ಆರ್‌ ಕೆ ನಾಯಕ್‌ ನಿರ್ದೇಶನದ ‘ಕಾಣೆಯಾಗಿದ್ದಾಳೆ’ ಸಿನಿಮಾದ ಹಾಡೊಂದು ಬಿಡುಗಡೆಯಾಗಿದೆ. ವಿನಯ್‌ ಕಾರ್ತಿ, ಕೀರ್ತಿ ಭಟ್‌, ಹರ್ಷಿತಾ ಕಲಿಂಗಲ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹೆಣ್ಣುಮಕ್ಕಳು ಹೇಗೆ ಮೋಸಕ್ಕೆ ಒಳಗಾಗುತ್ತಾರೆ ಎನ್ನುವುದು ಚಿತ್ರದ ಕಥಾವಸ್ತು.

ಆರ್ ಕೆ ನಾಯಕ್‌ ನಿರ್ದೇಶಿಸಿರುವ ‘ಕಾಣೆಯಾಗಿದ್ದಾಳೆ’ ಚಿತ್ರ ತೆರೆಗೆ ಸಿದ್ಧವಾಗಿದೆ. ‘ಹುಡುಕಿಕೊಟ್ಟವರಿಗೆ ಬಹುಮಾನ’ – ಇದು ಶೀರ್ಷಿಕೆಯ ಅಡಿಟಿಪ್ಪಣಿ. ಇತ್ತೀಚೆಗೆ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಆರ್‌ ಕೆ ನಾಯಕ್‌, ‘ಕೆಲವು ನೈಜ ಘಟನೆಗಳ ಪ್ರೇರಣೆಯಿಂದ ಚಿತ್ರಕಥೆ ಹೆಣೆದಿದ್ದೇವೆ. ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳು ನಿಯಮಿತವಾಗಿ ಬಳಸಬೇಕು. ಇಲ್ಲದಿದ್ದರೆ ಅಪಾಯ ಖಂಡಿತ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ. ಕರ್ನಾಟಕದ ಹತ್ತಾರು ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಡಿಸೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ’ ಎನ್ನುತ್ತಾರೆ.

‘ಇದು ನನ್ನ ಮೊದಲ ಚಿತ್ರ. ಕಾಲೇಜು ಹುಡುಗನ ಪಾತ್ರ ನನ್ನದು. ತಾಯಿ – ಮಗನ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಹೈಲೆಟ್’ ಎನ್ನುವುದು ಚಿತ್ರದ ಹೀರೋ ವಿನಯ್‌ ಕಾರ್ತಿ ಮಾತು. ನಾಯಕಿ ಕೀರ್ತಿ ಭಟ್‌ ಚಿತ್ರದಲ್ಲಿ ಹಳ್ಳಿಯಿಂದ ನಗರಕ್ಕೆ ಬಂದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್‌ ಅವರು ಹೀರೋ ತಾಯಿಯಾಗಿ ನಟಿಸಿದ್ದಾರೆ. ‘ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಾನು ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಯಶೋಧ ಹಾಗೂ ಕೃಷ್ಣನ ಪ್ರೀತಿ ತರಹ ಈ ತಾಯಿ – ಮಗನ ಪ್ರೀತಿ’ ಎಂದಿದ್ದಾರೆ. ಹರ್ಷಿತಾ ಕಲಿಂಗಲ್ ಚಿತ್ರದ ಎರಡನೇ ನಾಯಕಿ. Shree Mailara Lingeshwara Cinemas ಬ್ಯಾನರ್‌ ಅಡಿಯಲ್ಲಿ ಸಿನಿಮಾ ತಯಾರಾಗಿದೆ.

LEAVE A REPLY

Connect with

Please enter your comment!
Please enter your name here