ಇಂಟೆನ್ಸ್‌ ಪಾತ್ರಗಳ ಮೂಲಕ ತಮ್ಮದೇ ಆದ ಗುರುತು ಮೂಡಿಸಿರುವ ನಟ ನವೀನ್‌ ಶಂಕರ್‌. ಅವರ ಮಹತ್ವಾಕಾಂಕ್ಷೆಯ ‘ಕ್ಷೇತ್ರಪತಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಿರ್ದೇಶನ ಶ್ರೀಕಾಂತ್‌ ಕಟಗಿ. ಉತ್ತರ ಕರ್ನಾಟಕ ನೆಲದ ಕತೆ ಹೇಳುವ ಒಂದೊಳ್ಳೆಯ ಸಿನಿಮಾ ಆಗಲಿದೆ ಎನ್ನುವುದನ್ನು ಟೀಸರ್‌ ಹೇಳುತ್ತದೆ.

ನೆಲದ ಕತೆಯನ್ನು ಕಮರ್ಷಿಯಲ್‌ ಚೌಕಟ್ಟಿಗೆ ಒಗ್ಗಿಸುವ ಚಿತ್ರವಾಗಲಿದೆ ‘ಕ್ಷೇತ್ರಪತಿ’ ಎಂದು ಹೇಳುತ್ತದೆ ಚಿತ್ರದ ಟೀಸರ್‌. ರೈತರು, ನೊಂದವರ ಕತೆ ಹೇಳಹೊರಟಿದ್ದಾರೆ ನಿರ್ದೇಶಕ ಶ್ರೀಕಾಂತ್‌ ಕಟಗಿ. ಮೇಕಿಂಗ್‌ನಲ್ಲಿನ ಅದ್ಧೂರಿತನ, ಪ್ರತಿಭಾವಂತ ಕಲಾವಿದರ ಬಳಗ ಇರುವ ಟೀಸರ್‌ ಸಿನಿಮಾ ಕುರಿತಂತೆ ಭರವಸೆ ಮೂಡಿಸುತ್ತದೆ. ಕಣ್ಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ನಟ ನವೀನ್‌ ಶಂಕರ್‌ ಪಾತ್ರಕ್ಕೆ ತುಂಬಾ ಸ್ಕೋಪ್‌ ಇದೆ. ಅಚ್ಯುತ್‌ ಕುಮಾರ್‌, ಅರ್ಚನಾ ಜೋಯಿಸ್‌ ಅವರಂತಹ ಉತ್ತಮ ಕಲಾವಿದರ ಪಾತ್ರಗಳೂ ಟೀಸರ್‌ನಲ್ಲಿ ಪರಿಚಯವಾಗಿವೆ. ‘ಗುಲ್ಟು’ ಚಿತ್ರದ ಮೂಲಕ ಪರಿಚಯವಾಗಿ ಇತ್ತೀಚಿನ ‘ಹೊಂದಿಸಿ ಬರೆಯಿರಿ’, ‘ಹೊಯ್ಸಳ’ ಚಿತ್ರಗಳಲ್ಲಿನ ಪಾತ್ರಗಳಿಗೆ ಅಪಾರ ಮೆಚ್ಚುಗೆ ಗಳಿಸಿರುವ ನವೀನ್‌ ಶಂಕರ್‌ ಅವರಿಗೆ ‘ಕ್ಷೇತ್ರಪತಿ’ ತಿರುವು ನೀಡುವ ಸಾಧ್ಯತೆಗಳು ಕಾಣಿಸುತ್ತವೆ.

‘ಕ್ಷೇತ್ರಪತಿ’ ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಉತ್ತರ ಕರ್ನಾಕಟ ಭಾಗದಲ್ಲಿ ನಡೆಯುವ ಪೊಲಿಟಿಕಲ್‌ – ಡ್ರಾಮಾ ಕತೆ. ಬಹುಪಾಲು ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ. KGF ಸಿನಿಮಾ ಖ್ಯಾತಿಯ ರವಿ ಬಸ್ರೂರು ಸಂಗೀತ, ವೈ ವಿ ಬಿ ಶಿವಸಾಗರ್‌ ಛಾಯಾಗ್ರಹಣ, ಮನು ಶೇಡ್ಗಾರ್‌ ಸಂಕಲನ ಚಿತ್ರಕ್ಕಿದೆ. ಮೊನ್ನೆಯಷ್ಟೇ ತೆರೆಕಂಡು ಹೆಸರು ಮಾಡಿದ ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ನವೀನ್‌ ಶಂಕರ್‌ ಮತ್ತು ಅರ್ಚನಾ ಜೋಯಿಸ್‌ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ‘ಕ್ಷೇತ್ರಪತಿ’ಯಲ್ಲಿ ಇವರು ಮತ್ತೊಮ್ಮೆ ಜೋಡಿಯಾಗಿದ್ದಾರೆ. ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

LEAVE A REPLY

Connect with

Please enter your comment!
Please enter your name here