ರಜನೀಕಾಂತ್‌ ಅಭಿನಯದ ‘ತಲೈವರ್‌ 171’ ನೂತನ ತಮಿಳು ಸಿನಿಮಾದ ಖಳಪಾತ್ರದಲ್ಲಿ ದುನಿಯಾ ವಿಜಯ್‌ ನಟಿಸುವ ಸಾಧ್ಯತೆಗಳಿವೆ. ಲೋಕೇಶ್‌ ಕನಗರಾಜ್‌ ನಿರ್ದೇಶನದ ಈ ಸಿನಿಮಾಗೆ ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

‘ಜೈಲರ್’ ಸಿನಿಮಾದ ಗೆಲುವಿನ ಸಂಭ್ರಮದಲ್ಲಿರುವ ರಜಿನೀಕಾಂತ್ ಅವರು ಈಗ ತಮ್ಮ 171ನೇ ಚಿತ್ರಕ್ಕೆ ಸಜ್ಜಾಗಿದ್ದಾರೆ. ತಾತ್ಕಾಲಿಕವಾಗಿ ‘ತಲೈವರ್‌ 171’ ಎಂದು ಚಿತ್ರಕ್ಕೆ ಶೀರ್ಷಿಕೆ ನಿಗದಿಯಾಗಿದೆ. ಲೋಕೇಶ್ ಕನಗರಾಜ್ ನಿರ್ದೆಶಿಸಲಿರುವ ಈ ತಮಿಳು ಚಿತ್ರದ ಖಳಪಾತ್ರದಲ್ಲಿ ನಟ ದುನಿಯಾ ವಿಜಯ್‌ ನಟಿಸುವ ಸೂಚನೆಗಳು ಸಿಕ್ಕಿವೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ. ಇತ್ತೀಚೆಗೆ ತೆರೆಕಂಡ ಬಾಲಕೃಷ್ಣರ ‘ವೀರ ಸಿಂಹಾರೆಡ್ಡಿ’ ತೆಲುಗು ಸಿನಿಮಾದ ಖಳಪಾತ್ರದಲ್ಲಿ ದುನಿಯಾ ವಿಜಯ್‌ ನಟಿಸಿದ್ದರು. ಅವರ ಉಪಸ್ಥಿತಿ ಸಿನಿಮಾಗೆ ಕನ್ನಡ ನಾಡಿನಲ್ಲೂ ಮಾರುಕಟ್ಟೆ ತಂದುಕೊಡುತ್ತದೆ ಎನ್ನುವುದು ಚಿತ್ರತಂಡದ ಸಹಜ ಅಂದಾಜು.

ರಜನೀಕಾಂತ್‌ ಅವರ ದೊಡ್ಡ ಅಭಿಮಾನಿ ದುನಿಯಾ ವಿಜಯ್‌. ಸಿನಿಮಾ ರಂಗಕ್ಕೆ ಬರುವ ಮೊದಲು ವಿಜಯ್‌ ಅವರು ರಜಿನೀಕಾಂತ್‌ ಅವರನ್ನು ನೋಡಲೆಂದೇ ಚೆನ್ನೈ ಹೋಟೆಲೊಂದರಲ್ಲಿ ಸಪ್ಲೈಯರ್‌ ಆಗಿ ಸೇರಿಕೊಂಡಿದ್ದರಂತೆ. ಆದರೆ ಭೇಟಿ ಮಾಡುವ ಅವಕಾಶ ದೊತಿದ್ದು ‘ದುನಿಯಾ’ ಸಿನಿಮಾ ಬಿಡುಗಡೆಯಾದ ಮೇಲೆ. ‘ದುನಿಯಾ’ ಚಿತ್ರ ನೋಡಿದ ರಜನೀಕಾಂತ್‌ ಅವರು ಕರೆ ಮಾಡಿ ಭೇಟಿ ಮಾಡೋಣ ಎಂದಿದ್ದರಂತೆ. ಆದರೆ ವಿಜಯ್ ನೇರವಾಗಿ ಚೆನ್ನೈಗೆ ತೆರಳಿ ಅವರನ್ನು ಭೇಟಿಮಾಡಿದ್ದರು. ತಮ್ಮ ನಟನಾ ಬದುಕಿಗೆ ರಜನೀಕಾಂತ್‌ ಅವರೇ ಪ್ರೇರಣೆ ಎಂದು ವಿಜಯ್‌ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. Sun Pictures ‘ತಲೈವರ್‌ 171’ ಚಿತ್ರ ನಿರ್ಮಿಸುತ್ತಿದ್ದು, ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here