ನಟ ಸುದೀಪ್‌ ಮತ್ತು ನಿರ್ಮಾಪಕ ಎನ್‌ ಕುಮಾರ್‌ ಅವರ ಮಧ್ಯೆಯ ವಿವಾದ ಬಗೆಹರಿಯುತ್ತಿಲ್ಲ. ಸುದೀಪ್‌ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಾವು ಕೋರ್ಟ್‌ಗೆ ಹೋಗಿದ್ದೇಕೆ ಎಂದು ಅವರು ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಗಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಈ ಪತ್ರದ ಪೂರ್ಣ ಪಾಠ ಇಲ್ಲಿದೆ.

ಸಿನಿಮಾ ಮಾಡುವ ಹಾಗೂ ಸಂಭಾವನೆ ವಿಚಾರಕ್ಕೆ ನಿರ್ಮಾಪಕ ಎನ್‌ ಕುಮಾರ್‌ ಮತ್ತು ನಟ ಸುದೀಪ್‌ ಅವರ ಮಧ್ಯೆಯ ವಿವಾದಕ್ಕೆ ಪರಿಹಾರ ಸಿಗುತ್ತಿಲ್ಲ. ಈ ಕುರಿತಾಗಿ ಎರಡೂ ಕಡೆಯಿಂದ ಸುದ್ದಿಗೋಷ್ಠಿಗಳು ನಡೆದಿವೆ. ನಿರ್ಮಾಪಕರಾದ ಎನ್‌ ಕುಮಾರ್‌ ಮತ್ತು ಎನ್‌ ಎಂ ಸುರೇಶ್‌ ಅವರ ವಿರುದ್ಧ ಸುದೀಪ್‌ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಸಮಸ್ಯೆ ಕೋರ್ಟ್‌ನಲ್ಲೇ ಬಗೆಹರಿಯಲಿ ಎಂದು ಅವರೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. 27 ವರ್ಷಗಳಿಂದ ಉದ್ಯಮದಲ್ಲಿ ಸಕ್ರಿಯರಾಗಿರುವ ತಾವು ಎಂದೂ ಯಾರಿಗೂ ಕೇಡು ಬಯಸಿಲ್ಲ ಎನ್ನುವುದು ಅವರ ಹೇಳಿಕೆ. ತಾವು ನ್ಯಾಯಾಲಕ್ಕೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದ್ದೇಕೆ ಎಂದು ಅವರು ಪತ್ರದ ಮುಖೇನ ವಿವರಣೆ ನೀಡಿದ್ದಾರೆ. ಪತ್ರವನ್ನು ಅವರು ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ ಅಡ್ರೆಸ್‌ ಮಾಡಿದ್ದಾರೆ. ಪತ್ರದ ಸಂಪೂರ್ಣ ಒಕ್ಕಣಿ ಇಲ್ಲಿದೆ..

ಎಲ್ಲರಿಗೂ ನಮಸ್ಕಾರ. ಕನ್ನಡ ಚಿತ್ರರಂಗ ಮಹಾನ್ ಸಾಧಕರಿಂದ ಬೆಳೆದು ನಿಂತಿದೆ. ಅವರೆಲ್ಲರ ಸಾಧನೆಯ ನಡುವೆ, ನನ್ನದೂ ಒಂದು ಅಳಿಲು ಸೇವೆ ಇದೆ. ಅಂತಹ ಮಹಾನ್ ಸಾಧಕರೆದುರು ನಾನು ತುಂಬಾ ಕಿರಿಯವ. ಈ ಕಳೆದ ೨೭ ವರ್ಷಗಳಲ್ಲಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರ, ಗಾಯಕ, ಇತ್ಯಾದಿ ಇತ್ಯಾದಿ ಆಗಿ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ ಆ ೨೭ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆಯ ಆಧಾರದಲ್ಲಿ, ಈ ಮೇಲ್ಕಂಡ ಸಂಸ್ಥೆಗಳ ಮೇಲಿನ ಗೌರವಾಧಾರದ ಮೇಲೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ ಅಷ್ಟೇ. ಸ್ಪಂದಿಸಬೇಕಾದುದ್ದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೂ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ  ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆ  ಇಂದ ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ.

ಅಲ್ಲದೆ, ಈಗಾಗಲೇ ಒಂದು ಪತ್ರದ ಮೂಲಕ ಮತ್ತು ನನ್ನ ಮನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ, ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ -ಏನ್ ಎಂ ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ. ನಾನೆಷ್ಟೇ ಪ್ರಯತ್ನ ಪಟ್ಟರೂ ಅವರ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ.ಇದೆಲ್ಲವನ್ನೂ ತಮಗೆ ವಿವರಿಸಿದ್ದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ, ನನ್ನ ವಿರುದ್ಧ ಸುಳ್ಳು, ನಿರಾಧಾರ ಆರೋಪಗಳ ಪತ್ರಿಕಾ ಗೋಷ್ಠಿ ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ, ಸಂಧಾನ ಎಂಬ ಮಹತ್ತರ ಬೆಳವಣಿಗೆಯ ಪದವೊಂದು ಹುಟ್ಟಿ ಕೊಂಡಿತು. ಸಂಧಾನವೆಂದರೇನು? ಆ ನಿರ್ಮಾಪಕರು, ಅವರೆಲ್ಲಾ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರನನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು, ನಾನು ಈ ಸುದೀರ್ಘ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲವೆಂಬ ನನ್ನ ನಿಲುವಿಗೆ ನಾನು ಬದ್ಧವಾಗುವುದು.

ಇದನ್ನು ಒಂದು ಉದಾಹರಣೆಯಾಗಿ ತಮಗೆ ಅರ್ಥ ಮಾಡಿಸುವುದಾದರೆ, ಒಂದು ದಾಂಪತ್ಯದಲ್ಲಿ ಬಿರುಕು ಬಂದರೆ, ಆ ಕುಟುಂಬದ ಸ್ನೇಹಿತರು, ಯಾರ ಪರವಾಗಿ ನಿಲ್ಲಬೇಕೆಂದು ಸಂಕಟ ಪಡುತ್ತಾರೆ. ಆ ಸಂಧಿಗ್ಧತೆಯಲ್ಲಿ ಒಬ್ಬರ ಪರ ನಿಲ್ಲುವುದು ಸಮಂಜಸವೂ ಆಗಿರುವುದಿಲ್ಲ. ಅಂತಹದ್ದೇ  ಒಂದು ಒತ್ತಡ,  ಸಂದಿಗ್ಧತೆ ಈಗ ನಮ್ಮ ಮಾತೃ ಸಂಸ್ಥೆಗಳದ್ದು. ಆ ಒತ್ತಡ, ಸಂಕಷ್ಟಕ್ಕೆ ನೀವುಗಳು ಸಿಲುಕಬಾರದೆಂದೇ ನಾನು ನ್ಯಾಯಾಲಯದ ಮೊರೆ ಹೋಗಿದ್ದು.

೨೭ ವರ್ಷಗಳ ಕಾಲ ನಾನು ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. ೮೦ ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯೇ. ಆ ನಂಬಿಕೆಯ  ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ  ೪೫ ಸಿನೆಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈ ವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟ ತನಕಲ್ಲ.

ಯಾಕೆ ನಿಮ್ಮ ಬಳಿ ಆಗ  ಬರಲಿಲ್ಲವೆಂದರೆ, ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ. ಹಲವಾರು ಕಡೆ ಬಂದಿದೆ. ನಾನವರಿಗೆ ಋಣಿ ಆಗಿದ್ದೇನೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ. ಕೆಲವರು ವದಂತಿಗಳನ್ನು ಹಬ್ಬಿಸುವುದರಲ್ಲಿ ಕಳೆದು  ಹೋಗಿದ್ದಾರೆ. ಇಂತಹ ಎಲ್ಲ ಸಂದರ್ಭಗಳು ನಡೆದಿದ್ದು ಆ ನಂಬಿಕೆ ಇಂದಲೇ. ದಾಖಲೆಗಳಿದ್ದಲ್ಲಿ ತಮ್ಮ ಬಳಿ ನಾನೇ ಬರುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ಸ್ನೇಹ, ಅನುಕಂಪ, ಪ್ರೀತಿಗೆ ತಲೆ ಬಾಗಿದ್ದೇನೆ. ಹಲವು ಬಾರಿ ನನ್ನ ದಡ್ಡತನದಿಂದ ನಾನೇ ಪಾಠ ಕಲಿತಿದ್ದೇನೆ.

ಈಗಲೂ, ಈ ವಿಷಯದಲ್ಲಿ ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದು ಚಿತ್ರರಂಗದ ಮುಂದಿನ ಭವಿತವ್ಯಕ್ಕೆ ಕೆಟ್ಟ ಉದಾಹರಣೆಗಳು ದಕ್ಕ ಬಾರದು ಎಂದು. ಸಂಪೂರ್ಣ ಸಂಭಾವನೆ ಪಡೆದು ಸಿನಿಮಾ ಮಾಡಲಿಲ್ಲವೆಂಬ ದುಷ್ಟ, ಸುಳ್ಳು ಉದಾಹರಣೆಗೆ ನಾನು ಸಿಲುಕ ಬಾರದು. ಈ ಕಾರಣಕ್ಕೆ ಬೇರೆಲ್ಲರ ವಿಷಯದಲ್ಲಿಅತ್ಯಂತ ಮಾನವೀಯವಾಗಿ, ಪ್ರೀತಿಯಿಂದ ವರ್ತಿಸುವ ನಾನು ಕಠಿಣವಾಗಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ನಿಲುವಿಗೆ ಬದ್ಧನಾಗಿದ್ದೇನೆ.

ಒಂದು ಮಾತು ನಿಮ್ಮ ಪತ್ರಿಕಾ ಘೋಷ್ಠಿಯಲ್ಲಿ ಹೊರಬಂತು. ಅದು ನನಗೆ ತೀವ್ರ ನೋವು ಉಂಟು ಮಾಡಿತು. ದುಃಖ ಉಂಟು ಮಾಡಿತು. ಶ್ರೀಯುತ ಸುರೇಶ್ ನನಗೂ ಪರಿಚಿತರು. ಎದುರಾದಾಗ ಕುಶಲ ಕ್ಷೇಮ ಮಾತನಾಡುವಷ್ಟು ಸಲಿಗೆ ಉಳ್ಳವರು. ನಿರ್ಮಾಪಕರೂ ಆದ ಅವರು, ಓರ್ವ ನಿರ್ಮಾಪಕರ ಪರ ನಿಲ್ಲಬೇಕೆಂಬ ಸೀಮಿತವಾದ ಕಾರಣಕ್ಕೆ, ಕುಮಾರ್ ಅವರು ಮೂರ್ ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ, ಸುದೀಪ್ ಹೊಣೆ ಅಂದದ್ದು, ನನಗಲ್ಲ, ಇಡೀ ಸಮಾಜಕ್ಕೆ ಕೊಟ್ಟ ಅಪಾಯಕಾರಿ ಸಂದೇಶ. ಯಾವಾಗಿನಿಂದ ಕನ್ನಡ ಚಿತ್ರರಂಗದಲ್ಲಿಈ ಕೆಟ್ಟ ಬೆಳವಣಿಗೆ ಆರಂಭವಾಯಿತು?

ದೈಹಿಕವಾಗಿ, ಮಾನಸಿಕವಾಗಿ, ಕುಮಾರ್ ಗಾಗಲಿ, ಯಾರಿಗೇ ಆಗಲಿ, ಹಲವಾರು ಸಮಸ್ಯೆಗಳು ಬರಬಹುದು. ಹಾಗೇನಾದರು ಅವರಿಗೆ ತೊಂದರೆ ಆದರೆ ಅದು ನನ್ನಿಂದ ಎಂಬ ಮಹಾಪರಾಧದ ಹೇಳಿಕೆ ನನಗೆ ತೀವ್ರ ನೋವು ತಂದಿದೆ. ನಾನು ಬದುಕಿನುದ್ದಕ್ಕೂ ಈ ನೋವನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪ್ರಜ್ಞೆ ಆಗಲಾರೆ. ಹಾಗಾಗಿ ನ್ಯಾಯಾಲಯದ ಹೋರಾಟಕ್ಕೆ ಸುರೇಶ್ರವರನ್ನು ಭಾಗಿ ಮಾಡಿದೆ. ಅವರಿಗೂ ನೋಟೀಸ್ ಕಳೆಸಿದೆ ವಿನಃ ಕೋಪ ತಾಪ ಆಕ್ರೋಶದಿಂದಲ್ಲ, ನೋವಿನಿಂದ. ಸುರೇಶ್ ಅವರ ವಿಚಾರದಲ್ಲಿ ಇನ್ನೂ ವಿವರಿಸುವುದಾದರೆ ನನ್ನ ತನಕ ಅಪರಿಚಿತರೋ , ಪರಿಚಿತರೋ, ಸಿನಿಮಾ ರಂಗದವರೋ ಅಲ್ಲವೋ, ಸಹಕಲಾವಿದರೋ, ತಂತ್ರಜ್ಞರೋ ಯಾರೇ ಬಂದು ಸಹಾಯ ಕೇಳಿದಾಗಲೂ ದೇವರು ಕೊಟ್ಟಿರುವ ಶಕ್ತಿಯಲ್ಲಿ ನನ್ನ ಕೈಲಾದಷ್ಟೂ ಸಹಾಯ ಮಾಡಿದ್ದೇನೆ.

ಯಾರದ್ದೇ ಆಗಲಿ ಜೀವನ-ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರೆತು ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ. ಎಲ್ಲ ನಿರ್ಮಾಪಕರ ಬಗ್ಗೆ ಗೌರವವಿಲ್ಲದೆ, ನಂಬಿಕೆ ಇಲ್ಲದೆ, ಇಷ್ಟರ ವರೆಗೆ ನಾನು ಚಿತ್ರರಂಗದಲ್ಲಿ ನೆಲೆನಿಂತೇನೆ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ. ನಂಗೂ ಕಣ್ಣೀರಿದೆ. ದುಃಖ ದುಮ್ಮಾನಗಳಿವೆ. ನಮ್ಮಲಿ ಯಾರಿಗೇ ತೊಂದರೆಯಾದರೂ, ಮಂಡಳಿಯೇ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿ ಹೋಣೆಗಾರ ಎನ್ನಲಾದೀತೆ? ಎಂದಾದರೂ ಹಾಗೆ ನಡೆದುಕೊಂಡಿದ್ದೇನೆಯೇ?

ಇನ್ನು, ರಾಜರಾಜೇಶ್ವರಿ ನಗರದ ಮನೆಯ ವಿಷಯದಲ್ಲಿ ಒಂದು ಸ್ಪಷ್ಟನೆ ತಮಗೆ ವಯಕ್ತಿಕವಾಗಿ ನೀಡುತ್ತೇನೆ. ನಾನು ತುಂಬಾ ಆಸ್ತಿವಂತ ಅಲ್ಲದೆ ಇರಬಹುದು. ಆದರೆ ಸಂಪಾದಿಸಿದ ಆಸ್ತಿಯಲ್ಲಿ ನನ್ನ ಬೆವರಿದೆ, ಶ್ರಮವಿದೆ. ೯೫% ಅಷ್ಟು ಬ್ಯಾಂಕ್ ಲೋನ್ ಪಡೆದು ಆ ಮನೆ ಖರೀದಿಸಿದ್ದೇನೆ. ಈ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬಲ್ಲೆ ಎಂಬ ನೈತಿಕ ಶಕ್ತಿಯ ಮೇರೆಗೆ, ಈ ಕಠಿಣ ನಿಲುವು ಹೊಂದಿದ್ದೇನೆ.

ಈ ಮೇಲ್ಕಂಡ ಕಾರಣಕ್ಕೆ ನಾನು ಎರಡು ವಿನಂತಿಗಳನ್ನು ತಮ್ಮಲ್ಲಿ ಮಾಡಿಕೊಳ್ಳುತ್ತೇನೆ. ಯಾರೇ ನಿಮ್ಮಲ್ಲಿ ದೂರಿಟ್ಟರೂ, ಯಾವುದೇ ಕಲಾವಿದರಿರ ಬಹುದು, ತಂತ್ರಜ್ಞರಿರ ಬಹುದು, ಯಾವುದೇ ವಿಭಾಗದವರಾಗಿರ ಬಹುದು, ಆ ದೂರಿನ ಕುರಿತಾದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದು ವರೆಯಿರಿ. ಮತ್ತು ಈ ಕೆಟ್ಟ ಪರಂಪರೆಗೆ ನಾಂದಿ ಹೇಳುವುದಕ್ಕೆ ನಾವು ಯಾರು ಹೊಣೆಗಾರರಾಗುವುದು ಬೇಡ.

ದಯಮಾಡಿ ತಾವು ಸಂದಿಗ್ಧತೆಗೆ ಒಳಗಾಗದೆ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ ನ್ಯಾಯಾಲಯದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿ ಇದ್ದೇನೆ. ನ್ಯಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟುಅವಕಾಶ ಕೊಡಿ ಎಂದು ಪ್ರೀತಿಯಿಂದ ಕೇಳಿಕೊಳ್ಳುತ್ತಾ.

ಎಂದೆಂದಿಗೂ ನಿಮ್ಮವ, ಕಿಚ್ಚ ಸುದೀಪ

LEAVE A REPLY

Connect with

Please enter your comment!
Please enter your name here