‘ನಾನು ಎರಡು ವೃತ್ತಿಗಳನ್ನು ಬೆರೆಸುವುದಿಲ್ಲ. ಒಬ್ಬ ನಟನಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಾಗಿರಬೇಕು ಎಂಬುದು ಗೊತ್ತಿದೆ. ನಾನು ಇಲ್ಲಿಯವರೆಗೆ ಸ್ಕ್ರಿಪ್ಟ್‌ಗಳಲ್ಲಿ ಹುಡುಕುತ್ತಿರುವುದು ಚಲನಚಿತ್ರ ವಿಷಯಕ್ಕೆ ಮಾತ್ರ ಸಂಬಂಧಿಸಿದೆ’ ಎನ್ನುತ್ತಾರೆ ನಟ ಅಭಿಷೇಕ್‌. ಅವರ ಎರಡನೇ ಸಿನಿಮಾ ‘ಬ್ಯಾಡ್‌ ಮ್ಯಾನರ್ಸ್‌’ ಸದ್ಯ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

‘ನನ್ನ ಸಿನಿಮಾ ಪಾತ್ರಗಳ ಆಯ್ಕೆಗಳು ರಾಜಕೀಯ ಬೆಳವಣಿಗೆಗೆ ಸಂಬಂಧಪಟ್ಟಿಲ್ಲ. ನಾನು ಆಯ್ಕೆ ಮಾಡುವ ಕಂಟೆಂಟ್‌ ಚಿತ್ರರಂಗದ ವೃತ್ತಿಜೀವನದ ಅಭಿವೃದ್ಧಿಗೆ ಸಂಬಂಧಿಸಿದೆ’ ಎನ್ನುತ್ತಾರೆ ನಟ ಅಭಿಷೇಕ್‌ ಅಂಬರೀಶ್‌. ಪ್ರಸ್ತುತ ಅವರು ನಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ರಾಜಕೀಯದಿಂದ ದೂರವೇ ಇದ್ದಾರೆ. ಅವರ ಗಮನ ಸದ್ಯ ಸಿನಿಮಾರಂಗದಲ್ಲಿ ನೆಲೆ ಕಂಡುಕೊಳ್ಳುವತ್ತ ಇದೆ. ಆದರೆ ಅವರ ತಂದೆ, ನಟ ಅಂಬರೀಶ್‌ ಅವರು ಮೂರು ಬಾರಿ ಸಂಸದರಾಗಿದವರು. ತಾಯಿ, ನಟಿ ಸುಮಲತಾ ಹಾಲಿ ಸಂಸದೆ. ಹಾಗಾಗಿ ಸಹಜವಾಗಿಯೇ ಅವರ ನಿಲುವು, ಸಿನಿಮಾಗಳ ಆಯ್ಕೆಯನ್ನು ರಾಜಕೀಯ ಹಿನ್ನೆಲೆಯಲ್ಲೇ ನೋಡುವ ಸಂಭವವಿದೆ. ಆದರೆ ಅಭಿಷೇಕ್‌ ಅವರು ಸದ್ಯ ತಮ್ಮ ಗಮನವೇನಿದ್ದರೂ ಸಿನಿಮಾದೆಡೆಗಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿಷೇಕ್‌ ನಟನೆಯ ಎರಡನೇ ಚಿತ್ರ ‘ಬ್ಯಾಡ್ ಮ್ಯಾನರ್ಸ್’ ಪ್ರಸ್ತುತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎರಡು ಸಿನಿಮಾಗಳು ಚಿತ್ರೀಕರಣದಲ್ಲಿವೆ. ‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾ ಪ್ರಚಾರ ಸಂದರ್ಭದಲ್ಲಿ, ‘ಸಿನಿಮಾ ಪಾತ್ರಗಳ ಆಯ್ಕೆ ರಾಜಕೀಯದಿಂದ ನಿರ್ದೇಶಿಸಲ್ಪಟ್ಟಿವೆಯೇ?’ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಅವರು ಇಲ್ಲ ಎಂದೇ ಸ್ಪಷ್ಟವಾಗಿ ಹೇಳಿದ್ದಾರೆ. ‘ನಾನು ಎರಡು ವೃತ್ತಿಗಳನ್ನು ಬೆರೆಸುವುದಿಲ್ಲ. ಒಬ್ಬ ನಟನಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಾಗಿರಬೇಕು ಎಂಬುದು ಗೊತ್ತಿದೆ. ನಾನು ಇಲ್ಲಿಯವರೆಗೆ ಸ್ಕ್ರಿಪ್ಟ್‌ಗಳಲ್ಲಿ ಹುಡುಕುತ್ತಿರುವುದು ಚಲನಚಿತ್ರ ವಿಷಯಕ್ಕೆ ಮಾತ್ರ ಸಂಬಂಧಿಸಿದೆ. ಇದು ನನ್ನ ಮತ್ತು ನನ್ನ ತಾಯಿಯ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಖಂಡಿತ ನಾನು ಕಂಟೆಂಟ್‌ ನೋಡುವುದಿಲ್ಲ. ನನ್ನ ತಾಯಿ ಸುಮಲತಾ ಅವರು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಇದು ಒಂದು ರೀತಿ ಅವರನ್ನು ಗೌರವಿಸುವ ವಿಧಾನವೂ ಹೌದು’ ಎಂದಿದ್ದಾರೆ ಅಂಬರೀಶ್‌.

ಅಭಿಷೇಕ್‌ ನಟನೆಯ ‘ಬ್ಯಾಡ್ ಮ್ಯಾನರ್ಸ್’ ನವೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಸೂರಿ ನಿರ್ದೇಶನದ ಚಿತ್ರವು ಪ್ರೇಕ್ಷಕರ ನಿರೀಕ್ಷೆ ತಲುಪಲಿಲ್ಲ ಎನ್ನಲಾಗುತ್ತಿದೆ. ಮೊದಲ ಚಿತ್ರಕ್ಕೆ ಹೋಲಿಸಿದಲ್ಲಿ ಅಭಿಷೇಕ್‌ ನಟನೆಯಲ್ಲಿ ಪಳಗಿದ್ದಾರೆ ಎನ್ನುವ ಮೆಚ್ಚುಗೆಯೂ ಸಿಕ್ಕಿದೆ. ಸದ್ಯ ಅಭಿಷೇಕ್‌ ‘ಕಾಳಿ’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ‘ಪೈಲ್ವಾನ್’ ಸಿನಿಮಾ ಖ್ಯಾತಿಯ ನಿರ್ದೇಶಕ ಮತ್ತು ಛಾಯಾಗ್ರಾಹಕ ಎಸ್ ಕೃಷ್ಣ ನಿರ್ದೇಶನದ ಚಿತ್ರವಿದು. ಕಾವೇರಿ ನೀರಿನ ಆಂದೋಲನದ ಹಿನ್ನೆಲೆಯಲ್ಲಿ ಕರ್ನಾಟಕದ ಹುಡುಗ ಮತ್ತು ತಮಿಳುನಾಡಿನ ಹುಡುಗಿಯ ನಡುವಿನ ಪ್ರೇಮಕಥೆಯನ್ನು ಚಿತ್ರದಲ್ಲಿ ಹೇಳಲಿದ್ದಾರೆ ಕೃಷ್ಣ. ಇದಾದ ನಂತರ ಯಶಸ್ವೀ ‘ಅಯೋಗ್ಯ’ ಸಿನಿಮಾದ ಚಿತ್ರನಿರ್ದೇಶಕ ಮಹೇಶ್‌ ಅವರೊಂದಿಗೆ ಹೆಸರಿಡದ ಚಿತ್ರವೊಂದರಲ್ಲಿ ಅಭಿಷೇಕ್‌ ನಟಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here