ಖ್ಯಾತ ತಮಿಳು ನಟ, ಚಿತ್ರನಿರ್ದೇಶಕ ಮಾರಿಮುತ್ತು (58 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮಿಳು ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಅವರು ಬೆಳ್ಳಿತೆರೆಯಲ್ಲಿ ಪ್ರಮುಖ ನಾಯಕನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಮಿಳು ನಟ, ಚಿತ್ರನಿರ್ದೇಶಕ G ಮಾರಿಮುತ್ತು (58 ವರ್ಷ) ಅವರು ಇಂದು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ. ‘ಎಥಿರ್ ನೀಚಲ್’ ಟೀವಿ ಕಾರ್ಯಕ್ರಮಕ್ಕೆ ಡಬ್ಬಿಂಗ್ ಮಾಡುವಾಗ ಕುಸಿದುಬಿದ್ದ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದರು. ಇತ್ತೀಚೆಗಷ್ಟೇ ತೆರೆಕಂಡ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದಲ್ಲಿ ವರ್ಮಾ (ವಿನಾಯಕನ್) ಸಹವರ್ತಿ ಪನ್ನೀರ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಪ್ರಸನ್ನ ಮತ್ತು ಉದಯತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಕಣ್ಣುಮ್ ಕಣ್ಣುಮ್’ (2008) ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಚಿತ್ರಕ್ಕೆ ಅವರೇ ಚಿತ್ರಕಥೆ, ಸಂಭಾಷಣೆ ರಚಿಸಿದ್ದರು.

‘Vada Chennai’ ಸೇರಿದಂತೆ ಹಲವಾರು ಚಲನಚಿತ್ರಗಳು ಮತ್ತು ಟೀವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. 1999ರಲ್ಲಿ ಅಜಿತ್ ಅವರ ‘ವಾಲಿ’ ಚಿತ್ರದಲ್ಲಿ ಪೋಷಕ ನಟರಾಗಿ, ‘ಯುದ್ಧ ಸೇ’ (2011), ‘ಕೊಡಿ’ (2016), ‘ಬೈರವಾ’ (2017), ‘ಕಡೈಕುಟ್ಟಿ ಸಿಂಗಂ’ (2018), ‘ಶಿವರಂಜಿನಿಯುಮ್ ಇನ್ನುಮ್ ಸಿಲಾ ಪೆಂಗಲುಮ್’ (2021), ಮತ್ತು ಹಿಂದಿ ಚಲನಚಿತ್ರ ‘ಅತ್ರಂಗಿ ರೇ’ (2021) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ಕಮಲ್ ಹಾಸನ್ ಅವರ ‘ಇಂಡಿಯನ್’ ಚಿತ್ರದಲ್ಲಿಯೂ ನಟಿಸಿದ್ದ ಮಾರಿಮುತ್ತು ‘ಎತಿರ್ನೀಚಲ್‌’ ಟೀವಿ ಧಾರಾವಾಹಿಯಲ್ಲಿನ ‘ಆದಿಮುತ್ತು ಗುಣಶೇಖರನ್’ ಪಾತ್ರದಿಂದಾಗಿ ಮನೆ ಮಾತಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಕಾಲಿವುಡ್‌ನ ರಜನೀಕಾಂತ್‌, ನಾಸರ್‌, ವಿಶಾಲ್‌, ಕಾರ್ತೀ, ಪೂಚಿ S ಮುರುಘನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here