ತುಳು ರಂಗಭೂಮಿಯ ಜನಪ್ರಿಯ ನಟ, ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಚೊಚ್ಚಲ ಕನ್ನಡ ಸಿನಿಮಾ ‘ಪುರುಷೋತ್ತಮನ ಪ್ರಸಂಗ’ ಟ್ರೇಲರ್‌ ಬಿಡುಗಡೆಯಾಗಿದೆ. ಅಜಯ್‌ ಮತ್ತು ರಿಷಿಕಾ ನಾಯ್ಕ್‌ ನಟನೆಯ ಸಿನಿಮಾ ಮಾರ್ಚ್‌ 1ರಂದು ತೆರೆಕಾಣಲಿದೆ.

ದೇವದಾಸ್ ಕಾಪಿಕಾಡ್ ನಿರ್ದೇಶನದ ‘ಪುರುಷೋತ್ತಮನ‌ ಪ್ರಸಂಗ’ ಟ್ರೇಲರ್ ಅನ್ನು ನಟ ಶರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಚಿತ್ರದ ಶೀರ್ಷಿಕೆಯೇ ಮನ ಮುಟ್ಟುವಂತಿದೆ. ಟ್ರೇಲರ್ ನೋಡಿದಾಗ ಅಜಯ್ ಅವರು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಅನಿಸುವುದಿಲ್ಲ.‌ ಅಷ್ಟು ಚೆನ್ನಾಗಿ ಅಜಯ್ ಅಭಿನಯಿಸಿದ್ದಾರೆ. ನಾನು ಟ್ರೇಲರ್‌ಗೆ ಧ್ವನಿ ನೀಡಿದ್ದೇನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಹಾರೈಸಿದರು ಶರಣ್‌. ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಅರ್ಜುನ್‌ ಕಾಪಿಕಾಡ್‌ ಮಾತನಾಡಿ, ‘ಇದೊಂದು ಉತ್ತಮ ಹಾಸ್ಯ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ನಮ್ಮ ತಂದೆ ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರ. ನಾನು ಸಹನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ’ ಎಂದರು.

ಚಿತ್ರದ ಹೀರೋ ಅಜಯ್‌ ಸೂಕ್ತ ತರಬೇತಿಯೊಂದಿಗೆ ಸಿನಿಮಾರಂಗಕ್ಕೆ ಬಂದಿದ್ದಾರೆ. ಟೊರಾಂಟೋ ಯೂನಿವರ್ಸಿಟಿಯಲ್ಲಿ ಅವರು ರಂಗಭೂಮಿ ಶಿಕ್ಷಣ ಪಡೆದಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಮಾತನಾಡುವ ಅವರು, ‘ನಾನು ಈ ಚಿತ್ರದಲ್ಲಿ ಪುರುಷೋತ್ತಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ. ನಾಯಕನಾಗಿ ಇದು ನನಗೆ ಮೊದಲ ಚಿತ್ರ’ ಎನ್ನುತ್ತಾರೆ. ರಿಷಿಕಾ ನಾಯ್ಕ್‌ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ರವಿಕುಮಾರ್‌ ಮತ್ತು ಶಂಶುದ್ದೀನ್‌ ನಿರ್ಮಾಣದ ಸಿನಿಮಾ ಮಾರ್ಚ್‌ 1ರಂದು ತೆರೆಕಾಣಲಿದೆ. ದುಬೈ, ಕತಾರ್‌ನಲ್ಲೂ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಿರ್ಮಾಪಕರು.

LEAVE A REPLY

Connect with

Please enter your comment!
Please enter your name here