ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ರಾಗಿಣಿ ‘Sorry’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಬಹುಕಾಲದಿಂದ ಕೆನಡಾದಲ್ಲಿ ನೆಲೆಸಿರುವ ಕನ್ನಡಿಗ ಬ್ರಹ್ಮ ಅವರು ಚಿತ್ರನಿರ್ದೇಶಿಸುತ್ತಿದ್ದು, ಇದೊಂದು ಕ್ರೈಂ – ಥ್ರಿಲ್ಲರ್ ಕಥಾನಕ ಎನ್ನಲಾಗಿದೆ.

ನಟಿ ರಾಗಿಣಿ ದ್ವಿವೇದಿ ತೆರೆಗೆ ಮರಳುತ್ತಿದ್ದಾರೆ. ಡ್ರಗ್ಸ್ ಪ್ರಕರಣದ ಸಂಕಷ್ಟಕ್ಕೆ ಸಿಲುಕಿದ್ದ ನಟಿಗೆ ಈಗ ಅವೆಲ್ಲಾ ಜಂಜಡಗಳು ದೂರವಾಗಿವೆ. ನಾಯಕಿ ಪ್ರಧಾನ ‘Sorry’ ಸಿನಿಮಾದ ವಿಶೇಷ ಪಾತ್ರದೊಂದಿಗೆ ಅವರು ವಾಪಸಾಗುತ್ತಿದ್ದಾರೆ. ಶೀರ್ಷಿಕೆಗೆ ‘ಕರ್ಮ ರಿಟರ್ನ್ಸ್‌’ ಎನ್ನುವ ಟ್ಯಾಗ್‌ ಲೈನ್‌ ಇದೆ. ಈ ಹಿಂದೆ ಯಾವ ಚಿತ್ರಗಳಲ್ಲೂ ನಿರ್ವಹಿಸದಂತಹ ವಿಶೇಷ ಪಾತ್ರ ಅವರಿಗೆ ಇಲ್ಲಿದೆಯಂತೆ. ಕಿಸ್ ಇಂಟರ್‌ನ್ಯಾಷನ್‌ ಪ್ರೊಡಕ್ಷನ್ಸ್‌ ಅಡಿ ನವೀನ್ ಕುಮಾರ್‌ ನಿರ್ಮಿಸುತ್ತಿರುವ ಚಿತ್ರವನ್ನು ಅವರ ಸ್ನೇಹಿತ ಬ್ರಹ್ಮ ನಿರ್ದೇಶಿಸುತ್ತಿದ್ದಾರೆ. ಇವರಿಬ್ಬರೂ ಬಹುವರ್ಷಗಳಿಂದ ಕೆನಡಾದಲ್ಲಿ ನೆಲೆಸಿರುವ ಕನ್ನಡಿಗರು.

ಈ ಹಿಂದೆ ಇದೇ ನಿರ್ಮಾಪಕ ಮತ್ತು ನಿರ್ದೇಶಕ ಜೋಡಿ ‘ಸಿದ್ದಿ ಸೀರೆ’ ಸಿನಿಮಾ ಮಾಡಿತ್ತು. ಸುಧಾ ನರಸಿಂಹರಾಜು ಅವರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ನ್ಯೂಯಾರ್ಕ್ ಹಾಗೂ ಟೋಕಿಯೋ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಗಳಿಸಿತ್ತು. ಈ ಬಾರಿ ಇವರು ಕ್ರೈಂ – ಥ್ರಿಲ್ಲರ್ ಕತೆಯನ್ನು ತೆರೆಗೆ ಅಳವಡಿಸುತ್ತಿದ್ದಾರೆ. ಮೊನ್ನೆ ಮಾಗಡಿ ರಸ್ತೆಯ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ನೆರವೇರಿದೆ. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದೆ. ಅಫ್ಜಲ್‌ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಅವರು ನಟಿಸುತ್ತಿದ್ದಾರೆ. ಜೇನ್‌ ಜಾರ್ಜ್ ಮತ್ತು ಜೈಕೃಪಲಾನಿ ಸಹನಿರ್ಮಾಪಕರು. ರಾಜು ಎಮ್ಮಿಗನೂರು ಸಂಗೀತ, ರಾಜೀವ್ ಗಣೇಶನ್ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಸಾಹಸನಿರ್ದೇಶನ, ಭೂಪತಿರಾಜ್ ಸಂಕಲನ, ಇಮ್ರಾನ್ ಮತ್ತು ಮನು ನೃತ್ಯ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. VJ ಮನೋಜ್, ರಣವೀರ್, ಯುಕ್ತಾ ಪೆರ್ವಿ, ಪೂಜಾ ಪಾಟೀಲ್ ಚಿತ್ರದ ಇತರೆ ಕಲಾವಿದರು.

LEAVE A REPLY

Connect with

Please enter your comment!
Please enter your name here