ಬಿಗ್‌ಬಾಸ್‌ ಸ್ಪರ್ಧಿ ವತ್ತೂರು ಸಂತೋಷ್‌ ಹುಲಿಯುಗಿರಿನ ಪೆಂಡೆಂಟ್‌ ತೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಈಗ ಸಿನಿಮಾ ನಟರಾದ ಜಗ್ಗೇಶ್‌, ದರ್ಶನ್‌, ನಿಖಿಲ್‌ ಕುಮಾರಸ್ವಾಮಿ ಹೆಸರುಗಳನ್ನು ನೆಟ್ಟಿಗರು ಪ್ರಸ್ತಾಪಿಸುತ್ತಿದ್ದಾರೆ. ಹುಲಿಯುಗುರಿನ ಸರ ತೊಟ್ಟು ಮಾತನಾಡಿದ ಜಗ್ಗೇಶ್‌ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ.

ಹುಲಿ ಉಗುರಿನ ಪೆಂಡೆಂಟ್‌ ತೊಟ್ಟಿದ್ದ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ವನ್ಯಜೀವಿ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಈಗ ಹುಲಿ ಉಗುರಿನ ಆಭರಣ ತೊಟ್ಟ ಸೆಲೆಬ್ರಿಟಿಗಳ ಫೋಟೊ, ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿವೆ. ಸಿನಿಮಾ ತಾರೆಯರಾದ ಜಗ್ಗೇಶ್‌, ದರ್ಶನ್‌, ನಿಖಿಲ್‌ ಕುಮಾರಸ್ವಾಮಿ ಅವರು ಹುಲಿ ಉಗುರಿನ ಸರ ಧರಿಸಿದ ಫೋಟೊ, ವೀಡಿಯೋಗಳು ಕಾಣಿಸುತ್ತಿವೆ. ಹುಲಿ ಉಗುರಿನ ಆಭರಣ ತೊಟ್ಟ ಸೆಲೆಬ್ರಿಟಿಗಳು, ರಾಜಕಾರಣಿಗಳ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸತೊಡಗಿದ್ದಾರೆ. ದೂರುಗಳು ಕೂಡ ದಾಖಲಾಗಿವೆ.

ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರ ಮೇಲೆ ಹುಲಿ ಉಗುರು ಧರಿಸಿರುವ ಆರೋಪ ಕೇಳಿಬಂದಿದೆ. ನಟ ಜಗ್ಗೇಶ್ ತಮ್ಮ ಕೊರಳಿನಲ್ಲಿ ಹುಲಿ ಉಗುರಿನ ಸರ ಹಾಕಿಕೊಂಡು ಮಾತನಾಡಿರುವ ವೀಡಿಯೋ ಸದ್ದು ಮಾಡುತ್ತಿದೆ. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಸ್ವತಃ ಜಗ್ಗೇಶ್‌ ಅವರೇ ತಮ್ಮ ಕೊರಳಿನಲ್ಲಿರುವುದು ನಿಜವಾದ ಹುಲಿಯ ಉಗುರಿನ ಸರ ಎಂದು ಹೇಳಿಕೊಂಡಿದ್ದಾರೆ. ಸಂದರ್ಶನದಲ್ಲಿ ನಟ ಜಗ್ಗೇಶ್, ‘ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಎಂದು ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು’ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದೇ ರೀತಿ ನಟ ದರ್ಶನ್‌, ಜೆಡಿಎಸ್‌ ಯೂಥ್‌ ವಿಂಗ್ ಅಧ್ಯಕ್ಷ, ನಟ ನಿಖಿಲ್‌ ಕುಮಾರಸ್ವಾಮಿ ಹುಲಿ ಉಗುರಿನ ಸರ ತೊಟ್ಟ ಫೋಟೋಗಳನ್ನೂ ನೆಟ್ಟಿಗರು ಹಾಕಿ ಪ್ರಶ್ನಿಸತೊಡಗಿದ್ದಾರೆ. ಅರಣ್ಯಾಧಿಕಾರಿಗಳು ಇವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ನೋಡಬೇಕು. ನಟರಷ್ಟೇ ಅಲ್ಲದೆ ಬೇರೆ ಕ್ಷೇತ್ರಗಳ ಖ್ಯಾತನಾಮರ ಮೇಲೂ ಈ ಆರೋಪ ಕೇಳಿಬರುತ್ತಿವೆ.

LEAVE A REPLY

Connect with

Please enter your comment!
Please enter your name here