಿರ್ದೇಶನದ ಗ್ರಾಮೀನ ಸೊಗಡಿನ ಕತೆಯಿದು. ಹಳ್ಳಿಗಳ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ದಾಸಪ್ಪ ಪಾತ್ರದ ಸುತ್ತ ಹೆಣೆದ ಚಿತ್ರಕಥೆ.

ವಿಜಯ್‌ ಕೀಲಾರ ನಿರ್ದೇಶನದ ‘ದಾಸಪ್ಪ’ ಗ್ರಾಮೀಣ ಸೊಗಡಿನ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ‘ತಿಥಿ’ ಸಿನಿಮಾ ಖ್ಯಾತಿಯ ನಟ ತಮ್ಮಣ್ಣ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರನಿರ್ದೇಶಕ, ಗೀತರಚನೆಕಾರ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯ್‌ ಕೀಲಾರ, ‘ನಾನು ಮಂಡ್ಯ ಜಿಲ್ಲೆಯ ಕೀಲಾರದವನು. ಇದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಎಲ್ಲಾ ಹಳ್ಳಿಗಳಲ್ಲಿ ಯಾವುದೇ ಕಾರ್ಯವಾದರೂ ದಾಸಪ್ಪ ಇರಲೇಬೇಕು. ಅಂತಹ ದಾಸಪ್ಪ ಎಂಬ ಪಾತ್ರದ ಸುತ್ತ ಈ ಚಿತ್ರದ ಕತೆ ಸಾಗುತ್ತದೆ’ ಎನ್ನುತ್ತಾರೆ. ‘ತಿಥಿ’ ಚಿತ್ರವೇ ಅವರಿಗೆ ಈ ಚಿತ್ರಕಥೆ ಮಾಡಲು ಸ್ಫೂರ್ತಿಯಂತೆ. ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿ ಅವರು ಚಿತ್ರನಿರ್ದೇಶಿಸಿದ್ದಾರೆ.

ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಿಗ್‌ಬಾಸ್‌ ಶೋ ಖ್ಯಾತಿಯ ಹಾಸ್ಯನಟ ಮಂಜು ಪಾವಗಡ ನಟಿಸಿದ್ದಾರೆ. ಆನಂದ್ ಕೆಂಪೇಗೌಡ ಕೆಬ್ಬಳ್ಳಿ, ಶ್ರೀನಿವಾಸ್‌ ಮತ್ತು ರಾಘವೇಂದ್ರ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ವಿನೋದ್ ಗೊಬ್ರಗಾಲ, ಅಂಜನ ಗಿರೀಶ್, ಸುರಕ್ಷಿತ ಶೆಟ್ಟಿ, ಸಿಂಚನ ಗೌಡ ಇದ್ದಾರೆ. ಚಿತ್ರದಲ್ಲಿ ಹಾಡುಗಳು ಮತ್ತು ಯಾವುದೇ ಸಾಹಸ ಸನ್ನಿವೇಶಗಳು ಇರುವುದಿಲ್ಲ. ಮಂಡ್ಯ, ಕೀಲಾರ, ಮದ್ದೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದ ಪ್ರಚಾರ ಕಾರ್ಯ ಶುರುವಾಗಿದ್ದು ಸದ್ಯದಲ್ಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುವುದಾಗಿ ಚಿತ್ರತಂಡ ತಿಳಿಸಿದೆ.

LEAVE A REPLY

Connect with

Please enter your comment!
Please enter your name here