ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಪುನೀತ್‌ ರಾಜಕುಮಾರ್‌ ಅಗಲಿ ಈ ಹೊತ್ತಿಗೆ ಮೂರೂವರೆ ತಿಂಗಳು. ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಅವರು ಅಪ್ಪು ಸಿನಿಮಾ, ಬದುಕಿನ ಕುರಿತು ‘ನೀನೇ ರಾಜಕುಮಾರ’ ಕೃತಿ ರಚಿಸಿದ್ದಾರೆ. 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, 34 ಅಧ್ಯಾಯಗಳನ್ನು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ.

“ಪುಸ್ತಕ ಬರೆಯುವಂತಹ ಸಾಧನೆ ನಾನೇನು ಮಾಡಿದ್ದೇನೆ? ಬೇಡ, ನೀವು ನನ್ನ ಬಗ್ಗೆ ಕೃತಿ ರಚಿಸುವುದು ಬೇಡ” ಎಂದಿದ್ದರಂತೆ ಪುನೀತ್‌. ಹಿಂದೊಮ್ಮೆ ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಅವರು ಪುನೀತ್‌ರನ್ನು ಭೇಟಿಯಾಗಿ ಪುಸ್ತಕ ಬರೆಯುವುದಾಗಿ ಹೇಳಿದ್ದರಂತೆ. ಆಗ ಪುನೀತ್‌ ಮೇಲಿನಂತೆ ಹೇಳಿದ್ದರು. ಪಟ್ಟು ಬಿಡದ ಶರಣು ಮತ್ತೆ ಐದಾರು ಬಾರಿ ಅಪ್ಪುರನ್ನು ಈ ಬಗ್ಗೆ ಸಂಪರ್ಕಿಸಲು ಯತ್ನಿಸಿದಾಗ ಬೇಕೆಂದೇ ಪುನೀತ್‌ ರಾಜಕುಮಾರ್‌ ಇವರ ಕರೆ ಸ್ವೀಕರಿಸಿಲ್ಲ. ಅಪ್ಪು ಅಗಲಿಕೆಯ ತಿಂಗಳುಗಳ ನಂತರ ಶರಣು ಪುಸ್ತಕ ಸಿದ್ಧಪಡಿಸಿದ್ದಾರೆ. ಸದ್ಯದಲ್ಲೇ ಕೃತಿ ಬಡುಗಡೆಯಾಗಲಿದೆ.

‌ಈ ಕೃತಿ ರಚನೆಗೆ ಸಂಬಂಧಿಸಿಂತೆ ಶರಣು ಹುಲ್ಲೂರು ಹೇಳುವುದು ಹೀಗೆ –

“ಸಿನಿಮಾರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ.ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು ಬಲ್ಲೆ. ಸ್ಟುಡಿಯೋದಲ್ಲಿ ಕೂತ ನಿರೂಪಕ – ನಿರೂಪಕಿಯರು ಅಳುತ್ತಲೇ ಸುದ್ದಿ ಓದಿದ್ದಾರೆ. ವರದಿಗಾರರು ಭಾವುಕರಾಗಿಯೇ ವರದಿ ಮಾಡಿದ್ದಾರೆ. ಇದಕ್ಕೆ ಕಾರಣ ಅಪ್ಪು ಅವರು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ.

ಯಾವತ್ತೂ ಅವರು ವರದಿಗಾರರ ಜತೆ ಮುನಿಸಿಕೊಂಡವರಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೂ, ವಾಪಸ್ಸು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲೇ ಅವರು ನಮ್ಮವರೇ ಆಗಿದ್ದರು. ಈ ಪ್ರೀತಿ ಮತ್ತೆಂದೂ ಸಿಗದು. ಹಾಗಾಗಿ, ಅವರ ಜತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. ಇದೊಂದು ರೀತಿಯಲ್ಲಿ ಸಿನಿಮಾ ಪತ್ರಕರ್ತರ ಪರವಾಗಿ ನಾನು ಸಲ್ಲಿಸುತ್ತಿರುವ ಪುಸ್ತಕದ ಗೌರವ.

ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟಂಬರ್ 2020. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರು. ಸುದೀಪ್ ಅವರ ಹುಟ್ಟುಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ ಮಾಡಿ’ ಅಂದರು. ‘ಅಯ್ಯೋ ನನ್ನ ಪುಸ್ತಕವಾ? ಬೇಡ’ ಎಂದವರು, ಎಲ್ಲರ ಒತ್ತಾಯಕ್ಕೆ ಮಣಿದು ಅಪ್ಪು ಸರ್ ಒಪ್ಪಿಕೊಂಡರು. ಅಲ್ಲಿಂದ ನನ್ನ ಕೆಲಸವನ್ನು ಶುರು ಮಾಡಿದೆ. ನಂತರ ಅವರ ಭೇಟಿಗಾಗಿ ಹಲವು ಬಾರಿ ಕರೆ ಮಾಡಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆರು ತಿಂಗಳ ನಂತರ ಶೆರಟಾನ್‌ ಹೋಟೆಲ್ ನಲ್ಲಿ ನಮ್ಮಿಬ್ಬರ ಭೇಟಿ ಆಯಿತು. ‘ನಾನು ಬೇಕೆಂದೇ ನಿಮ್ಮ ಕರೆ ಸ್ವೀಕರಿಸಲಿಲ್ಲ. ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ. ಒಂದ್ ಸಲ ನೀವೇ ಯೋಚ್ನೆ ಮಾಡಿ’ ಎಂದು ನಿರಾಸೆ ಮಾಡಿಬಿಟ್ಟರು. ಆದರೂ, ನಾನು ನನ್ನ ಹಠ ಬಿಡಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಲೇ ಇದ್ದೆ. ದಿಢೀರ್ ಆಗಿ ಅಪ್ಪು ಹೊರಟೇ ಬಿಟ್ಟರು.

ಪುನೀತ್ ರಾಜ್ ಕುಮಾರ್ ಅವರು ನಿಧನದ ನಂತರ ಅವರ ಸಾಧನೆಗಳ ಪಟ್ಟಿ ಒಂದೊಂದೇ ಬರತೊಡಗಿದವು. ನಾಡೇ ಕಣ್ಣೀರಿಟ್ಟಿತು. ಆಗ ಮತ್ತೆ ನನಗೆ ನೆನಪಾಗಿದ್ದು ಅಪ್ಪು ಹೇಳಿದ ಮಾತು, ‘ಅಪ್ಪಾಜಿ ಮತ್ತು ಅಮ್ಮನ ಜತೆ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುವುದು. ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದರು. ನೀವು ಅಪ್ಪ ಅಮ್ಮನಷ್ಟೇ ಸಾಧನೆಯ ಹಾದಿಯಲ್ಲಿದ್ದೀರಿ ಎಂದು ತೋರಿಸಿದರು. ಮತ್ತೆ ನನ್ನ ಕನಸಿಗೆ ಮರುಜೀವ ಬಂತು. ಅಷ್ಟರಲ್ಲಿ ಸಾವಣ್ಣ ಪ್ರಕಾಶನದ ಜಮೀಲ್‌ ಅವರು ಪುಸ್ತಕದ ಬಗ್ಗೆ ವಿಚಾರಿಸಿದರು. ಮತ್ತೆ ಎಲ್ಲಾ ಸಂಗತಿಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಿದೆ. ಈ ಹಿಂದೆ ನನ್ನ ‘ಅಂಬರೀಶ್’ ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನವೇ ‘ನಾನೇ ರಾಜಕುಮಾರ’ ಪುಸ್ತಕವನ್ನು ಪ್ರಕಟಿಸಿದೆ. ಹಿರಿಯ ಪತ್ರಕರ್ತರಾದ ಮುರಳೀಧರ್ ಖಜಾನೆ ಅವರು ಮುನ್ನುಡಿ ಬರೆದಿದ್ದಾರೆ. ಬರಹಗಾರ ಜೋಗಿ ಅವರು ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ”

ಪುಸ್ತಕದ ಕುರಿತು | ಪುನೀತ್ ರಾಜಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದಾಗಿದೆ. ಹಾಗಂತ ಬರೀ ಇದರಲ್ಲಿ ಪುನೀತ್ ಜೀವನ ಕುರಿತಾದ ವಿಷಯಗಳು ಮಾತ್ರವಿಲ್ಲ. ಅವರ ಬದುಕನ್ನು ಓದುತ್ತಾ, ಅದರೊಂದಿಗೆ ಸಿನಿಮಾ ಇತಿಹಾಸವನ್ನು ಓದಿಸಿಕೊಂಡು ಹೋಗುವಂತ ಗುಣವನ್ನು ಇದು ಹೊಂದಿದೆ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಪುಸ್ತಕ ಒಳಗೊಂಡಿದೆ. ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ‘ಅರಸು’ ಚಿತ್ರದಿಂದ ‘ಜೇಮ್ಸ್’ ಚಿತ್ರದವರೆಗಿನ ಸಮಗ್ರ ನೋಟ ಇಲ್ಲಿದೆ. ಅವರ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿವೆ. ಒಟ್ಟು 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, ಒಟ್ಟು 34 ಅಧ್ಯಾಯಗಳನ್ನು ಇದು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ.

ಪುನೀತ್‌ ರಾಜಕುಮಾರ್‌ ಅವರೊಂದಿಗೆ ‘ನೀನೇ ರಾಜಕುಮಾರ’ ಕೃತಿಯ ಕತೃ ಶರಣು ಹುಲ್ಲೂರು

LEAVE A REPLY

Connect with

Please enter your comment!
Please enter your name here