ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಯಾವುದೇ ಎಲಿಮಿನೇಷನ್‌ ಆಗಿಲ್ಲ. ಆದರೆ ಸ್ಪರ್ಧಿ ವರ್ತೂರು ಸಂತೋಷ್‌ ಅವರು ತಾವಾಗಿಯೇ ಮನೆಯಿಂದ ಹೊರನಡೆಯುವುದಾಗಿ ಹೇಳಿದರು. ನಿರೂಪಕ ಸುದೀಪ್‌ ಅವರ ನಿರ್ಧಾರಕ್ಕೆ ಸಮ್ಮತಿ ಸೂಚಿಸಲಿಲ್ಲ. ಈ ಮಧ್ಯೆ ನಟಿ ಸುಷ್ಮಾ ಕೆ ರಾವ್‌ ಮನೆಯೊಳಗೆ ಬಂದಿದ್ದಾರೆ.

‘ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಶೋನಿಂದ ಹೊರಗೆ ಹೋಗಲು ಬಯಸುತ್ತೇನೆ’ ಎಂದಿದ್ದರು ವರ್ತೂರು ಸಂತೋಷ್‌. ಈ ಮೂಲಕ ವಾರದ ವೀಕೆಂಡ್ ಎಪಿಸೋಡ್‌ನ ಎಲಿಮಿನೇಷನ್ ಟೈಮಲ್ಲಿ ವರ್ತೂರು ಸಂತೋಷ್, ಸುದೀಪ್‌ ಹಾಗೂ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ, ತಮಗೆ ಓಟ್ ಹಾಕಿದ ಹದಿಮೂರು ಲಕ್ಷಕ್ಕಿಂತ ಅಧಿಕ ಜನರಿಗೆ ಬಿಗ್ ಶಾಕ್ ನೀಡಿದ್ದರು. ಸುದೀಪ್‌ ಅವರು ಕೂಡ, ‘ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ’ ಎಂದು ಎಚ್ಚರಿಸಿದರು. ಕೊನೆಯಲ್ಲಿ, ‘ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ ನನಗಂತೂ ಡಿಸಪಾಯಿಂಟ್ ಆಗಿದೆ’ ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೊರನಡೆದರು.

ಈಗ ವರ್ತೂರು ಸಂತೋಷ್ ಅವರನ್ನು ಮನೆಯೊಳಗೆ ಉಳಿದುಕೊಳ್ಳುವಂತೆ ಮನವೊಲಿಸಲು ಮನೆಯ ಸದಸ್ಯರೆಲ್ಲರೂ ಪ್ರಯತ್ನಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಬಿಗ್‌ಬಾಸ್‌ ಮನೆಗೆ ಮತ್ತೊಬ್ಬರು ಗೆಸ್ಟ್ ಎಂಟ್ರಿ ಕೊಟ್ಟಿದ್ದಾರೆ! ಬಿಗ್‌ಬಾಸ್ ಮನೆಯ ಬಾಗಿಲು ತೆರೆಯುತ್ತಿದ್ದ ಹಾಗೆಯೇ ಕಿರುತೆರೆ ನಟಿ, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ‘ಭಾಗ್ಯಲಕ್ಷ್ಮಿ’ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ. ದೀಪಾವಳಿ ಸಂಭ್ರಮದ ಭಾಗವಾಗಿ ಸುಷ್ಮಾ ಮನೆಯೊಳಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಸುಷ್ಮಾ ಕೂಡ ಮನೆಯೊಳಗೆ ಇರುವಂತೆ ವರ್ತೂರು ಸಂತೋಷ್‌ ಅವರ ಮನವೊಲಿಸುತ್ತಿದ್ದಾರೆ. ‘ನಾನು ನಿಮ್ಮ ಅಕ್ಕ ಆಗಿ ಹೇಳ್ತಿದೀನಿ. ನನ್ನಿಂದ ಆಗಲ್ಲ ಅನ್ನೋದನ್ನು ಮನಸಿಂದ ತೆಗೆದುಬಿಡಿ’ ಎಂದು ಪಕ್ಕದಲ್ಲಿ ಕುಳಿತು ಕನ್ವಿನ್ಸ್ ಮಾಡುತ್ತಿರುವ ವೀಡಿಯೋ ತುಣುಕನ್ನು JioCinema ಬಿಡುಗಡೆ ಮಾಡಿದೆ. ಸುಷ್ಮಾ ಅವರ ವಿವೇಕದ ಮಾತುಗಳಿಗೆ ವರ್ತೂರ್ ತಲೆಬಾಗುತ್ತಾರಾ? ಮನೆಯೊಳಗೇ ಉಳಿದುಕೊಳ್ಳಲು ನಿರ್ಧರಿಸುತ್ತಾರಾ? ತಮಗೆ ವೋಟ್ ಮಾಡಿದ ಮೂವತ್ನಾಲ್ಕು ಲಕ್ಷಕ್ಕಿಂತ ಅಧಿಕ ಜನರ ನಿಲುವಿಗೆ ಗೌರವ ಕೊಡುತ್ತಾರಾ ಎನ್ನುವುದನ್ನು ಕಾದುನೋಡಬೇಕು.

LEAVE A REPLY

Connect with

Please enter your comment!
Please enter your name here