ಪ್ರವೀಣ್‌ ಕುಮಾರ್‌ ಮತ್ತು ರಾಧ್ಯ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ದೇಸಾಯಿ’ ಸಿನಿಮಾದ ಡ್ಯೂಯೆಟ್‌ ಹಾಡೊಂದು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಶಿವು ಬೇರ್ಗಿ ರಚನೆಯ ಈ ಹಾಡಿಗೆ ಸಾಯಿಕಾರ್ತೀಕ್‌ ಸಂಗೀತ ಸಂಯೋಜಿಸಿದ್ದಾರೆ.

ನಾಗಿರೆಡ್ಡಿ ಭಡ ರಚಿಸಿ, ನಿರ್ದೇಶಿಸಿರುವ ‘ದೇಸಾಯಿ’ ಚಿತ್ರದ ಹಾಡಿನ ಚಿತ್ರೀಕರಣ ಬೆಂಗಳೂರು ನಗರದ ಹೊರವಲಯದ ಡೆಸ್ಟಿನೊ ರೆಸಾರ್ಟ್‌ನಲ್ಲಿ ಮುಕ್ತಾಯವಾಗಿದೆ. ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ‘ಲವ್ 360’ ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಗೀತೆಯನ್ನು ಶಿವು ಬೇರ್ಗಿ ಅವರು ಬರೆದಿದ್ದು, ಹಾಡಿಗೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಪ್ರವೀಣ್ ಕುಮಾರ್ ಹಾಗೂ ನಾಯಕಿ ರಾಧ್ಯ ಹೆಜ್ಜೆ ಹಾಕಿದ್ದಾರೆ. ‘ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ನಾನು ನಿರ್ದೇಶಿಸಿರುವ ಮೊದಲ ಚಿತ್ರ. ತಾತಾ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ‌. ಭಾವನಾತ್ಮಕ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿದೆ. ಜನರು ಬಯಸುವ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ’ ಎನ್ನುತ್ತಾರೆ ನಿರ್ದೇಶಕರು.

‘ಮೂಲತಃ ಬಾಗಲಕೋಟೆಯವನಾದ ನನಗೆ ಚಿತ್ರ ನಿರ್ಮಾಣ ಮಾಡಬೇಕೆಂಬ ಬಯಕೆ ಮೊದಲೇ ಇತ್ತು. ಅದು ಈಗ ಈಡೇರಿದೆ. ಇದೊಂದು ಉತ್ತರ ಕರ್ನಾಟಕ ಶೈಲಿಯ ಚಿತ್ರ. ಸಂಭಾಷಣೆ ಕೂಡ ಅದೇ ಸೊಗಡಿನಲ್ಲಿದೆ. ಯಾವುದಕ್ಕೂ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಹೆಚ್ಚಿನ ಚಿತ್ರೀಕರಣ ಬಾದಾಮಿ, ಬಾಗಲಕೋಟೆಯಲ್ಲಿ ನಡೆದಿದೆ‌’ ಎನ್ನುವುದು ನಿರ್ಮಾಪಕ ಮಹಂತೇಶ್ ವಿ ಚೋಳದಗುಡ್ಡ ಅವರ ಮಾತು. Veerabhadreshwara Creative Films ಬ್ಯಾನರ್‌ ಅಡಿಯಲ್ಲಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ‘ಈ ಚಿತ್ರದಲ್ಲಿ ನನ್ನದು ಅಥ್ಲೀಟ್‌ ಪಾತ್ರ. ‘ಲವ್ 360′ ಚಿತ್ರದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ’ ಎಂದರು ಹೀರೋ ಪ್ರವೀಣ್ ಕುಮಾರ್. ಚಿತ್ರಕ್ಕೆ ಪಿ ಕೆ ಹೆಚ್ ದಾಸ್ ಛಾಯಾಗ್ರಹಣವಿದ್ದು, ‘ಒರಟ’ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here