‘ಪವಾಡ ಪುರುಷ ಅಲ್ಲ ನಾನು. ನಾನು ಹುಟ್ಟಿದ್ದೇ ಒಂದು ಪವಾಡ! ನಿಮಗಿನ್ನ ಗೊತ್ತಿಲ್ಲ, ಒಂಬತ್ತು ತಿಂಗಳಾಗಿ ಮೂರು ದಿನಕ್ಕೆ ನಾನು ಹುಟ್ಟಿರೋದು. ಒಂಬತ್ತು ತಿಂಗಳು ಕರೆಕ್ಟಾಗಿ ಬರತ್ತಲ್ಲಾ. ಅವತ್ತು, ಜೋರಾದ ಗುಡುಗು, ಸಿಡಿಲು, ಮಳೆ, ಗಾಳಿ…’ ಹೀಗೆ ತುಕಾಲಿ ಸಂತೋಷ್‌ ಹೇಳುತ್ತಿದ್ದಂತೆ ಸ್ಪರ್ಧಿಗಳೆಲ್ಲಾ ವಿವಿಧ ರೀತಿಯಲ್ಲಿ ತಮಾಷೆ ಮಾಡುತ್ತಾ ಸಂತೋಷ್‌ ಕಾಲೆಳೆಯತೊಡಗಿದರು.

ಬಿಗ್‌ಬಾಸ್‌ ಮನೆಯಲ್ಲಿ ತುಕಾಲಿ ಸಂತೋಷ್‌ ಎಲ್ಲರನ್ನೂ ನಗಿಸುತ್ತಾ ಓಡಾಡಿಕೊಂಡಿರುತ್ತಾರೆ. ಈ ಮಧ್ಯೆ ತುಂಬಾ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಹೇಳಿಕೊಂಡಿದ್ದಾರೆ. ಅವ್ರು ಸೀರಿಯಸ್ ಆಗಿ ಮಾತಾಡಲಿಕ್ಕೆ ಶುರುಮಾಡಿದಾಗ, ಸ್ಪರ್ಧಿಗಳೆಲ್ಲ ಕಾಮಿಡಿ ಮಾಡತೊಡಗಿದರು. ಸಂತೋಷ್‌ ತಮ್ಮ ಹುಟ್ಟಿನ ಪವಾಡದ ಕತೆಯನ್ನು ಹೇಳಿದ್ದು ಹೀಗೆ..

https://jiocinema.onelink.me/fRhd/6yz6p28o

’15-01-1990ಕ್ಕೆ ಒಬ್ಬ ಮಹಾನ್ ಸಾಧಕನ ಜನನ ಆಗತ್ತೆ’ ಸಂತೋಷ್ ಕಥೆಯ ಸಾಲಿನ ಬಗ್ಗೆಯೇ ನೀತುಗೆ ಅನುಮಾನ. ‘1990?’ ಎಂದು ಪ್ರಶ್ನಾರ್ಥಕವಾಗಿ ಕೇಳಿದರು. ಆದ್ರೆ ವಯಸ್ಸನ್ನು ಕಡಿಮೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಸಂತೋಷ್‌, ನೀತು ಅನುಮಾನದ ಕಡೆಗೆ ಗಮನಹರಿಸಲು ಸಾಧ್ಯನಾ? ಅವರು ತಮ್ಮ ಪಾಡಿಗೆ ತಾವು ಮಾತು ಮುಂದುವರಿಸಿದರು. ‘ಪವಾಡ ಪುರುಷ ಅಲ್ಲ ನಾನು. ನಾನು ಹುಟ್ಟಿದ್ದೇ ಒಂದು ಪವಾಡ! ನಿಮಗಿನ್ನ ಗೊತ್ತಿಲ್ಲ, ಒಂಬತ್ತು ತಿಂಗಳಾಗಿ ಮೂರು ದಿನಕ್ಕೆ ನಾನು ಹುಟ್ಟಿರೋದು. ಒಂಬತ್ತು ತಿಂಗಳು ಕರೆಕ್ಟಾಗಿ ಬರತ್ತಲ್ಲಾ. ಅವತ್ತು, ಜೋರಾದ ಗುಡುಗು, ಸಿಡಿಲು, ಮಳೆ, ಗಾಳಿ…’

ಇಷ್ಟು ಹೇಳುತ್ತಿದ್ದ ಹಾಗೆಯೇ ಮಧ್ಯ ಬಾಯಿ ಹಾಕಿದೋರು ವರ್ತೂರು ಸಂತೋಷ್. ‘ಈ ಭೂಮಿಗೆ ಯಾವ್ದೋ ದುಷ್ಟ ಶಕ್ತಿ ಬರ್ತಿದೆ ಅಂತ ಸೂಚನೆ’ ಎಂದ ಅವರ ಮಾತಿಗೆ ಉಳಿದವರೆಲ್ಲ ಜೋರಾಗಿ ನಕ್ಕರು. ಗೌರೀಶ ಅಕ್ಕಿ, ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ಧುರ್ಯೋಧನ ಹುಟ್ಟಬೇಕಾದರೆ ಹಿಂಗೇ ಆಗಿತ್ತಂತೆ’ ಎಂದು ಸಂತೋಷ್ ಜನ್ಮಕ್ಕೆ ಪುರಾಣಸ್ಪರ್ಶವನ್ನು ಕೊಟ್ಟುಬಿಟ್ಟರು. ತುಕಾಲಿ ಅವರಿಗೆ ಕೋಪ ಬರ್ದೇ ಇರತ್ತಾ? ಆದ್ರೂ ನಗ್ತಾನೇ ‘ನನ್ನ ಹಾಳು ಮಾಡ್ತಿದ್ದಾರೆ ಇವ್ರು’ ಎಂದು ಹೇಳಿ ತಮ್ಮ ಕಥೆಯನ್ನು ಮುಂದುವರಿಸಿದ್ರು.

‘ಜೋರಾದ ಗುಡುಗು, ಸಿಡಿಲು, ಮಳೆ ಬರ್ತಾ ಐತೆ. ರಾತ್ರಿ ಒಂಬತ್ತು ಗಂಟೆ. ಅಮ್ಮ ಬೆಳಿಗ್ಗೆ ತಿಂಡಿ ಮಾಡ್ಬೇಕಲಾ… ತರಕಾರಿ ಹಿಡ್ಕೊಂಡು ಬರ್ತಾ ಇದ್ದಾರೆ ದೇವಸ್ಥಾನದ ಹತ್ರ. ಆಗ ಯಾವ್ದೋ ಒಂದು ಶಬ್ದ’ ಎಂದು ಎರಡು ಸಾಲು ಹೇಳುವಷ್ಟರಲ್ಲಿ ನೀತು ತಲೆಗೆ ಹೊಸ ಆಲೋಚನೆ ಹೊಳೆದಿದೆ. ‘ಈ ಕಥೆಯನ್ನೇ ಸಿನಿಮಾ ಮಾಡ್ಬೋದು ನೀವು’ ಎಂದು ಗೌರೀಶ ಅವರಿಗೆ ಸಲಹೆಯನ್ನೂ ಕೊಟ್ಟುಬಿಟ್ಟರು. ಈಗ ಸಂತೋಷ್‌ ತಾಳ್ಮೆಯ ಕಟ್ಟೆ ಒಡೀತು. ‘ಯಾರಾದ್ರೂ ಬಂದು ನನ್ ತಲ್ ತಲೆಗೆ ಹೊಡ್ದುಬಿಡ್ರಪ್ಪಾ… ಹೊಡ್ದುಬಿಡಿ… ನನ್ ಲೈಫ್‌ನ ರಿಯಲ್ ಸ್ಟೋರಿ ಹೇಳ್ತಿದೀನಿ… ಸಿನಿಮಾ ಮಾಡ್ಬೇಕು ಅಂತಿದೀರಲಾ ನೀವು…’ ಎಂದು ಹುಸಿಕೋಪ ತೋರಿಸಿದರು. ಮುಂದುವರೆಸಿದ ಅವರು, ‘ಇದು ನಿಜವಾಗ್ಲೂ ನಡೆದಿದ್ದು. ನಮ್ಮೂರಲ್ಲಿ ಮಾರಮ್ಮನ ಗುಡಿ, ಆಂಜನೇಯ ಸ್ವಾಮಿ ಗುಡಿ ಇವೆ. ಈಗ ದೇವಸ್ಥಾನ ಕಟ್ತವ್ರೆ. ವೆರಿ ಪವರ್‍‌ಫುಲ್ ಆಂಜನೇಯಸ್ವಾಮಿ. ಆ ಗುಡಿ ಹತ್ರ ನಮ್ಮಮ್ಮ ತರಕಾರಿ ಬ್ಯಾಗ್ ಹಿಡ್ಕಂಡು ಬರೋವಾಗ ಒಂದು ಧ್ವನಿ ಕೇಳ್ತಂತೆ.. ನಿನ್ ಮಗ ಇಡೀ ಜಗತ್ತನ್ನೇ….’ ಸಂತೋಷ್ ಮಾತನ್ನು ತುಂಡರಿಸಿದ ಸಿರಿ, ‘ಹಾಳ್ಮಾಡ್ತಾನೆ ಅಂದ್ರಾ?’ ಎಂದು ಕೇಳಿದರು.

‘ಇಲ್ಲ. ಆಳ್ತಾನೆ ಅಂತ. ನಾನು ದೊಡ್ಡ ಇದಾಯ್ತೀನಿ ಅಂತ ಹೇಳಿದ್ದು ಅಲ್ಲಿ’ ಎಂದು ಸಮಾಧಾನದಿಂದ ತಿದ್ದಿದರು ತುಕಾಲಿ. ‘ನಿನ್ ಮಗ ಒಳ್ಳೆ ಅದ್ಭುತ ವ್ಯಕ್ತಿಯಾಗ್ತಾನೆ. ಸಾಧಕನಾಗ್ತಾನೆ. ಇಡೀ ನಾಡನ್ನು ಗೆಲ್ಲುವಂಥ ಶಕ್ತಿ ಸಿಗ್ತದೆ- ಇಷ್ಟು ಮಾತು ಆ ಗುಡುಗು ಸಿಡಿಲು ಮಳೆಯಲ್ಲಿ ಎಲ್ಲೋ ಒಂದು ಕಡೆ ಎಕೋ ಧ್ವನಿಯಲ್ಲಿ ಕೇಳಿಸಿದ್ದು’ ಸಂತೋಷ್ ಇಷ್ಟು ತನ್ಮಯನಾಗಿ ಕಥೆ ಹೇಳ್ತಿದ್ರೆ ಉಳಿದವರಿಗೆಲ್ಲ ಲಾಜಿಕ್‌ನ ಸಮಸ್ಯೆ. ‘ನೀವು ಎಲ್ಲಿದ್ರಿ ಆವಾಗ?’, ‘ನೀವು ಹುಟ್ಟೇ ಇರ್ಲಿಲ್ವಲ್ಲಾ. ನಿಮಗೆ ಹೇಗೆ ಗೊತ್ತಾಯ್ತು?’, ‘ಅಮ್ಮನತ್ರ ಛತ್ರಿ ಇರ್ಲಿಲ್ವಾ?’ – ರೋಚಕ ಪವಾಡದ ಕಥೆಯನ್ನು ಅಷ್ಟೇ ರಸವತ್ತಾಗಿ ಹೇಳುತ್ತಿರುವಾಗ ಅದನ್ನು ಮೈಮರೆತು ಕೇಳಿಸಿಕೊಳ್ಳೋದು ಬಿಟ್ಟು ಎಲ್ರೂ ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳತೊಡಗಿದರು. ತುಕಾಲಿ ಸಂತೋಷ್‌ ಅವರ ಜನ್ಮರಹಸ್ಯದ ಕತೆ JioCinemaದಲ್ಲಿ ಬಿಗ್‌ಬಾಸ್‌ ಕನ್ನಡ ನೇರಪ್ರಸಾರದಲ್ಲಿನ ‘Unseen ಕಥೆಗಳು’ ಸೆಗ್‌ಮೆಂಟ್‌ನಲ್ಲಿ ದಾಖಲಾಗಿದೆ.

LEAVE A REPLY

Connect with

Please enter your comment!
Please enter your name here