ಬಂಗಾರು ನಿರ್ದೇಶನದ ಎರಡನೇ ಸಿನಿಮಾದ ಶೀರ್ಷಿಕೆ ‘ಮಡಿಕೇರಿ’ ಎಂದಾಗಿದೆ. ಚಿತ್ರದ ಬಹುಪಾಲು ಸನ್ನಿವೇಶಗಳನ್ನು ಮಡಿಕೇರಿಯ ಸುಂದರ ಪರಿಸರದಲ್ಲಿ ಚಿತ್ರಿಸುವುದು ನಿರ್ದೇಶಕರ ಇರಾದೆ. ಬಹುಭಾಷಾ ನಟಿ ಸುಹಾಸಿನಿ ಅವರು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ.

ರಾಜ್ಯಪ್ರಶಸ್ತಿ ಪುರಸ್ಕೃತ ‘ಕಾಲ್ಗೆಜ್ಜೆ’ ಸಿನಿಮಾ ನಿರ್ದೇಶಕ ಬಂಗಾರು ಅವರ ನೂತನ ಸಿನಿಮಾಗೆ ಶೀರ್ಷಿಕೆ ನಿಗದಿಯಾಗಿದೆ. ಹಿರಿಯ ಚಿತ್ರನಿರ್ದೇಶಕ ಎಸ್‌ ಮಹೇಂದರ್‌ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಚಿತ್ರದ ಶೀರ್ಷಿಕೆ ‘ಮಡಿಕೇರಿ’ ಎಂದಾಗಿದೆ. ನಿರ್ದೇಶಕ ಎಸ್‌ ಮಹೇಂದರ್‌ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳು ಕಡಿಮೆ ಆಗುತ್ತಿವೆ. ನನ್ನ ಶಿಷ್ಯ 2012ರಲ್ಲಿ ಮಾಡಿದ್ದ ಕಾಲ್ಗೆಜ್ಜೆ ಚಿತ್ರವನ್ನ ನೋಡಿ ತುಂಬಾ ಖುಷಿಪಟ್ಟಿದ್ದೆ. ಅಷ್ಟೊಂದು ಅದ್ಭುತ ಚಿತ್ರ ಅದಾಗಿತ್ತು. ಅದೇ ಬಂಗಾರು ಇದೀಗ ಇನ್ನೊಂದು ಹೊಸ ಯೋಚನೆ, ಯೋಜನೆಯೊಂದಿಗೆ ಮತ್ತೆ ಬಂದಿದ್ದಾರೆ. ʼಮಡಿಕೇರಿʼ ಸಿನೆಮಾ ಶೀರ್ಷಿಕೆಯೇ ಅದ್ಭುತವಾಗಿದೆ. ಖಂಡಿತ ಇದು ವಿಷಯಾಧಾರಿತ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನುವ ಭರವಸೆ ಇದೆ. ಬರಹಗಾರ ಮತ್ತು ಭಾವನಾಜೀವಿ ಬಂಗಾರು ಗೆಲುವು ಸಾಧಿಸಲಿ’ ಎಂದು ಹಾರೈಸಿದರು.

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟಿ ಸುಹಾಸಿನಿ ಅವರು ನಟಿಸಲಿರುವುದು ವಿಶೇಷ. ಚಿತ್ರದ ನಿರ್ದೇಶಕ ಬಂಗಾರು ಅವರು ಈ ಬಗ್ಗೆ ಮಾಹಿತಿ ನೀಡಿ, ‘ಇದೊಂದು ಸುಮಧುರ ದೃಶ್ಯಕಾವ್ಯವಾಗಿದ್ದು, ಸಂಗೀತವೇ ಚಿತ್ರದ ಜೀವಾಳವಾಗಿರುತ್ತದೆ. ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗುವ ಸಾಧ್ಯತೆಯಿದೆ. ಶಾಲಿನಿ ಭಟ್ ಚಿತ್ರದ ನಾಯಕಿ. ಟೈಟಲ್ ಝಲಕ್ ಅನಾವರಣ ಮಾಡಲು ಹಾಡೊಂದರ ಚಿತ್ರೀಕರಣ ಮಾಡಿದ್ದು, ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ನಡೆಸಿ ಶೂಟಿಂಗ್‌ ಶುರು ಮಾಡುತ್ತೇವೆ’ ಎನ್ನುತ್ತಾರೆ. Paramahastha Production ಮತ್ತು Shri Balaji Cini Combines ಬ್ಯಾನರ್‌ ಅಡಿಯಲ್ಲಿ ರವಿ ಶ್ಯಾಮನೂರು ಮತ್ತು ಶಿವಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ ಬಂಗಾರು ಕತೆ, ಚಿತ್ರಕತೆ, ಸಂಭಾಷಣೆ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ. ಅಚ್ಯುತ್‌ ಕುಮಾರ್, ಭವಾನಿ ಪ್ರಕಾಶ್‌, ಸುಧಾರಾಣಿ, ಅನುಪ್ರಭಾಕರ್, ಶ್ರೀ ಶಂಭು ಸೇರಿದಂತೆ ಮಜಾಭಾರತ ಖ್ಯಾತಿಯ ಬಸು, ವಿನೋದ್ ಗೊಬ್ರಗಾಲ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಚಿತ್ರಕ್ಕೆ ಚಂದ್ರ-ಪ್ರಭ ಮತ್ತು ಯಾಸಿನ್ ಛಾಯಾಗ್ರಾಹಣ, ಅರ್ಜುನ್‌ ಕಿಟ್ಟಿ ಸಂಕಲನ ಮಾಸ್‌ ಮಾದ ಸಾಹಸ, ಗಂಗಮ್‌ ರಾಜು ಅವರ ನೃತ್ಯ ಸಂಯೋಜನೆ ಇರಲಿದೆ. ದಿವ್ಯಾ ಭಾರತಿ ಚಿತ್ರಕ್ಕೆ ಕಾಸ್ಟ್ಯೂಮ್‌ ಡಿಸೈನರ್ ಆಗಿ ಕೆಲಸ ಮಾಡಲಿದ್ದಾರೆ.

LEAVE A REPLY

Connect with

Please enter your comment!
Please enter your name here