‘ರಂಗಸ್ಥಳಂ’ ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಸುಕುಮಾರ್‌ ಮತ್ತು ನಟ ರಾಮ್‌ ಚರಣ್‌ ಮತ್ತೊಂದು ಚಿತ್ರಕ್ಕೆ ಜೊತೆಯಾಗಿದ್ದಾರೆ. ಮೈತ್ರಿ ಮೂವೀ ಮೇಕರ್ಸ್‌ ಬ್ಯಾನರ್‌ನಡಿ ತಯಾರಾಗಲಿರುವ ಸಿನಿಮಾಗೆ ದೇವಿಶ್ರೀ ಪ್ರಸಾದ್‌ ಸಂಗೀತ ಸಂಯೋಜಿಸಲಿದ್ದಾರೆ.

ಸುಕುಮಾರ್‌ ನಿರ್ದೇಶನದಲ್ಲಿ ರಾಮ್‌ ಚರಣ್‌ ತೇಜಾ ನಟಿಸಿದ್ದ ‘ರಂಗಸ್ಥಳಂ’ ತೆಲುಗು ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿನಿಮಾ ರಾಮ್‌ ಚರಣ್‌ ವೃತ್ತಿಬದುಕಿಗೂ ತಿರುವಾಗಿದ್ದು ಹೌದು. ಐದು ವರ್ಷಗಳ ನಂತರ ಮತ್ತೊಮ್ಮೆ ಸುಕುಮಾರ್‌ ಮತ್ತು ರಾಮ್‌ ಚರಣ್‌ ಸಿನಿಮಾ ಮಾಡಲಿದ್ದಾರೆ. ‘ರಂಗಸ್ಥಳಂ’ ನಿರ್ಮಿಸಿದ್ದ ಮೈತ್ರಿ ಮೂವೀ ಮೇಕರ್ಸ್‌ ಬ್ಯಾನರ್‌ನಲ್ಲೇ ನೂತನ ತೆಲುಗು ಸಿನಿಮಾ ತಯಾರಾಗಲಿದೆ. ತಮ್ಮ ಸಂಗೀತದಿಂದ ‘ರಂಗಸ್ಥಳಂ’ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದ ದೇವಿಶ್ರೀ ಪ್ರಸಾದ್‌ ಅವರೇ ನೂತನ ಸಿನಿಮಾದ ಸಂಗೀತ ಸಂಯೋಜಕ ಎನ್ನುವುದು ವಿಶೇಷ.

ಬ್ಲಾಕ್‌ ಬಸ್ಟರ್‌ ‘RRR’ ಸಿನಿಮಾ ರಾಮ್‌ ಚರಣ್‌ ತೇಜಾ ಅವರು ಶಂಕರ್‌ ನಿರ್ದೇಶನದ ‘ಗೇಮ್‌ ಚೇಂಜರ್‌’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾ ಮುಕ್ತಾಯವಾಗಿದ್ದು ಪ್ರಸ್ತುತ ಅವರು ಬುಚ್ಚಿ ಬಾಬು ನಿರ್ದೇಶನದ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಇದಾದ ನಂತರ ಸುಕುಮಾರ್‌ ಸಿನಿಮಾ ಸೆಟ್ಟೇರಲಿದೆ. ಇದು PAN ಇಂಡಿಯಾ ಮಟ್ಟದಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್‌ ಮತ್ತು ನಿರ್ದೇಶಕ ಸುಕುಮಾರ್‌ ಈ ಸಿನಿಮಾಗೆ ಹಣ ಹೂಡುತ್ತಿದ್ದಾರೆ. ‘ರಂಗಸ್ಥಳಂ’ ತಂಡದ ಈ ನೂತನ ಸಿನಿಮಾ ಬಗ್ಗೆ ರಾಮ್‌ ಚರಣ್‌ ತೇಜಾ ಮತ್ತು ಸುಕುಮಾರ್‌ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

LEAVE A REPLY

Connect with

Please enter your comment!
Please enter your name here