ಕನಸಿನ ರಾಣಿ ಮಾಲಾಶ್ರೀ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದ ಸಿನಿಮಾ ‘ಮಾರಕಾಸ್ತ್ರ’. ಚಂದನವನದಲ್ಲಿ ಸಿನಿಪ್ರಿಯರ ಮನ ಗೆದ್ದಿದ್ದ ಈ ಚಿತ್ರ ಈಗ ಟಾಲಿವುಡ್‌ನಲ್ಲಿ ರಿಲೀಸ್‌ ಆಗಲಿದೆ. ತೆಲುಗಿನಲ್ಲಿ ‘ಮಾರಣಾಯುಧಂ’ ಶೀರ್ಷಿಕೆಯಡಿ ಸಿನಿಮಾ ಥಿಯೇಟರ್‌ಗೆ ಬರಲಿದೆ.

ಸಾಹಸ ಪ್ರಧಾನ ಪಾತ್ರಗಳಲ್ಲಿ ನಟಿಸಿ ಆಕ್ಷನ್‌ ಕ್ವೀನ್‌ ಎಂದೇ ಖ್ಯಾತರಾಗಿರುವ ನಟಿ ಮಾಲಾಶ್ರೀ. ಆಕ್ಷನ್‌ ಸಿನಿಮಾಗಳಿಗೆ ಹೆಸರುವಾಸಿ ಆಗಿರುವ ಅವರು ‘ಮಾರಕಾಸ್ತ್ರ’ ಹೆಸರಿನ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದರು. ಕೋಮಲ ನಟರಾಜ್ ನಿರ್ಮಿಸಿದ್ದ ಸಿನಿಮಾವನ್ನು ಗುರುಮೂರ್ತಿ ಸುನಾಮಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಕನ್ನಡಿಗರ ಮನ ಗೆದ್ದಿತ್ತು. ಈ ಚಿತ್ರ ಈಗ ತೆಲುಗಿಗೆ ‘ಮಾರಣಾಯುಧಂ’ ಶೀರ್ಷಿಕೆಯಡಿ ಡಬ್‌ ಆಗಿ ತೆರೆಕಂಡಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಅಲ್ಲಿನ ಜನರ ಮನ ಗೆದ್ದಿದೆ. ಏಪ್ರಿಲ್‌ 26ರಂದು ಕರ್ನಾಟಕದಲ್ಲಿ ಈ ಚಿತ್ರ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.‌

‘ನಮ್ಮ ‘ಮಾರಕಾಸ್ತ್ರ’ ಚಿತ್ರವನ್ನು ಕಳೆದವರ್ಷ ಬಿಡುಗಡೆ ಮಾಡಿದ್ದೆವು. ಆ ಸಮಯದಲ್ಲಿ ಭಾರತ – ಪಾಕ್ ಮ್ಯಾಚ್, ಹಬ್ಬಗಳು ಬಂದವು. ಹಾಗಾಗಿ ಅಷ್ಟು ಜನ ನಮ್ಮ ಸಿನಿಮಾ‌ ನೋಡಲು ಆಗಲಿಲ್ಲ. ಆದರೆ ಚಿತ್ರ ನೋಡಿದ ತೆಲುಗು ವಿತರಕ ವೆಂಕಟೇಶ್ ರಾವ್, ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಿ ಎಂದು ಸಲಹೆ ಕೊಟ್ಟರು. ‘ಮಾರಕಾಸ್ತ್ರ’ ಈಗ ‘ಮಾರಣಾಯುಧಂ’ ಎಂಬ ಹೆಸರಿನಿಂದ ಇದೇ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ಏ.27ರಂದು ಪೌರ ಕಾರ್ಮಿಕರು ಸೇರಿದಂತೆ ಅನೇಕ ಶ್ರಮಿಕ ವರ್ಗದವರಿಗೆ ಒಂದು ಉಚಿತ ಪ್ರದರ್ಶನದ ವ್ಯವಸ್ಥೆ ಸಹ ಮಾಡುತ್ತಿದ್ದೇವೆ’ ಎಂದು ನಿರ್ಮಾಪಕ ನಟರಾಜ್ ಮಾಹಿತಿ ನೀಡಿದರು.

‘ಚಿತ್ರವನ್ನು ಬಿಡುಗಡೆ ಮಾಡಿದಾಗ ಚಿತ್ರದ ಅವಧಿ ಸ್ವಲ್ಪ ಹೆಚ್ಚಿದೆ ಎಂದಿದ್ದರು. ಈಗ 26 ನಿಮಿಷ ಕಡಿಮೆ ಮಾಡಿದ್ದೇವೆ. ಮಾಲಾಶ್ರೀ, ಆನಂದ್ ಆರ್ಯ, ಹರ್ಷಿಕಾ ಪೂಣಚ್ಚ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ನಿರ್ದೇಶಕ ಗುರುಮೂರ್ತಿ ಸುನಾಮಿ ತಿಳಿಸಿದರು. ‘ನಾನು ಮೊದಲು ‘ಮಾರಕಾಸ್ತ್ರ’ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ. ಆನಂತರ ನಿರ್ದೇಶಕರು ಕಥೆ ಹೇಳಿದ ರೀತಿ ಇಷ್ಟವಾಯಿತು. ಅದರಲ್ಲೂ ನಿರ್ದೇಶಕರಿಗೆ ಕಾಲಿನ ಸಮಸ್ಯೆಯಿದೆ. ಅಂತಹುದರಲ್ಲೂ ಅವರಿಗಿರುವ ಸಿನಿಮಾ ಪ್ರೀತಿ ಕಂಡು ಖುಷಿಯಾಯಿತು. ತೆಲುಗಿನ ಜನರು ನನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಇದೇ ಶುಕ್ರವಾರ ಕರ್ನಾಟಕದಲ್ಲೂ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರ ನೋಡಿ’ ಎಂದು ನಟಿ ಮಾಲಾಶ್ರೀ ಮನವಿ ಮಾಡಿದರು. ಚಿತ್ರದ ವಿತರಕ ಯಾದವ್, ಕಾರ್ಯಕಾರಿ ನಿರ್ಮಾಪಕ ವೆಂಕಟೇಶ್ ರಾವ್, ನಾಯಕ ಆನಂದ್ ಆರ್ಯ, ರವಿಚೇತನ್, ಶಶಿಧರ್, ಮಂಜುನಾಥ್, ಮಂಜುಳಾ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Connect with

Please enter your comment!
Please enter your name here