ಧನ್ವೀರ್‌ ಮತ್ತು ರೀಷ್ಮಾ ನಾಣಯ್ಯ ಅಭಿನಯದ ‘ವಾಮನ’ ಚಿತ್ರದ ಆಕ್ಷನ್‌ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ ರಿಲೀಸ್‌ ಇವೆಂಟ್‌ ಮೈಸೂರಿನಲ್ಲಿ ಆಯೋಜನೆಗೊಂಡಿತ್ತು. ಶಂಕರ್‌ ರಾಮನ್‌ ನಿರ್ದೇಶನದ ಸಿನಿಮಾ ಮುಂದಿನ ತಿಂಗಳು ಥಿಯೇಟರ್‌ಗೆ ಬರಲಿದೆ.

‘ಚಿತ್ರದಲ್ಲಿ ನನ್ನದು ಎರಡು ಶೇಡ್‌ಗಳಿರುವ ಪಾತ್ರ. ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ನಿರ್ದೇಶಕರು ಮೂಲತಃ ಒಳ್ಳೆಯ ಬರಹಗಾರರು. ಅವರೊಂದು ಎಳೆಯನ್ನು ಹೇಳಿದ್ದರು. ಬಹಳ ಇಷ್ಟವಾಗಿ, ಅದನ್ನು ಬೆಳೆಸಿ ಎಂದು ಹೇಳಿದ್ದೆ. ಆ ಎಳೆ ಚಿತ್ರವಾಗಿ, ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಗಣ್ಯರ ಸಮ್ಮುಖದಲ್ಲಿ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ’ ಎಂದರು ‘ವಾಮನ’ ಚಿತ್ರದ ಹೀರೋ ಧನ್ವೀರ್‌. ಮೈಸೂರಿನಲ್ಲಿ ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ಹರೀಶ್‌ ಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಿನಿಮಾ ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಇತರೆಡೆ ಚಿತ್ರದ ಪ್ರೊಮೋಷನ್‌ ನಡೆಸುವುದು ಚಿತ್ರತಂಡದ ಯೋಜನೆ.

ಚಿತ್ರದ ನಿರ್ದೇಶಕ ಶಂಕರ್‌ ರಾಮನ್‌ ಮಾತನಾಡಿ, ‘ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆ ಪಡೆದಿದೆ. ಇದೊಂದು ಆಕ್ಷನ್ ಚಿತ್ರ. ಚಿತ್ರದಲ್ಲಿ ಆಕ್ಷನ್ ಹೇಗಿರುತ್ತದೆ ಎಂದು ತೋರಿಸುವುದಕ್ಕೆ ಈ ಟೀಸರ್ ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ಒಟ್ಟು ನಾಲ್ಕು ಫೈಟ್ ಗಳಿದೆ. ಮೂರು ಫೈಟ್‌ಗಳಿಗೆ ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನೊಂದು ಫೈಟ್ ಕತೆಯ ಜೊತೆಗೆ ಸಾಗುತ್ತದೆ. ಈ ಫೈಟ್ ಪ್ರೇಕ್ಷಕರಿಗೆ ಬೇರೆ ತರಹದ ಅನುಭವ ಕೊಡುತ್ತದೆ ಎಂಬ ನಂಬಿಕೆ ನನಗಿದೆ. ಸಾಹಸ ದೃಶ್ಯವನ್ನು ವಿಕ್ರಮ್ ಮೋರ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಜ್ ಮತ್ತು ವಿಕ್ರಮ್ ಮೋರ್ ಜೊತೆಗೆ ಜಾಲಿ ಬಾಸ್ಟಿನ್ ಅವರ ನೆರವು ಮತ್ತು ಮಾರ್ಗದರ್ಶನವಿದೆ’ ಎಂದರು.

ದುಷ್ಟತ್ವವೇ ಸರ್ವಸ್ವ ಎನ್ನುವ ಜನರ ವಿರುದ್ಧ ವಾಮನ ಹೇಗೆ ಹೋರಾಡುತ್ತಾನೆ ಎನ್ನುವುದು ಚಿತ್ರದ ಕತೆ. ರೌಡೀಯಿಸಂ, ಭೂಗತಲೋಕ ಮತ್ತು ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಕಥೆ ಸಾಗುತ್ತಿದೆ. ಚಿತ್ರದಲ್ಲಿ ಸೆಂಟಿಮೆಂಟ್‌ ದೃಶ್ಯಗಳಿದ್ದು, ಅದ್ಭುತ ಸಂದೇಶವಿದೆ ಎನ್ನುತ್ತಾರೆ ನಿರ್ದೇಶಕರು. ‘ಚಿತ್ರದಲ್ಲಿ ನನ್ನದು ಬಹಳ ಮುದ್ದಾದ ಮತ್ತು ಅಷ್ಟೇ ಸರಳವಾದ ಪಾತ್ರ. ನನಗಂತೂ ಬಹಳ ಇಷ್ಟವಾದ ಪಾತ್ರವಿದು. ಚಿತ್ರ ನೋಡಿದ ಜನರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ.

LEAVE A REPLY

Connect with

Please enter your comment!
Please enter your name here