ನಟ ಪ್ರಸನ್ನಕುಮಾರ್‌ ನಿರ್ಮಾಣ, ನಿರ್ದೇಶನದ ‘ರಣಹದ್ದು’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಅವರ ಇಬ್ಬರು ಮಕ್ಕಳಾದ ಸೂರಜ್‌ ಮತ್ತು ಶಶಾಂಕ್‌ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಸಿಂಗರ್‌ ಶ್ರೀನಿವಾಸ್‌ ಸಂಗೀತ ಚಿತ್ರಕ್ಕಿದೆ.

ನಟ ಪ್ರಸನ್ನಕುಮಾರ್‌ ಕನ್ನಡ ಚಿತ್ರರಂಗದಲ್ಲಿ ‘ಜಂಗ್ಲಿ ಪ್ರಸನ್ನ’ ಎಂದೇ ಕರೆಸಿಕೊಂಡಿದ್ದಾರೆ. ಕಳೆದ ಮೂರು ದಶಕಗಳಿಂದ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಪ್ರಸನ್ನಕುಮಾರ್‌ ‘ರಣಹದ್ದು’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ನಿರ್ಮಾಪಕರೂ ಅವರೇ. ಸದ್ಯ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ತಮ್ಮ ಸಿನಿಮಾ ಮತ್ತು ನಿರ್ದೇಶನದ ಕನಸಿನ ಬಗ್ಗೆ ಮಾತನಾಡುವ ಅವರು, ‘ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ನನ್ನ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಆ ಸಮಯದಲ್ಲಿ ತುಂಬಾ ಯೋಚನೆ ಮಾಡುತ್ತಿದ್ದೆ‌. ಸ್ವಲ್ಪ ದಿನಗಳ ನಂತರ ಚಿತ್ರವೊಂದನ್ನು ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಬೇಕೆಂದು ಆಸೆಯಾಯಿತು. ಆ ಆಸೆಯನ್ನು ಮಕ್ಕಳ ಬಳಿ ಹೇಳಿಕೊಂಡೆ. ನನ್ನ ಆಸೆಗೆ ಮಕ್ಕಳು ಆಸರೆಯಾದರು’ ಎನ್ನುತ್ತಾರೆ.

ಈ ಚಿತ್ರದ ಮೂಲಕ ಅವರ ಇಬ್ಬರು ಮಕ್ಕಳಾದ ಶಶಾಂಕ್‌ ಮತ್ತು ಸೂರಜ್‌ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಒಬ್ಬರು ಹೀರೋ ಪಾತ್ರ ಮಾಡಿದರೆ, ಮತ್ತೊಬ್ಬರು ಖಳನಾಗಿ ನಟಿಸುತ್ತಿದ್ದಾರೆ. ‘ಹಣವಿಲ್ಲದ ಮನುಷ್ಯನನ್ನು ಸಮಾಜ ಹೇಗೆ ನೋಡುತ್ತದೆ’ ಎನ್ನುವ ಒಂದು ಎಳೆಯೊಂದಿಗೆ ಪ್ರಸನ್ನ ಅವರು ಸಿನಿಮಾಗೆ ಚಿತ್ರಕಥೆ ಮಾಡಿದ್ದಾರೆ. ಚಿತ್ರನಿರ್ಮಾಪಕರಾದ ಎಸ್‌ ಎ ಗೋವಿಂದರಾಜು, ಎಸ್‌ ಎ ಚಿನ್ನೇಗೌಡ, ಎಸ್‌ ಎ ಶ್ರೀನಿವಾಸ್‌ ಟೀಸರ್‌ ಲಾಂಚ್‌ ಮಾಡಿದರೆ, ನಟ ಶರಣ್‌ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರಕ್ಕೆ ಶುಭಹಾರೈಸಿದರು. ಸಿಂಗರ್‌ ಶ್ರೀನಿವಾಸ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here