ಸಚಿನ್‌ ಶೆಟ್ಟಿ ನಿರ್ದೇಶನದ ‘ವಸಂತಕಾಲದ ಹೂವುಗಳು’ ಚಿತ್ರವನ್ನು ನಟ ಧ್ರುವ ಸರ್ಜಾ ಪ್ರಸೆಂಟ್‌ ಮಾಡುತ್ತಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ನೆರವಾಗುತ್ತಿದ್ದಾರೆ. ಸಚಿನ್ ರಾಠೋಡ್ ಮತ್ತು ರಾಧಾ ಭಗವತಿ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಸಂಪೂರ್ಣ ಬಿಜಾಪುರದಲ್ಲಿ ಚಿತ್ರೀಕರಣಗೊಂಡಿದೆ.

‘ಇದು ಸಣ್ಣ ತಂಡವೊಂದು ಶ್ರದ್ಧೆಯಿಂದ ಬರಿ ಕತೆಯನ್ನಷ್ಟೇ ನಂಬಿ ಮಾಡಿರುವ ಒಂದು ಅಚ್ಚುಕಟ್ಟಾದ ಚಿತ್ರ. ವಿಭಿನ್ನ ಕಂಟೆಂಟ್‌ನೊಂದಿಗೆ ಬರುತ್ತಿರುವ ಹೊಸಬರ ಚಿತ್ರಗಳಿಗೆ ಉತ್ತೇಜನ ಕೊಡುವುದು ಈ ಹೊತ್ತಿನ ಅಗತ್ಯ ಎಂದು ನನಗನಿಸುತ್ತದೆ. ಹೀಗಾಗಿ ಈ ಉತ್ಸಾಹಿ ಯುವ ತಂಡಕ್ಕೆ, ಮುಖ್ಯವಾಗಿ ಒಂದು ಉತ್ತಮ ಚಿತ್ರಕ್ಕೆ ಬೆಂಬಲ ನೀಡುವ ಸಲುವಾಗಿ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ’ ಎನ್ನುತ್ತಾರೆ ನಟ ಧ್ರುವ ಸರ್ಜಾ. ಸಚಿನ್‌ ಶೆಟ್ಟಿ ನಿರ್ದೇಶನದ ಚಿತ್ರವನ್ನು ವೀಕ್ಷಿಸಿರುವ ಧ್ರುವ ಚಿತ್ರದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಈ ಚಿತ್ರವನ್ನು ಪ್ರಸೆಂಟ್‌ ಮಾಡುವುದರೊಂದಿಗೆ ಪ್ರೊಮೋಷನ್‌ಗೆ ನೆರವಾಗಿದ್ದಾರೆ ಧ್ರುವ. ‘ಉತ್ತರ ಕರ್ನಾಟಕದ ಪರಿಸರ, ಕಾಲೇಜು ದಿನಗಳು, ತರಲೆ ಫ್ರೆಂಡ್ಸ್, ಮುದ್ದಾದ ಲವ್ ಸ್ಟೋರಿಗಳು ಇದನ್ನೆಲ್ಲ ನೀವು ಈ ಚಿತ್ರದಲ್ಲಿ ನೋಡಬಹುದು. ಚಿತ್ರ ನೋಡುತ್ತಾ ನಿಮ್ಮ ಟೀನೇಜ್ ಲೈಫ್‌ಗೆ ಮತ್ತೆ ಹೋಗಿ ಆ ನೆನಪುಗಳನ್ನು ಮೆಲುಕು ಹಾಕಲಿದ್ದೀರಿ’ ಎನ್ನುತ್ತಾರವರು.

‘ವಸಂತಕಾಲದ ಹೂಗಳು’ ಎನ್ನುವ ಸುಂದರ ಹೆಸರಿನ ಈ ಚಿತ್ರದಲ್ಲಿ ಸಚಿನ್ ರಾಠೋಡ್ ಮತ್ತು ರಾಧಾ ಭಗವತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಶೋಕ ರಾಥೋಡ್‌ ಮತ್ತು ಸಿದ್ದು ರಸೂರೆ ನಿರ್ಮಾಣದ ಚಿತ್ರದ ಬಹುಪಾಲು ಚಿತ್ರೀಕರಣ ಬಿಜಾಪುರದಲ್ಲಿ ನಡೆದಿದೆ. ತಮ್ಮ ಸಿನಿಮಾ ಮತ್ತು ಬೆಂಬಲಕ್ಕೆ ನಿಂತಿರುವ ಧ್ರುವ ಸರ್ಜಾ ಬಗ್ಗೆ ಮಾತನಾಡುವ ನಿರ್ದೇಶಕ ಸಚಿನ್‌ ಶೆಟ್ಟಿ, ‘ಒಂದು ಚಿತ್ರವನ್ನು ತಯಾರಿಸುವುದು ಎಷ್ಟು ಕಷ್ಟವೋ ಅದಕ್ಕಿಂತ ಹೆಚ್ಚಿನ ಕಷ್ಟ ಜನರಿಗೆ ಆ ಚಿತ್ರವನ್ನು ತಲುಪಿಸುವುದರಲ್ಲಿದೆ. ಈ ನಿಟ್ಟಿನಲ್ಲಿ ನಾವು ಚಿತ್ರವನ್ನು ಪ್ರೆಸೆಂಟ್ ಮಾಡಲು ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿದೆವು. ಚಿತ್ರದ ಕಂಟೆಂಟ್ ಮೆಚ್ಚಿ ಅವರು ಚಿತ್ರವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದರು. ಇದು ನಮ್ಮ ಇಡೀ ತಂಡಕ್ಕೆ ಹೊಸ ಹುಮ್ಮಸ್ಸು ತಂದಿದೆ. ಇದೇ ಉತ್ಸಾಹದಲ್ಲಿ ನವೆಂಬರ್ 10ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here