ರಜನೀಕಾಂತ್‌ ಅಭಿನಯದ ಬ್ಲಾಕ್‌ಬಸ್ಟರ್‌ ‘ಜೈಲರ್‌’ ಸಿನಿಮಾದ ನಟ ವಿನಾಯಕನ್‌ ಬಂಧನಕ್ಕೊಳಗಾಗಿದ್ದಾರೆ. ಮದ್ಯಪಾನ ಮಾಡಿ ಪೊಲೀಸರ ಮೇಲೆ ಗಲಾಟೆ ಮಾಡಿದ್ದಾರೆ ಎನ್ನುವುದು ಅವರ ಮೇಲಿನ ಆರೋಪ.

ಮದ್ಯಪಾನ ಮಾಡಿ ಪೊಲೀಸ್‌ ಠಾಣೆಗೆ ಬಂದು ಗಲಾಟೆ ಮಾಡಿದ ಆರೋಪದ ಮೇಲೆ ‘ಜೈಲರ್‌’ ತಮಿಳು ಸಿನಿಮಾ ಖ್ಯಾತಿಯ ನಟ ವಿನಾಯಕನ್‌ ಅವರನ್ನು ಬಂಧಿಸಲಾಗಿದೆ. ‘ಜೈಲರ್‌’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ನಟ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಕೊಚ್ಚಿ ಪೊಲೀಸರು ವಿನಾಯಕ್‌ನನ್ನು ಅರೆಸ್ಟ್‌ ಮಾಡಿದ್ದಾರೆ. ಕೊಚ್ಚಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಿನಾಯಕನ್‌ ವಾಸಿಸುತ್ತಿದ್ದಾರೆ. ಮದ್ಯಪಾನ ಮಾಡಿ ಏರುದನಿಯಲ್ಲಿ ಮಾತನಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ನೆರೆಹೊರೆಯವರು ದೂರು ಕೊಟ್ಟಿದ್ದರು. ದೂರಿನ ಆಧಾರದ ಮೇಲೆ ಎರ್ನಾಕುಲಂ ಟೌನ್‌ ನಾರ್ಥ್‌ ಪೊಲೀಸರು ವಿನಾಯಕನ್‌ ಅವರನ್ನು ವಿಚಾರಣೆಗೆಂದು ಠಾಣೆಗೆ ಕರೆಸಿದ್ದರು. ಪೊಲೀಸ್‌ ಸ್ಟೇಷನ್‌ಗೆ ಬಂದ ವಿನಾಯಕನ್‌ ಅವರು ಅಲ್ಲಿಯೂ ಕೂಡಾ ಗಲಾಟೆ ಮಾಡಿ ಪೊಲೀಸರ ಮೇಲೆ ಏರು ಧ್ವನಿಯಲ್ಲಿ ಮಾತನಾಡಿದ ಕಾರಣ ಅವರನ್ನು ಬಂಧಿಸಲಾಗಿದೆ.

ಪೊಲೀಸರಿಂದ ಬಂಧಿಯಾಗುತ್ತಿದ್ದಂತೆ ವಿನಾಯಕ್‌ರನ್ನು ಸ್ಥಳೀಯ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ‘ಸದ್ಯಕ್ಕೆ ಅವರು ನಮ್ಮ ಅಧೀನದಲ್ಲಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ವಿನಾಯಕ್‌ ಅವರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿನಾಯಕನ್‌ ಮೂಲತಃ ಕೇರಳದವರು. ಹಲವಾರು ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿಗೆ ತೆರಕಂಡಿದ್ದ ‘ಜೈಲರ್‌’ ಸಿನಿಮಾ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ವಿನಾಯಕನ್‌ ಅವರು ‘ವರ್ಮನ್‌’ ಪಾತ್ರದಲ್ಲಿ ನಟಿಸಿದ್ದರು.

LEAVE A REPLY

Connect with

Please enter your comment!
Please enter your name here