ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (KTVA) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಟಿವಿ ಠೀವಿ’ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯ್ತು. ಸಹಕಾರ ಸಚಿವ ಕೆ ಎನ್‌ ರಾಜಣ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಕನ್ನಡ ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು.

‘ಮುಂದಿನ ವರ್ಷ ನಮ್ಮ KTVA 25ನೇ ವರ್ಷಕ್ಕೆ ಅಡಿಯಿಡುತ್ತಿದೆ. ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು. ಸದಸ್ಯರಾಗದವರೂ ಬೇಗ ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದು KTVA ಪ್ರಧಾನ ಕಾರ್ಯದರ್ಶಿ, ನಟ – ನಿರೂಪಕ ಸೃಜನ್‌ ಲೋಕೇಶ್‌ ಕರೆ ನೀಡಿದರು. ಸಮಾರಂಭದಲ್ಲಿ ಕನ್ನಡ ಕಿರುತೆರೆಗೆ ಸಂಬಂಧಿಸಿದ ‘ಟೀವಿ ಠೀವಿ’ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಬಿಡುಗಡೆಗೊಳಿಸಿದರು. ಕೆಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಈ ಮಾಸಪತ್ರಿಕೆ ಇನ್ನು ಮತ್ತೆ ಪ್ರಕಟವಾಗಲಿದೆ. ಹಿರಿಯ ಸಾಹಿತಿ ಡಾ ದೊಡ್ಡರಂಗೇಗೌಡ, ನಟಿ ಉಮಾಶ್ರೀ, ನಟ ಪ್ರಕಾಶ್ ರೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್, ಚಿತ್ರನಿರ್ದೇಶಕ ಮಿಲನ ಪ್ರಕಾಶ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

KTVA ಅಧ್ಯಕ್ಷ ರವಿ ಆರ್‌ ಗರಣಿ ಅವರು ಮಾತನಾಡಿ, ‘ಕಿರುತೆರೆ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಾರೆ. ಸುಮಾರು ಇಪ್ತತ್ತು ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಆದರೆ ಇವರಿಗೆ ಆರೋಗ್ಯ ವಿಮೆ ಸೇರಿದಂತೆ ಯಾವುದೇ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ಸಚಿವರು ಈ ಕುರಿತು ಸಹಕಾರ ನೀಡಬೇಕು’ ಎಂದು ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿ ಅವರೊಂದಿಗೆ KTVA ಪದಾಧಿಕಾರಿಗಳ ಭೇಟಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

LEAVE A REPLY

Connect with

Please enter your comment!
Please enter your name here