ಮನುರಂಜನ್ ರವಿಚಂದ್ರನ್ ಮತ್ತು ಕೀರ್ತಿ ಕಲ್ಕೇರಿ ಅಭಿನಯದ ‘ಪ್ರಾರಂಭ’ ಸಿನಿಮಾ ಮೇ 20ರಂದು ತೆರೆಕಾಣುತ್ತಿದೆ. ವಿಫಲ ಪ್ರೀತಿ, ಇದರಿಂದ ಕುಟುಂಬದ ಮೇಲಾಗುವ ಪರಿಣಾಮಗಳನ್ನು ನಿರ್ದೇಶಕ ಮನು ಕಲ್ಯಾಡಿ ಚಿತ್ರದಲ್ಲಿ ನಿರೂಪಿಸಿದ್ದಾರೆ.
“ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ಪ್ರೀತಿ ಕೈಕೊಟ್ಡರೆ, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅದು ತಪ್ಪು. ನಮಗೂ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಕುಟುಂಬ ಇರುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕು. ಇಂತಹ ಕಥೆ ‘ಪ್ರಾರಂಭ’ದಲ್ಲಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಈ ಪ್ರಾಜೆಕ್ಟ್ ಚೆನ್ನಾಗಿ ಮೂಡಿಬಂದಿದೆ” ಎನ್ನುತ್ತಾರೆ ನಟ ಮನುರಂಜನ್ ರವಿಚಂದ್ರನ್. ಅವರು ಹೀರೋ ಆಗಿ ನಟಿಸಿರುವ ‘ಪ್ರಾರಂಭ’ ನಾಡಿದ್ದು ತೆರೆಕಾಣುತ್ತಿದೆ. ಮನು ಕಲ್ಯಾಡಿ ನಿರ್ದೇಶನದ ಸಿನಿಮಾ ಆರಂಭವಾಗಿದ್ದು ಮೂರು ವರ್ಷಗಳ ಹಿಂದೆ. ಕೋವಿಡ್ನಿಂದಾಗಿ ಚಿತ್ರದ ಬಿಡುಗಡೆ ಎರಡು ವರ್ಷ ವಿಳಂಬವಾಗಿ ಕೊನೆಗೆ ಮೇ 20ಕ್ಕೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಕೀರ್ತಿ ಕಲ್ಕೇರಿ ನಾಯಕಿಯಾಗಿ ನಟಿಸಿರುವ ಸಿನಿಮಾಗೆ ಸುರೇಶ್ ಬಾಬು ಛಾಯಾಗ್ರಹಣವಿದೆ. ಜಗದೀಶ್ ಕಲ್ಯಾಡಿ ಸಿನಿಮಾ ನಿರ್ಮಿಸಿದ್ದು, ವೆಂಕಟ್ ವಿತರಿಸುತ್ತಿದ್ದಾರೆ.