‘ರಕ್ಷಾಬಂಧನ್’ ಚಿತ್ರೀಕರಣದಲ್ಲಿ ಬಾಲ್ಯವನ್ನು ನೆನಪಿಸಿಕೊಂಡು ಭಾವುಕರಾದ ಅಕ್ಷಯ್ ಕುಮಾರ್. ಚಾಂದಿನಿ ಚೌಕ್ನಲ್ಲಿ ಆನಂದ್ ರಾಯ್ ನಿರ್ದೇಶನದ ಅಕ್ಷಯ್ ಅಭಿನಯದ ಹೊಸ ಚಿತ್ರದ ಚಿತ್ರೀಕರಣ.
ಸಿನಿಮಾ ಮಾಡೋದನ್ನ ಸರ್ಕಾರಿ ನೌಕರಿ ಎನ್ನುವಂತೆ ಬಹುತೇಕ ಪ್ರತಿನಿತ್ಯ ಶೂಟಿಂಗ್ನಲ್ಲೇ ಇರುವ ಬಾಲಿವುಡ್ನ ನಟ ಯಾರು ಅಂದ್ರೆ, ಯಾರು ಬೇಕಾದರೂ ಅದು ಅಕ್ಷಯ್ ಕುಮಾರ್ ಎಂದು ಹೇಳುತ್ತಾರೆ. ಇತ್ತೀಚೆಗಷ್ಟೇ ಲಂಡನ್ನಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದ ಅಕ್ಷಯ್ ಕುಮಾರ್, ಈಗ ಆನಂದ್ ಎಲ್. ರಾಯ್ ಅವರ ‘ರಕ್ಷಾ ಬಂಧನ್’ ಚಿತ್ರದ ಮುಂದಿನ ಶೆಡ್ಯೂಲ್ ಚಿತ್ರೀಕರಣ ಆರಂಭಿಸಲು ಭಾರತಕ್ಕೆ ಮರಳಿದ್ದಾರೆ. ಈ ನಟ ಪ್ರಸ್ತುತ ದೆಹಲಿಯಲ್ಲಿದ್ದಾರೆ. ಆದರೆ ಈಗ ವಿಶೇಷ ಅಂದ್ರೆ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಹಾಕಿರುವ ಪೋಸ್ಟ್ ಒಂದು ಸದ್ದು ಮಾಡುತ್ತಿದೆ.
ತಮ್ಮ ಪೋಸ್ಟ್ನಲ್ಲಿ ಅವರು ತಮ್ಮ ಹುಟ್ಟೂರಾದ ಚಾಂದಿನಿ ಚೌಕ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದೇನೆ, ಅಲ್ಲಿನ ಚಿತ್ರೀಕರಣ ಹಳೆಯ ನೆನಪುಗಳನ್ನು ಮರಳಿ ತಂದಿತು ಎಂದು ಅವರು ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಚಾಂದಿನಿ ಚೈಕ್ನಲ್ಲಿ ತಾವು ಓಡುತ್ತಿರುವ ಒಂದು ಶಾಟ್ನ ವೀಡಿಯೊವನ್ನು ಹಂಚಿಕೊಂಡಿರುವ ಅಕ್ಷಯ್, “ರಕ್ಷಾಬಂಧನ್ ಸೆಟ್ಗಳಲ್ಲಿ ಇಂದಿನ ಬೆಳಗಿನ ಓಟವು ನನ್ನ ಜನ್ಮಸ್ಥಳವಾದ ಚಾಂದನಿ ಚೌಕ್ನ ಅನೇಕ ಹಳೆಯ ನೆನಪುಗಳನ್ನು ಮರಳಿ ತಂದಿತು. ಮತ್ತು ಸುತ್ತಮುತ್ತಲಿನ ಜನ ಚಟಪಟ ಮಾಚನಾಡುವ ಚಾಂದಿನಿ ಚೌಕ್ನ ಟ್ರೇಡ್ ಮಾರ್ಕ್ ಸದ್ದು ಕೇಳುವುದು ಎಷ್ಟು ಹಿತಕರವಾಗಿತ್ತು. ಈ ಅನುಭವ ಎಂದೂ ಹಳತಾಗುವುದಿಲ್ಲ” ಎಂದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ. ಅಂದಹಾಗೆ, ‘ರಕ್ಷಾ ಬಂಧನ್’ ಚಿತ್ರದಲ್ಲಿ ನಟಿ ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ತಂಡವು ಮುಂಬೈನಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿದೆ. ಆಗಸ್ಟ್ 11, 2022ರಂದು ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ.
![](https://kannada.mojo-360.com/wp-content/uploads/2021/10/akshay_Body-text.jpg)