ತಮ್ಮ ಕೊನೆಯ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರು ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿದ್ದರಂತೆ. ರಾಮಮಂದಿರ ಉದ್ಘಾಟನೆ ವೇಳೆ ಈ ಹಾಡುಗಳನ್ನು ಪ್ರಸ್ತುತಪಡಿಸುವುದು ಲತಾರ ಆಸೆಯಾಗಿತ್ತು ಎಂದು ಅವರ ಕುಟುಂಬದವರು ಹೇಳುತ್ತಾರೆ.

ಭಾರತ ಕಂಡ ಶ್ರೇಷ್ಠ ಹಿನ್ನೆಲೆಗಾಯಕಿಯರಲ್ಲಿ ಲತಾ ಮಂಗೇಶ್ಕರ್​ ಅವರಿಗೆ ಅಗ್ರಸ್ಥಾನವಿದೆ. ಅವರ ಕಂಠದಲ್ಲಿ ಸಾವಿರಾರು ಹಾಡುಗಳು ಮೂಡಿಬಂದಿವೆ. ಚಿಕ್ಕ ವಯಸ್ಸಿನಲ್ಲೇ ಹಾಡಲು ಶುರುಮಾಡಿದ ಅವರು ಹಲವು ದಶಕಗಳ ಕಾಲ ತಮ್ಮ ಅಮೋಘ ಕಂಠದ ಮೂಲಕ ಸಂಗೀತ ಲೋಕದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈಗ ಅವರ ಕುಟುಂಬದ ಆಪ್ತರಿಂದ ಒಂದು ವಿಚಾರ ಹೊರಬಿದ್ದಿದೆ. ತಮ್ಮ ಕೊನೆಯ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರು ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿದ್ದರಂತೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಆ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ ಆಗಿದೆ. 2024ರ ಜನವರಿ ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆ ಆಗುವ ಸಾಧ್ಯತೆಯೂ ಇದೆ. ಈ ವಿಶೇಷ ಸಂದರ್ಭಕ್ಕಾಗಿ ಲತಾ ಮಂಗೇಶ್ಕರ್ ಅವರು ಭಜನೆಗಳನ್ನು ಸಿದ್ಧಪಡಿಸಿಟ್ಟಿದ್ದರು.

‘ರಾಮ ಮಂದಿರ ಉದ್ಘಾಟನೆ ವೇಳೆ ತಾವು ಹಾಡಿದ ಶ್ಲೋಕಗಳು, ಭಜನೆಗಳು ಪ್ರಸಾರವಾಗಬೇಕು ಎಂಬುದು ಅವರ ಕನಸಾಗಿತ್ತು’ ಎಂದಿದ್ದಾರೆ ಅವರ ಕುಟುಂಬದವರು. ಈ ವಿಚಾರವನ್ನು ಸಂಗೀತ ಸಂಯೋಜಕರಾದ ಮಯೂರೇಶ್ ಪೈ ಸಹ ಖಚಿತಪಡಿಸಿದ್ದಾರೆ. ಅವರು ಲತಾ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ‘ತಮ್ಮ ಅಂತ್ಯಕಾಲದವರೆಗೂ ಲತಾ ದೀದಿ ಅವರು ಹಾಡುತ್ತಲೇ ಇದ್ದರು. ರಾಮ ಮಂದಿರದಲ್ಲಿ ತಮ್ಮ ಧ್ವನಿ ಕೇಳಬೇಕು ಎಂಬುದು ಲತಾ ಅವರ ಕನಸಾಗಿತ್ತು. ಈ ಕಾರಣಕ್ಕೆ ಆರೋಗ್ಯ ಹದಗೆಡುತ್ತಿದ್ದ ಸಂದರ್ಭದಲ್ಲೇ ರೆಕಾರ್ಡಿಂಗ್ ಶುರುಮಾಡಿದ್ದರು. ನಾನು ನೋಡಿದ ಧೈರ್ಯವಂತ ಮಹಿಳೆ ಅವರು’ ಎಂದಿದ್ದಾರೆ ಮಯೂರೇಶ್. ರಾಮ ಮಂದಿರ ಉದ್ಘಾಟನೆ ವೇಳೆ ಲತಾ ಮಂಗೇಶ್ಕರ್ ಅವರ ಹಾಡುಗಳು ಪ್ರಸಾರವಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಫೆಬ್ರವರಿ 6, 2022ರಂದು ಇಹಲೋಕ ತ್ಯಜಿಸಿದರು.

LEAVE A REPLY

Connect with

Please enter your comment!
Please enter your name here