ನಟಿ ಸಾಯಿಪಲ್ಲವಿ ಮತ್ತು ಚಿತ್ರನಿರ್ದೇಶಕ ರಾಜಕುಮಾರ್ ಪೆರಿಯಾಸಾಮಿ ಇಬ್ಬರೂ ಇರುವ ಫೋಟೊ ಇಂಟರ್‌ನೆಟ್‌ನಲ್ಲಿ ಹರಿದಾಡಿತ್ತು. ಇದನ್ನು ಮದುವೆ ಎಂದು ವದಂತಿ ಹಬ್ಬಿಸಿದ ಫ್ಯಾನ್‌ ಪೇಜ್‌ಗಳ ವಿರುದ್ಧ ಸಾಯಿ ಪಲ್ಲವಿ ಕಿಡಿಕಿಡಿಯಾಗಿದ್ದಾರೆ.

ಶಿವಕಾರ್ತಿಕೇಯನ್‌ ಹೀರೋ ಆಗಿ ನಟಿಸುತ್ತಿರುವ ನೂತನ ತಮಿಳು ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿತು. ರಾಜಕುಮಾರ್‌ ಪೆರಿಯಾಸಾಮಿ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕಿ ಸಾಯಿಪಲ್ಲವಿ. ಚಿತ್ರದ ಮುಹೂರ್ತದಂದು ಚಿತ್ರತಂಡದ ಎಲ್ಲರೂ ಹಾಜರಿದ್ದರು. ಈ ಸಂದರ್ಭದಲ್ಲಿ ಎಲ್ಲರ ಕೊರಗಳುಗಳಲ್ಲಿ ಹೂ ಹಾರಗಳಿದ್ದವು. ಕ್ಲ್ಯಾಪ್‌ ಬೋರ್ಡ್‌ ಹಿಡಿದು ನಿಂತಿದ್ದ ನಿರ್ದೇಶಕ ಪೆರಿಯಾಸಾಮಿ ಅವರ ಪಕ್ಕದಲ್ಲಿ ನಟಿ ಸಾಯಿ ಪಲ್ಲವಿ ನಿಂತಿದ್ದರು. ಮೊನ್ನೆ ನಟಿ ಸಾಯಿ ಪಲ್ಲವಿ ಹುಟ್ಟುಹಬ್ಬವಿತ್ತು. ಅಂದು ನಿರ್ದೇಶಕ ಪೆರಿಯಾಸಾಮಿ ಟ್ವಿಟರ್‌ನಲ್ಲಿ ಈ ಫೋಟೊಗಳನ್ನು ಹಂಚಿಕೊಂಡು ನಟಿಗೆ ಶುಭಾಶಯ ಕೋರಿದ್ದರು. ಕಿಡಿಗೇಡಿಗಳು ಸಾಯಿ ಪಲ್ಲವಿ ಮತ್ತು ಪೆರಿಯಾಸಾಮಿ ಇಬ್ಬರೂ ಜೊತೆಗಿರುವ ಫೋಟೊ ಕತ್ತರಿಸಿ ಇಂಟರ್‌ನೆಟ್‌ನಲ್ಲಿ ಹಾಕಿ ಮದುವೆ ವದಂತಿ ಹಬ್ಬಿಸಿದ್ದರು.

ತಮ್ಮ ಮದುವೆ ವದಂತಿಗೆ ಕಿಡಿಕಿಡಿಯಾಗಿರುವ ಸಾಯಿ ಪಲ್ಲವಿ, ‘ನಾನು ಸಾಮಾನ್ಯವಾಗಿ ವದಂತಿಗಳಿಗೆ ಕಿವಿಗೊಡುವುದಿಲ್ಲ. ಆದರೆ ಕುಟುಂಬದವರು ಹಾಗೂ ಸ್ನೇಹಿತರ ಸಲುವಾಗಿ ಮಾತನಾಡಬೇಕಾಗುತ್ತದೆ. ಸಿನಿಮಾ ಮುಹೂರ್ತ ಸಂದರ್ಭದ ನಮ್ಮ ಫೋಟೊವನ್ನು ಕತ್ತರಿಸಿ ಉದ್ದೇಶಪೂರ್ವಕವಾಗಿ ಮದುವೆ ವದಂತಿ ಹರಡಿದ್ದಾರೆ. ನಾನು ಸದಾ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಆದರೆ ಕಿಡಿಗೇಡಿಗಳ ಇಂತಹ ಕೃತ್ಯಗಳಿಗೆ ಉತ್ತರಿಸಬೇಕಾಗಿ ಬರುವುದು ಬೇಸರ ಉಂಟುಮಾಡುತ್ತದೆ’ ಎಂದಿದ್ದಾರೆ. ನಟಿ ಸಾಯಿ ಪಲ್ಲವಿ ಮೊನ್ನೆಯಷ್ಟೇ ಮತ್ತೊಂದು ಹೊಸ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ. ಅಲ್ಲು ಅರವಿಂದ್‌ ನಿರ್ಮಾಣ, ಚಂದು ಮೊಂಡೇಟಿ ನಿರ್ದೇಶನದ ಈ ಚಿತ್ರದ ಹೀರೋ ಆಗಿ ನಾಗ ಚೈತನ್ಯ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here