ಭಾರತೀಯ ವಿದ್ಯಾಭವನ ಮತ್ತು ಸುಚಿತ್ರಾ ಫಿಲಂ ಸೊಸೈಟಿ ಸಹಯೋಗದೊಂದಿಗೆ ‘ಅನಂತ ನಾಗ್ -75 : ಬೆಳ್ಳಿ ತೆರೆ – 50’ ಕಾರ್ಯಕ್ರಮ ನಡೆಯುತ್ತಿದೆ. ಇಂದು (ಸೆಪ್ಟೆಂಬರ್‌ 13) ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ಸೆಪ್ಟೆಂಬರ್‌ 14 ಮತ್ತು 15ರಂದು ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.

ನಟ ಅನಂತ ನಾಗ್ ಅವರು 75 ವರ್ಷಗಳನ್ನು ಪೂರೈಸುತ್ತಿದ್ದು ಬೆಳ್ಳಿತೆರೆಗೆ ಬಂದು ಐವತ್ತು ವರ್ಷಗಳೂ, ಇದೇ ಸಂದರ್ಭದಲ್ಲಿ ಕಳೆದಿರುವುದು ಕಾಕತಾಳೀಯವಾದರೂ ಅರ್ಥಪೂರ್ಣವಾಗಿದೆ. ಇಂದಿಗೂ ಬಹು ಬೇಡಿಕೆಯ ನಟರಾಗಿರುವ ಅನಂತ್ ನಾಗ್ ಸದಾ ಸುದ್ದಿಯಿಂದ ದೂರವಿದ್ದು ತಮ್ಮಷ್ಟಕ್ಕೆ ತಾವು ಕರ್ತವ್ಯದಲ್ಲಿ ನಿರತರಾಗಿರುವವರು. ಇವರ ಕುರಿತ ಚಲನಚಿತ್ರೋತ್ಸವ, ವಿಚಾರ ಸಂಕಿರಣ ಮತ್ತು ಅಭಿನಂದಾನಾ ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನವು ಸುಚಿತ್ರಾ ಫಿಲಂ ಸೊಸೈಟಿಯ ಸಹಕಾರದೊಂದಿಗೆ ಅಯೋಜಿಸಿದೆ. ಭಾರತೀಯ ವಿದ್ಯಾ ಭವನದ ಹಳೆಯ ವಿದ್ಯಾರ್ಥಿಯಾಗಿರುವ ಡಾ ಅನಂತ ನಾಗ್ ತಾವು ಓದಿದ ಸಂಸ್ಥೆಯ ಮೇಲಿನ ಗೌರವದಿಂದ ಈ ಕಾರ್ಯಕ್ರಮ ಒಪ್ಪಿಕೊಂಡಿದ್ದಾರೆ.

ಸೆಪ್ಟೆಂಬರ್‌ 13, 14 ಮತ್ತು 15ರ ಬುಧವಾರ, ಗುರುವಾರ ಮತ್ತು ಶುಕ್ರವಾರಗಳಂದು ಈ ಕಾರ್ಯಕ್ರಮ ನಡೆಯಲಿದೆ. ಸೆಪ್ಟಂಬರ್ 13ರಂದು ಭಾರತೀಯ ವಿದ್ಯಾಭವನದ ಕೆ ಆರ್ ಜೆ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮವು ನೆರವೇರಲಿದ್ದು ಸುಚಿತ್ರ ಫಿಲಂ ಅಂಡ್ ಕಲ್ಚರಲ್ ಅಕಾಡಮಿಯ ಅಧ್ಯಕ್ಷರಾದ ಪ್ರಕಾಶ ಬೆಳವಾಡಿ ಮತ್ತು ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್ ಎನ್ ಸುರೇಶ್ ಮೂರು ದಿನಗಳ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಅಂದು ಬೆಳಗಿನ ಹನ್ನೊಂದು ಗಂಟೆಗೆ ಅನಂತ ನಾಗ್ ಅವರ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಕರ್ನಾಟಕ ಮಾಧ್ಯಮ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷರಾದ ಸದಾಶಿವ ಶೆಣ್ಯೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸುಂದರ ರಾಜ್, ಖ್ಯಾತ ನಟ ಶ್ರೀ ರಮೇಶ್ ಭಟ್ ಅವರು ಅನಂತ ನಾಗ್ ಅವರ ಕೊಡುಗೆಗಳ ಕುರಿತ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಸುಚಿತ್ರಾ ಫಿಲಂ ಸೊಸೈಟಿಯ ಅಧ್ಯಕ್ಷರಾದ ಎನ್ ನರಹರಿ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸೆಪ್ಟಂಬರ್ 13, 14 ಮತ್ತು 15ರಂದು ಮೂರೂ ದಿನವೂ ಭಾರತೀಯ ವಿದ್ಯಾ ಭವನ ಮತ್ತು ಸುಚಿತ್ರ ಫಿಲಂ ಸೊಸೈಟಿ ಎರಡೂ ಕಡೆಯಲ್ಲಿ ಅನಂತ್ ನಾಗ್ ಅವರು ಅಭಿನಯಿಸಿದ ಚಿತ್ರಗಳ ಉತ್ಸವ ನಡೆಯಲಿದೆ. ಸೆಪ್ಟಂಬರ್ 15ರ ಗುರುವಾರ ಸಂಜೆ 4 ಗಂಟೆಗೆ ಭಾರತೀಯ ವಿದ್ಯಾ ಭವನದ ಇ ಎಸ್ ವಿ ಹಾಲ್‌ನಲ್ಲಿ ಸ್ಮಿತಾ ಕಾರ್ತಿಕ್ ಮತ್ತು ತಂಡದವರಿಂದ ಅನಂತ್ ನಾಗ್ ಅಭಿನಯಿಸಿದ ಆಯ್ದ ಚಿತ್ರಗೀತೆಗಳ ಕಾರ್ಯಕ್ರಮವಿದ್ದು ನಂತರ ಅನಂತನಾಗ್‌ ಅವರ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ ಮ ಹರೀಶ್ ಅವರು ಅಧ್ಯಕ್ಷತೆ ವಹಿಸಲಿದ್ದು ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಮುಖ್ಯ ಅತಿಥಿಗಳಾಗಿರುತ್ತಾರೆ. ಭಾರತೀಯ ವಿದ್ಯಾ ಭವನದ ಉಪಾಧ್ಯಕ್ಷರು ಮತ್ತು ಯುನೆಸ್ಕೋ ಮಾಜಿ ರಾಯಭಾರಿಗಳೂ ಆದ ಚಿರಂಜೀವಿ ಸಿಂಗ್‌ ಈ ಸನ್ಮಾನ ಕಾರ್ಯಕ್ರಮ ನಡೆಸಿಕೊಡಲಿದ್ದು ಭಾರತೀಯ ವಿದ್ಯಾ ಭವನದ ಮಾಧ್ಯಮ ಭಾರತಿ ನಿರ್ದೇಶಕರಾದ ಎನ್ ಎಸ್ ಶ್ರೀಧರ ಮೂರ್ತಿಯವರು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಬಹುನಿರೀಕ್ಷಿತ ಅನಂತ ನಾಗ್ ಅವರ ಮಾತುಗಳೂ ಇರುತ್ತವೆ.

LEAVE A REPLY

Connect with

Please enter your comment!
Please enter your name here